ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಕಡಿದು ಕೊಂದ ಕ್ರೂರಿ ಮಗ
ಹೆತ್ತು ಹೊತ್ತ ತಾಯಿಯನ್ನು ಮಗನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಭೀಬತ್ಸಕರ ಘಟನೆ ಮಲೆನಾಡಿನಲ್ಲಿ ನಡೆದಿದೆ.
ಇದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಸೋಮವಾರ ಮಧ್ಯಾಹ್ನ ಬೆಳಕಿಗೆ ಬಂದ ಘೋರ ಹತ್ಯೆಯೊಂದರ ಕಥೆ. ಇಲ್ಲಿನ ಮಾವಿನಕೆರೆ ನಿವಾಸಿ ಸುಲೋಚನಮ್ಮ (60) ಎಂಬವರನ್ನು ಅವರ ಪುತ್ರನೇ ಕೊಂದು ಹಾಕಿದ್ದಾನೆ.
ತಾಯಿಯನ್ನೆ ಕೊಂದ ಕ್ರೂರಿ ಮಗ ಸಂತೋಷ (49) ಆತ ಭಾನುವಾರ ರಾತ್ರಿಯೇ ಕೊಲೆ ಮಾಡಿರುವ ಶಂಕೆ ಇದ್ದು, ಸೋಮವಾರ ಮಧ್ಯಾಹ್ನವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿ ಎರಡು ಮಕ್ಕಳಿವೆ. ಸಂತೋಷ ಚಾಲಕನಾಗಿ ಕೆಲಸ ಮಾಡುತ್ತಾನೆ, ಕೂಲಿ ಕೆಲಸವನ್ನೂ ಮಾಡುತ್ತಾನೆ. ಆದರೆ, ಒಂದು ಪೈಸೆಯನ್ನೂ ಮನೆಗೆ ತರುವ ಜಾಯಮಾನವಿಲ್ಲ. ಕುಡಿದು ಮತ್ತೇರಿಸಿಕೊಂಡು ಮನೆಗೆ ಬರುವ ಆತ ಹೆಂಡತಿ ಮಕ್ಕಳ ಮೇಲೆ ತನ್ನ ಪ್ರತಾಪ ತೋರಿಸುತ್ತಿದ್ದ.
ಈತನ ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ಆತನ ಹೆಂಡತಿ, ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಎಂ.ಸಿ.ಹಳ್ಳಿಯಲ್ಲಿ ಬೇರೆ ಮನೆ ಮಾಡಿಕೊಂಡು ವಾಸಿಸುತ್ತಿದ್ದಾಳೆ. ಈತ ಆಗಾಗ ಅಲ್ಲಿಗೂ ಹೋಗಿ ಕಿರಿಕಿರಿ ಮಾಡುತ್ತಾನೆ.
ಮಾವಿನಕೆರೆಯ ಮನೆಯಲ್ಲಿ ಸಂತೋಷ್ ಮತ್ತು ಅವನ ತಾಯಿ ವಾಸಿಸುತ್ತಾರೆ. ಅವನು ತಾಯಿಯ ಜತೆಗೂ ಚೆನ್ನಾಗಿ ಇರಲಿಲ್ಲ. ಪ್ರತಿದಿನವೂ ಬಂದು ತಾಯಿಯ ಜತೆ ಗಲಾಟೆ ಮಾಡುತ್ತಿದ್ದ. ಚಾಲಕ, ಕೂಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಮನೆಗೆ ಒಂದು ಪೈಸೆಯೂ ಕೊಟ್ಟದ್ದಿಲ್ಲ. ನಿಜವೆಂದರೆ, ಅಮ್ಮನಿಗಾಗಿ ಅನ್ನಾಹಾರಕ್ಕೂ ಕೊಡುತ್ತಿರಲಿಲ್ಲ. ಅಕ್ಕಪಕ್ಕದ ಮನೆಯವರೇ ಸಂತೋಷ್ ತಾಯಿಗೆ ಊಟ ತಿಂಡಿ ಕೊಡುತ್ತಿದ್ದರು. ಊರವರ ಸಹಾಯದಿಂದಲೇ ಜೀವನ ಸಾಗಿಸುತ್ತಿದ್ದರು ಸುಲೋಚನಮ್ಮ.
ಸಾಮಾನ್ಯವಾಗಿ ಸುಲೋಚನಮ್ಮ ಅವರು ಬೆಳಗ್ಗೆ ಎದ್ದು ಮನೆಯ ಹೊರಗೆ ಬಂದು ಅಕ್ಕಪಕ್ಕದವರ ಜತೆ ಮಾತನಾಡುತ್ತಿದ್ದರು. ಆದರೆ, ಮಧ್ಯಾಹ್ನವಾದರೂ ಆಕೆ ಹೊರಗೆ ಬಾರದೆ ಇರುವುದನ್ನು ನೋಡಿ ಪಕ್ಕದ ಮನೆಯ ಮಹಿಳೆಯೊಬ್ಬರು ಮನೆ ಪಕ್ಕ ಬಂದು ಕರೆದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಉತ್ತರ ಬಂದಿಲ್ಲ. ಬಳಿಕ ಅವರು ತೆರೆದ ಕಿಟಕಿಯಿಂದ ಒಳಗೆ ನೋಡಿದ್ದಾರೆ. ಆಗ ಸುಲೋಚನಮ್ಮ ಮಂಚದಲ್ಲಿ ಮಲಗಿದ್ದು ಕಂಡುಬಂತು. ಕೂಡಲೇ ಅಕ್ಕಪಕ್ಕದ ಮನೆಯವರನ್ನು ಕರೆದುಕೊಂಡು ಬಂದು ನೋಡಿದಾಗ ಸಾವು ಸಂಭವಿಸಿತ್ತು.
ಪಕ್ಕದಲ್ಲೇ ಇದ್ದ ಕತ್ತಿ ಆಕೆಯನ್ನು ಕೊಲೆ ಮಾಡಿದ್ದಕ್ಕೆ ಸಾಕ್ಷಿ ನುಡಿದಿತ್ತು. ಇಷ್ಟಾಗುವಾಗ ಎಲ್ಲರ ಸಂಶಯ ಆಕೆಯ ಮಗ ಸಂತೋಷನ ಮೇಲೆ ಬಿದ್ದಿತ್ತು. ಆತನನ್ನು ಹುಡುಕಿಕೊಂಡು ಹೋದರೆ ಆತ ಗದ್ದೆಯೊಂದರಲ್ಲಿ ಆರಾಮವಾಗಿ ಮಲಗಿದ್ದ. ಆಗಲೂ ಅವನು ಕುಡಿತದ ಮತ್ತಿನಲ್ಲೇ ಇದ್ದ.
ಆತನನ್ನು ಊರಿನ ಜನ ಸೇರಿ ಕರೆದುಕೊಂಡು ಮನೆಗೆ ಬಂದರೆ ಆತ ತಾಯಿಯನ್ನು ನೋಡಿದಂತೆ ಮಾಡಿ ಮಾರ್ಗದ ಪಕ್ಕದಲ್ಲಿ ಇಟ್ಟಿದ್ದ ಇಟ್ಟಿಗೆಯ ರಾಶಿ ಪಕ್ಕ ಬಿದ್ದುಕೊಂಡಿದ್ದಾನೆ. ಕೇಳಿದರೆ, ನಂಗೆ ವಿಷಯವೇ ಗೊತ್ತಿಲ್ಲ, ರಾತ್ರಿ ನಾನು ಮನೆಗೇ ಬರ್ಲಿಲ್ಲ. ಗದ್ದೆಯಲ್ಲೇ ಮಲಗಿದ್ದೆ. ಈಗ ಬಂದು ಯಾರೋ ಹೇಳಿದರು. ಹೀಗಾಗಿ ಮನೆಗೆ ಬಂದೆ ಎಂದು ಆರಾಮವಾಗಿ ಹೇಳಿದ್ದಾನೆ. ನನಗೂ ಕೊಲೆಗೂ ಸಂಬಂಧವಿಲ್ಲ ಎನ್ನುತ್ತಿರುವ ಆತನನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಭದ್ರಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್