POSTMANNEWS

ನೈಜ ಸುದ್ದಿ ನೇರ ಬಿತ್ತರ..

ಮಕ್ಕಳಲ್ಲಿ ಧರ್ಮಜಾಗೃತಿ ಮೂಡಿಸುವುದೇ ಭವಿಷ್ಯದ ಧರ್ಮರಕ್ಷಣೆ – ಕು. ಹಾರಿಕಾ ಮಂಜುನಾಥ್

A Hindu Sangama program was held in Ripponpete where Hindu thinker and orator Harika Manjunath called for unity beyond caste and creed and emphasized the importance of preserving Sanatana Dharma, culture, and traditions.

ರಿಪ್ಪನ್‌ಪೇಟೆ: ಜಾತಿ, ಮತ, ಪಂಥ, ಪಂಗಡಗಳ ಭೇದವನ್ನು ಮನೆಯೊಳಗೆ ಸೀಮಿತಗೊಳಿಸಿ, ಸಮಾಜದ ಹೊರಗೆ ಬಂದಾಗ ನಾವೆಲ್ಲರೂ ಹಿಂದೂ ಧರ್ಮೀಯರೆಂಬ ಒಗ್ಗಟ್ಟಿನ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಹಿಂದೂ ಧರ್ಮದ ಚಿಂತಕಿ ಹಾಗೂ ವಾಗ್ಮಿ, ಬೆಂಗಳೂರಿನ ಕು. ಹಾರಿಕಾ ಮಂಜುನಾಥ ಅಭಿಪ್ರಾಯಪಟ್ಟರು.

ಪಟ್ಟಣದ ಹಿಂದೂಪರ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಹಿಂದೂ ಸಂಗಮ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿ ಶತಶತಮಾನಗಳಿಂದ ಪರಕೀಯರ ನಿರಂತರ ದಾಳಿಗಳ ನಡುವೆಯೂ ಹಿಂದೂ ಧರ್ಮ ಜೀವಂತವಾಗಿರುವುದು ನಮ್ಮ ಪೂರ್ವಜರ ತ್ಯಾಗ ಮತ್ತು ಬಲಿದಾನಗಳ ಫಲವಾಗಿದೆ ಎಂದರು. ವೇದ, ಪುರಾಣ, ಉಪನಿಷತ್‌ಗಳು, ಆದಿ ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿ ಗ್ರಂಥ, ಬಸವಾದಿ ಶರಣರ ವಚನಗಳು, ಸಾಧು–ಸಂತರ, ಋಷಿಮುನಿಗಳ ಹಾಗೂ ದಾರ್ಶನಿಕರ ಚಿಂತನೆಗಳು ಸನಾತನ ಧರ್ಮದ ಮಹತ್ವವನ್ನು ಪೀಳಿಗೆಗಳಿಂದ ಪೀಳಿಗೆಗಳಿಗೆ ಸಾರಿವೆ ಎಂದು ಹೇಳಿದರು.

ಮಕ್ಕಳಲ್ಲಿ ಧರ್ಮದ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ. ಹಿಂದೂ ಧರ್ಮ ಗ್ರಂಥಗಳನ್ನು ಪರಿಚಯಿಸಿ, ಧರ್ಮದ ತತ್ವ–ಸಿದ್ಧಾಂತಗಳ ಸಾರವನ್ನು ತಿಳಿಸಬೇಕು. ವಾರಕ್ಕೊಮ್ಮೆಯಾದರೂ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ತೆರಳಿ ಸಂಪ್ರದಾಯ, ಆಚಾರ–ವಿಚಾರ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಎತ್ತಿ ಹಿಡಿಯಬೇಕು ಎಂದು ಸಲಹೆ ನೀಡಿದರು.

ವಿಭೂತಿ, ಕುಂಕುಮ, ಭಂಡಾರ, ಗಂಧಗಳಂತಹ ಸನಾತನ ಧರ್ಮದ ಸಂಕೇತಗಳನ್ನು ಧರಿಸುವ ಜೊತೆಗೆ ಅದರ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಕೆಲಸವೂ ಆಗಬೇಕು ಎಂದರು. ಮನೆಯಲ್ಲಿ ತಾಯಂದಿರು ಹಾಗೂ ಹೆಣ್ಣು ಮಕ್ಕಳು ಹಣೆಗೆ ಕುಂಕುಮ ಧರಿಸುವಂತೆ ಪ್ರೇರೇಪಿಸಿ ಸಂಸ್ಕಾರ ಕಲಿಸಬೇಕೆಂದು ಹೇಳಿದರು.

ಆರ್‌ಎಸ್‌ಎಸ್ ದೇಶದ ಅತ್ಯಂತ ದೊಡ್ಡ ಹಿಂದೂ ಸಂಘಟನೆಯಾಗಿದ್ದು, ಶತಮಾನಗಳಿಂದ ಧರ್ಮ ಉಳಿವಿಗಾಗಿ ಶ್ರಮಿಸುತ್ತ ಬಂದಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಶತಮಾನಗಳ ಹೋರಾಟದ ಫಲವಾಗಿದೆ. ಸನಾತನ ಹಿಂದೂ ಧರ್ಮದ ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಕನಸಾಗಬೇಕು. ದೇಶದ ಹೆಮ್ಮೆಯ ಸೈನಿಕರು ‘ಆಪರೇಷನ್ ಸಿಂಧೂರ’ದ ಮೂಲಕ ಪರಂಪರೆಯ ಸಾರವನ್ನು ಸಾಕಾರಗೊಳಿಸಿದ್ದಾರೆ. ಧರ್ಮ ರಕ್ಷಣೆಗೆ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಹಿರಿಯರು ಹಿಂದೂ ಕಾರ್ಯಕರ್ತರಿಗೆ ನೈತಿಕ ಧೈರ್ಯ ನೀಡಬೇಕು. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವೇ ಸದಾ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಹೊಸನಗರ ತಾಲೂಕ್ ಆರ್ ಎಸ್ ಎಸ್ ತಾಲೂಕ್ ಸಹ ಕಾರ್ಯವಾಹ ಕಾರ್ತಿಕ್ ಎನ್ ಮಾತನಾಡಿದರು.

ಈ ಸಂಧರ್ಭದಲ್ಲಿ ಹಿಂದೂ ಸಂಗಮದ ಹೊಸನಗರ ತಾಲೂಕ್ ಅಧ್ಯಕ್ಷ ವಿನಯ್ ಶೆಟ್ಟಿ , ಪಟ್ಟಣದ ಹಿರಿಯ ಕೃಷಿಕ ಅನಂತಕುಮಾರ್ ಜವುಳಿ ಇದ್ದರು.

ಸುಮಾ ಮಾತಾಜೀ ಸ್ವಾಗತಿಸಿದರು , ರಂಜನ್ ಮತ್ತು ಭರತ್ ನಿರೂಪಿಸಿದರು, ಮಂಜುನಾಥ್ ವಂದಿಸಿದರು.

About The Author

Exit mobile version