Headlines

ಅಡುಗೆ ಅನಿಲ ದುರುಪಯೋಗದ ಶಂಕೆ | ತಹಶೀಲ್ದಾರ್ ನೇತೃತ್ವದಲ್ಲಿ ಹೋಟೆಲ್-ಗೋದಾಮುಗಳ ತಪಾಸಣೆ

Food department officials led by Tehsildar Bharat Raj conducted a surprise inspection on hotels and warehouses in Hosanagara following complaints about irregular commercial LPG cylinder supply and illegal gas storage.

ಹೊಸನಗರ : ಅಡುಗೆ ಅನಿಲ ಪೂರೈಕೆಗೆ ಸಂಬಂಧಿಸಿದಂತೆ ಸರ್ಕಾರದ ಎಸ್ಮಾ (ESMA) ಜಾರಿಯಾದ ಹಿನ್ನೆಲೆಯಲ್ಲಿ, ಹೊಸನಗರ ಪಟ್ಟಣದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ವಿವಿಧ ಹೋಟೆಲ್‌ಗಳು ಮತ್ತು ಗೋದಾಮುಗಳ ಮೇಲೆ ದಿಢೀರ್ ದಾಳಿ ನಡೆಸಿದರು.

ತಹಶೀಲ್ದಾರ್ ಭರತ್ ರಾಜ್ ಅವರ ನೇತೃತ್ವದಲ್ಲಿ ನಡೆದ ಈ ಮಿಂಚಿನ ದಾಳಿಯಲ್ಲಿ ಪಟ್ಟಣದ ಶಬರಿ ಹೋಟೆಲ್, ನ್ಯೂ ದುರ್ಗ ಹೋಟೆಲ್, ಅಕ್ಷಯ ಹೋಟೆಲ್ ಸೇರಿದಂತೆ ಹಲವು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಯಿತು. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂಬ ದೂರುಗಳ ಹಿನ್ನೆಲೆ ಅಧಿಕಾರಿಗಳು ಅಡಗುದಾಣಗಳು ಹಾಗೂ ಸಂಗ್ರಹ ಸ್ಥಳಗಳನ್ನು ಪರಿಶೀಲಿಸಿದರು.

ಪರಿಶೀಲನೆಯ ವೇಳೆ ಅಡುಗೆ ಅನಿಲವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದೇ ಅಥವಾ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದೇ ಎಂಬುದನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿದರು. ಗ್ಯಾಸ್ ಸಿಲಿಂಡರ್‌ಗಳ ದಾಖಲೆಗಳು, ಪರವಾನಗಿ ಹಾಗೂ ಸುರಕ್ಷತಾ ಕ್ರಮಗಳನ್ನೂ ಪರಿಶೀಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಭರತ್ ರಾಜ್, “ಅಕ್ರಮವಾಗಿ ಗ್ಯಾಸ್ ಶೇಖರಣೆ ಮಾಡುವುದು ಹಾಗೂ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಕಾನೂನುಬಾಹಿರ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.

ದಾಳಿ ವೇಳೆ ತಹಶೀಲ್ದಾರ್ ಅವರಿಗೆ ತಾಲೂಕು ಪಂಚಾಯತ್ ಇಒ ನರೇಂದ್ರ ಕುಮಾರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಎನ್. ಹರೀಶ್, ಆಹಾರ ನಿರೀಕ್ಷಕ ನಾಗರಾಜ್ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಹಕರಿಸಿದರು. ಅಧಿಕಾರಿಗಳ ಈ ದಿಢೀರ್ ಕ್ರಮದಿಂದ ಪಟ್ಟಣದ ಹೋಟೆಲ್ ಮತ್ತು ವ್ಯಾಪಾರಸ್ಥರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

About The Author

Exit mobile version