ಚಿಕ್ಕಮ್ಮನ ಕುತ್ತಿಗೆ ಬಿಗಿದು ಮಾಂಗಲ್ಯ ಸರ ಕಳ್ಳತನವೆಸಗಿದ್ದ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಿದ ಪೊಲೀಸ್
ಭದ್ರಾವತಿ : ಚಿಕ್ಕಮ್ಮನ ಕೊರಳಿಗೆ ಟವಲ್ ಬಿಗಿದು ಮಾಂಗಲ್ಯ ಸರ ಕದ್ದಿದ್ದ ಆರೋಪಿಯನ್ನ ಕೇವಲ 24ಗಂಟೆಯೊಳಗೆ ಬಂಧಿಸುವಲ್ಲಿ ನ್ಯೂಟೌನ್ ಪೊಲೀಸರುಯಶಸ್ವಿಯಾಗಿದ್ದಾರೆ.
ಆತನಿಂದ 4,50,000/- ರು. ಮೌಲ್ಯದ 88 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರಾವತಿ ನ್ಯೂಟೌನ್ ವ್ಯಾಪ್ತಿಯ, ಕಡದಕಟ್ಟೆಯಲ್ಲಿ, ಕಳೆದ 18 ವರ್ಷಗಳಿಂದ, ವಿಧವೆಯೊಬ್ಬರು, ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದಾರೆ. ದಿನಾಂಕ 6-11-2023ರಂದು ಬೆಳಿಗ್ಗೆ 10-30ಗಂಟೆಯಲ್ಲಿ, ಈಕೆಯ ಮಕ್ಕಳು ಜಮೀನಿಗೆ ಹೋಗಿದ್ದಾಗ, ಈಕೆಯ ಮೃತ ಗಂಡನ, ಅಣ್ಣನ ಮಗನಾದ ನಾಗರಾಜ ಮನೆಗೆ ಬಂದಿದ್ದಾನೆ. ಹಾಗೆ ಬಂದವನು, ತಿಂಡಿ ತಿನ್ನುತ್ತಿದ್ದ ಮಹಿಳೆಯ ಹಿಂಬದಿಯಲ್ಲಿದ್ದ ಮಂಚದ ಮೇಲೆ ಕುಳಿತುಕೊಂಡು, ಟವಲ್ನಿಂದ ಕುತ್ತಿಗೆಗೆ ಬಿಗಿದು, ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾನೆ. ಆ ಸಮಯದಲ್ಲಿ, ಬೈಕ್ನ ಶಬ್ದ ಕೇಳಿ ಬಂದಿದ್ದರಿಂದ, ಸರದ ಸಮೇತ, ಹಿಂದಿನ ಬಾಗಿಲಿನ ಮೂಲಕ ಓಡಿ ಹೋಗಿದ್ದಾನೆ.
ಈ ಸಂಬಂಧ ಮಹಿಳೆಯು ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಆರೋಪಿಯ ಮಾಹಿತಿ ಸಿಕ್ಕ ಪೊಲೀಸರು ಆತನನ್ನ ಟ್ರೇಸ್ ಮಾಡಲು ಆರಂಭಿಸಿದ್ದರು.
ಪರಿಣಾಮ ಪ್ರಕರಣ ದಾಖಲಾದ 24 ಗಂಟೆಯ ಒಳಗೆ ಆರೋಪಿ ನ್ಯೂಟೌನ್ ಪೊಲೀಸ್ ಸ್ಟೇಷನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮಳವಳ್ಳಿ ತಾಲ್ಲೂಕಿನ ಕುರುಬನಪುರ ಗ್ರಾಮದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು ಆತನನ್ನ ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಎಸ್ಪಿ ಜಿ.ಕೆ. ಮಿಥುನ್ಕುಮಾರ್, ಅಡಿಷನಲ್ ಎಸ್ಪಿ ಅನಿಲ್ಕುಮಾರ್ ಎಸ್. ಬೂಮರೆಡ್ಡಿ ಮತ್ತು ಭದ್ರಾವತಿ ಉಪವಿಭಾಗದ ಡಿವೈಎಸ್ಪಿ ಕೆ.ಆರ್. ನಾಗರಾಜ್ ರವರುಗಳ ಮಾರ್ಗದರ್ಶನ, ಭದ್ರಾವತಿ ನಗರ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಜೆ. ಶ್ರೀಶೈಲಕುಮಾರ್ ರವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಸಬ್ಇನ್ಸ್ಪೆಕ್ಟರ್ ಟಿ. ರಮೇಶ್ ಹಾಗೂ ಸಿಬ್ಬಂದಿಯವರಾದ ನವೀನ್, ಮಲ್ಲಿಕಾರ್ಜುನ, ರಾಕೇಶ್, ಗಿರೀಶ್ ಮತ್ತು ವಿನೋದ್ ಪಾಲ್ಗೊಂಡಿದ್ದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್