MLA Beluru Gopalakrishna visited the injured victims of a private bus fire caused by a short circuit, offered consolation, discussed treatment with doctors, and provided financial assistance to the affected families.
ಬಸ್ ಅಗ್ನಿ ಅವಘಡ: ಗಾಯಾಳುಗಳಿಗೆ ಸಾಂತ್ವಾನ ಹೇಳಿ ಆರ್ಥಿಕ ನೆರವು ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ
ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ‘ಶ್ರೀ ಅನ್ನಪೂರ್ಣೇಶ್ವರಿ’ ಖಾಸಗಿ ಬಸ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಚಾಲಕ ಸೇರಿದಂತೆ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಗಾಯಾಳುಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಶನಿವಾರ ಸಂಜೆ, ಬಸ್ ಚಾಲಕ ದೇವರಾಜ್ ಅವರು ಚಿಕಿತ್ಸೆ ಪಡೆಯುತ್ತಿದ್ದ ಮ್ಯಾಕ್ಸ್ ಆಸ್ಪತ್ರೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಚಾಲಕನ ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಶ್ಲಾಘಿಸಿದ ಅವರು, ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು.
ನಂತರ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿರುವ ಹೊಸನಗರ ನಿವಾಸಿ ಶ್ರೀನಿಧಿ ಎಂಬ ಯುವತಿ ಚಿಕಿತ್ಸೆ ಪಡೆಯುತ್ತಿದ್ದ ನಂಜಪ್ಪ ಆಸ್ಪತ್ರೆಗೆ ತೆರಳಿ, ಸಂಬಂಧಪಟ್ಟ ವೈದ್ಯರೊಂದಿಗೆ ಮುಂದಿನ ಚಿಕಿತ್ಸಾ ಕ್ರಮಗಳ ಕುರಿತು ಚರ್ಚಿಸಿದರು. ಯುವತಿಯ ಕುಟುಂಬಕ್ಕೆ ಧೈರ್ಯ ಮತ್ತು ಭರವಸೆ ನೀಡಿದ ಶಾಸಕರು, ಅಲ್ಲಿಯೂ ವೈಯಕ್ತಿಕ ಆರ್ಥಿಕ ನೆರವು ಒದಗಿಸಿದರು.
ಈ ಸಂದರ್ಭ ಪೋಸ್ಟ್ ಮ್ಯಾನ್ ನ್ಯೂಸ್ನೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, “ಅವಘಡದ ವೇಳೆ ಚಾಲಕ ಹಾಗೂ ಪ್ರಯಾಣಿಕರು ತೋರಿದ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಘಟನೆ ನಡೆದ ವೇಳೆ ವಿಧಾನಸಭಾ ಅಧಿವೇಶನದ ಹಿನ್ನಲೆಯಲ್ಲಿ ನಾನು ಬೆಂಗಳೂರಿನಲ್ಲಿ ಇದ್ದೆ. ವಿಷಯ ತಿಳಿದ ತಕ್ಷಣವೇ ಅಧಿಕಾರಿಗಳಿಗೆ ಹಾಗೂ ಜಿಲ್ಲಾಸ್ಪತ್ರೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ನಮ್ಮ ಆಪ್ತ ಸಹಾಯಕ ಸ್ಥಳದಲ್ಲೇ ಇದ್ದು ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ” ಎಂದು ಹೇಳಿದರು.
