
ರಿಪ್ಪನ್ಪೇಟೆ: ವಿನಾಯಕ ವೃತ್ತದಲ್ಲಿ ವಾಹನ ನಿಲುಗಡೆ ನಿಷೇಧ ; ಪುಟ್ ಪಾತ್ ತೆರವಿಗೆ ಜೂನ್ 10ರ ಗಡುವು
Ripponpet Vinayaka Circle gets strict new traffic and no-parking rules. The PWD has also set a June 10 deadline to clear road encroachments for footpath construction.
ರಿಪ್ಪನ್ಪೇಟೆ: ಪಟ್ಟಣದ ಸುಗಮ ಸಂಚಾರ ಮತ್ತು ಅಭಿವೃದ್ಧಿಯ ಹಿತದೃಷ್ಟಿಯಿಂದ ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ (PWD) ಮಹತ್ವದ ಹೆಜ್ಜೆ ಇಟ್ಟಿದೆ. ಹೊಸನಗರ, ಶಿವಮೊಗ್ಗ, ಸಾಗರ ಮತ್ತು ತೀರ್ಥಹಳ್ಳಿ ರಸ್ತೆಗಳನ್ನು ಸಂಪರ್ಕಿಸುವ ವಿನಾಯಕ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಒತ್ತುವರಿ ತೆರವಿಗೆ ಡೆಡ್ಲೈನ್ ನೀಡಲಾಗಿದೆ..
ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ, ಪಿಡಬ್ಲ್ಯೂಡಿ ಅಧಿಕಾರಿಗಳು, ವರ್ತಕರು ಹಾಗೂ ಸಾರ್ವಜನಿಕರ ನಡುವೆ ನಡೆದ ಸಮಾಲೋಚನಾ ಸಭೆಯಲ್ಲಿ ಈ ಕೆಳಗಿನ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
ಹೊಸನಗರ ವೃತ್ತ ನಿರೀಕ್ಷಕ (ಸಿಪಿಐ) ಎಂ.ಎಸ್. ಗೌಡಪ್ಪ ಗೌಡರ್ ಅವರು ಸಭೆಯಲ್ಲಿ ಮಾತನಾಡಿ, ಟ್ರಾಫಿಕ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ನೋ ಪಾರ್ಕಿಂಗ್: ವಿನಾಯಕ ವೃತ್ತದ 75 ಅಡಿ ವ್ಯಾಪ್ತಿಯಲ್ಲಿ ಬಸ್ ಹೊರತುಪಡಿಸಿ ಬೇರೆ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲ. (ಬಸ್ಗಳಿಗೆ ಕೇವಲ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮತ್ತು ಇಳಿಸಲು ಮಾತ್ರ ಅವಕಾಶ).
ನಾಲ್ಕು ಚಕ್ರದ ವಾಹನಗಳು: ಕಾರು ಹಾಗೂ ಇತರ ನಾಲ್ಕು ಚಕ್ರದ ವಾಹನಗಳನ್ನು ವೃತ್ತದಿಂದ 100 ಮೀಟರ್ ಅಂತರದಲ್ಲಿ ಪ್ರತ್ಯೇಕವಾಗಿ ನಿಲ್ಲಿಸಬೇಕು.
ದ್ವಿಚಕ್ರ ವಾಹನಗಳು: ಬೈಕ್ಗಳನ್ನು ರಸ್ತೆ ವಿಭಜಕದ (ಡಿವೈಡರ್) ಎರಡೂ ಬದಿಗಳಲ್ಲಿ ಮಾತ್ರ ಪಾರ್ಕ್ ಮಾಡಬೇಕು.
ಎಚ್ಚರಿಕೆ: ಪಿಡಬ್ಲ್ಯೂಡಿ ಇಲಾಖೆ ಬಿಳಿ ಬಣ್ಣದ ಗುರುತು ಹಾಕಿದ ಬಳಿಕ, ನಿಯಮ ಮೀರಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದರೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಲಾಗುವುದು. ಸದ್ಯ ಒಂದು ತಿಂಗಳ ಕಾಲ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.
ಒತ್ತುವರಿ ತೆರವಿಗೆ ಜೂನ್ 10ರ ಗಡುವು (ಪಿಡಬ್ಲ್ಯೂಡಿ ಎಚ್ಚರಿಕೆ):
ಲೋಕೋಪಯೋಗಿ ಇಲಾಖೆಯ ಎಇಇ ಸುನೀಲ್ ಮಾತನಾಡಿ, ಪಾದಚಾರಿಗಳ ಅನುಕೂಲಕ್ಕಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ವಿವರಿಸಿದರು.ನಾಲ್ಕು ಪ್ರಮುಖ ರಸ್ತೆಗಳಲ್ಲಿ ಚರಂಡಿಯಿಂದ 6 ಅಡಿ ಜಾಗದಲ್ಲಿ ಇಂಟರ್ ಲಾಕ್ ಅಳವಡಿಸಿ ಸುಸಜ್ಜಿತ ಫುಟ್ಪಾತ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಕಟ್ಟಡ ಮಾಲೀಕರು ಜೂನ್ 10ರೊಳಗೆ ತಾವಾಗಿಯೇ ಒತ್ತುವರಿ ತೆರವುಗೊಳಿಸಿ ಊರಿನ ಅಭಿವೃದ್ಧಿಗೆ ಸಹಕರಿಸಬೇಕು.
ಖಡಕ್ ವಾರ್ನಿಂಗ್: ಒಂದು ವೇಳೆ ಜೂನ್ 10ರೊಳಗೆ ತೆರವುಗೊಳಿಸದಿದ್ದರೆ, ಯಾವುದೇ ಮುಲಾಜಿಲ್ಲದೆ ಜೆಸಿಬಿ ಬಳಸಿ ಇಲಾಖೆಯಿಂದಲೇ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರ ಮತ್ತು ವರ್ತಕರ ಪ್ರತಿಕ್ರಿಯೆ:
ವರ್ತಕರ ಅಹವಾಲು: ಎಂ.ಸುರೇಶ್ಸಿಂಗ್, ಸುಂದರೇಶ್ ಸೇರಿದಂತೆ ಪ್ರಮುಖ ವರ್ತಕರು ಮಾತನಾಡಿ, ಸಾಗರ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಆಗಿರುವ ಲೋಪಗಳ ಬಗ್ಗೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸಭೆಯ ಗಮನ ಸೆಳೆದರು.
ಸಾರ್ವಜನಿಕರ ಬೆಂಬಲ: ಅರ್ ಎ ಚಾಬುಸಾಬ್ , ಸುಧೀಂದ್ರ ಪೂಜಾರಿ, ಎಂ.ಬಿ.ಮಂಜುನಾಥ್ ಮತ್ತಿತರರು ಮಾತನಾಡಿ, ಸುಗಮ ಸಂಚಾರಕ್ಕಾಗಿ ಇಲಾಖೆ ಕೈಗೊಂಡಿರುವ ನಿರ್ಧಾರಗಳಿಗೆ ಬೆಂಬಲ ವ್ಯಕ್ತಪಡಿಸಿದರು. ವಾಹನ ನಿಲುಗಡೆ ನಿಯಂತ್ರಿಸಲು ಸ್ಥಳದಲ್ಲಿ ಹೋಂ ಗಾರ್ಡ್ಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಪಿಎಸ್ಐ ರಾಜುರೆಡ್ಡಿ, ಪ್ರೊಬೇಷನರಿ ಪಿಎಸ್ಐ ಶ್ರೀಕಾಂತ್ ಮತ್ತು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ಪಿಎಸ್ಐ ರಾಜುರೆಡ್ಡಿ ಸ್ವಾಗತ ಕೋರಿದರು, ಉಮೇಶ್ ವಂದನಾರ್ಪಣೆ ಮಾಡಿದರು.




