ಡಿಕೆಶಿ ಸಂಪುಟದಲ್ಲಿ ಬೇಳೂರು ಗೋಪಾಲಕೃಷ್ಣಗೆ ಮಂತ್ರಿಗಿರಿ ಪಕ್ಕಾ? ಒಲಿಯಲಿದೆಯಾ ಕ್ರೀಡಾ ಅಥವಾ ಆಹಾರ ಇಲಾಖೆ?
Sagara MLA Belur Gopalakrishna emerges as a strong frontrunner for a ministerial berth in the newly formed D.K. Shivakumar-led Karnataka cabinet, with high chances of securing the Sports or Food and Civil Supplies department.
ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದ್ದು, ನೂತನ ಸಚಿವ ಸಂಪುಟ ರಚನೆಯ ಕಸರತ್ತು ಬಿರುಸಿನಿಂದ ಸಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಿಢೀರ್ ರಾಜೀನಾಮೆಯ ಬೆನ್ನಲ್ಲೇ ಇಡೀ ಸಚಿವ ಸಂಪುಟ ವಿಸರ್ಜನೆಗೊಂಡಿದ್ದು, ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರ ನೇತೃತ್ವದಲ್ಲಿ ಹೊಸ ಮಂತ್ರಿಮಂಡಲ ರಚನೆಯ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಮಹತ್ವದ ರಾಜಕೀಯ ಕ್ಷಿಪ್ರ ಬದಲಾವಣೆಯ ಹಂತದಲ್ಲಿ, ಮಲೆನಾಡು ಭಾಗದ ಪ್ರಭಾವಿ ನಾಯಕ ಹಾಗೂ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಚಿವ ಸ್ಥಾನದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅಧಿಕೃತ ಘೋಷಣೆಯೊಂದು ಬಾಕಿ ಇದ್ದರೂ, ರಾಜಕೀಯ ಚಾವಡಿಯಲ್ಲಿ ಅವರ ಮಂತ್ರಿಗಿರಿ ಬಹುತೇಕ ಖಚಿತ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.
ಹೈಕಮಾಂಡ್ ಮಟ್ಟದಲ್ಲಿ ಬಿರುಸಿನ ಲಾಬಿ ಹಾಗೂ ಹಕ್ಕೊತ್ತಾಯ
ಈಗಾಗಲೇ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬೇಳೂರು ಗೋಪಾಲಕೃಷ್ಣ ಅವರು ಈ ಬಾರಿ ಸಚಿವ ಸ್ಥಾನ ಪಡೆಯಲೇಬೇಕು ಎಂಬ ದೃಢ ನಿರ್ಧಾರದಲ್ಲಿದ್ದಾರೆ. ತಮ್ಮ ಹಿರಿತನ ಹಾಗೂ ಪಕ್ಷ ನಿಷ್ಠೆಯನ್ನು ಮುಂದಿಟ್ಟುಕೊಂಡು ಅವರು ತೀವ್ರ ಲಾಬಿ ನಡೆಸುತ್ತಿದ್ದಾರೆ. ದೆಹಲಿ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸುತ್ತಿರುವ ಅವರು, ಸಚಿವ ಸ್ಥಾನದ ಆಕಾಂಕ್ಷಿಯಾಗಿ ಈಗಾಗಲೇ ಮೂರು ಬಾರಿ ರಾಷ್ಟ್ರ ರಾಜಧಾನಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಒತ್ತಡ ಹೇರಿದ್ದಾರೆ. ಈ ಬಗ್ಗೆ ಸ್ವತಃ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, “ನಾನು ಮೂರು ಬಾರಿ ಗೆದ್ದಿದ್ದೇನೆ, ಸಂಪುಟದಲ್ಲಿ ನನಗೊಂದು ಅವಕಾಶ ಖಂಡಿತವಾಗಿಯೂ ನೀಡಬೇಕು” ಎಂದು ಬಹಿರಂಗವಾಗಿಯೇ ತಮ್ಮ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ.
ಡಿಕೆಶಿಯಿಂದ ಹಸಿರು ನಿಶಾನೆ: ಒಲಿಯಲಿವೆ ಪ್ರಮುಖ ಖಾತೆಗಳು?
ಸದ್ಯ ಹೊಸ ಸಂಪುಟ ರಚನೆಯ ಸಂಪೂರ್ಣ ಸ್ವಾತಂತ್ರ್ಯ, ಜವಾಬ್ದಾರಿ ಮತ್ತು ಪರಮಾಧಿಕಾರ ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಗಲೇರಿದೆ. ಯಾರಿಗೆ ಮಣೆ ಹಾಕಬೇಕು ಎಂಬ ಅಂತಿಮ ಪಟ್ಟಿ ಸಿದ್ಧವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಹೊರಬೀಳಲಿದೆ. ಇತ್ತೀಚೆಗಷ್ಟೇ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದ ಬೇಳೂರು ಗೋಪಾಲಕೃಷ್ಣ ಅವರಿಗೆ ಡಿಕೆಶಿ ಅವರಿಂದ ಮಂತ್ರಿಗಿರಿಯ ‘ಹಸಿರು ಸಿಗ್ನಲ್’ ಸಿಕ್ಕಿದೆ ಎಂಬ ಖಚಿತ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಥವಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಂತಹ ಪ್ರಮುಖ ಖಾತೆಗಳು ಒಲಿಯುವ ಲಕ್ಷಣಗಳು ದಟ್ಟವಾಗಿವೆ.ಈ ಮೂಲಕ ಸಾಗರಕ್ಕೆ ಅವರು ಗೂಟದ ಕಾರಿನಲ್ಲಿ (ಸಚಿವರ ಕಾರು) ದರ್ಪದಿಂದ ಮರಳುವುದು ಬಹುತೇಕ ನಿಶ್ಚಿತ ಎನ್ನಲಾಗುತ್ತಿದೆ.
ಕ್ಷೇತ್ರದಲ್ಲಿ ಮೊಳಗಿದ ಪ್ರಾರ್ಥನೆ, ಅಭಿಮಾನಿಗಳ ಕಾತರ
ತಮ್ಮ ನೆಚ್ಚಿನ ನಾಯಕನಿಗೆ ಈ ಬಾರಿ ಸಚಿವ ಸ್ಥಾನ ಒಲಿಯಲೇಬೇಕು ಎಂದು ಸಾಗರ ಹಾಗೂ ಹೊಸನಗರ ಭಾಗದ ಜನತೆ ಮತ್ತು ಅವರ ಅಪಾರ ಬೆಂಬಲಿಗರು ಕಾತರದಿಂದ ಕಾಯುತ್ತಿದ್ದಾರೆ. ಜಿಲ್ಲಾದ್ಯಂತ ಬೇಳೂರು ಅಭಿಮಾನಿಗಳು ದೇವಸ್ಥಾನಗಳು ಹಾಗೂ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ಮಲೆನಾಡಿಗೆ ಸೂಕ್ತ ಪ್ರಾತಿನಿಧ್ಯದ ದೃಷ್ಟಿಯಿಂದಲೂ ಬೇಳೂರು ಗೋಪಾಲಕೃಷ್ಣ ಅವರ ಆಯ್ಕೆ ಪ್ರಮುಖವಾಗಿದ್ದು, ಸಂಪುಟ ವಿಸ್ತರಣೆಯ ಅಧಿಕೃತ ಪಟ್ಟಿಗಾಗಿ ಇಡೀ ಜಿಲ್ಲೆ ಎದುರುನೋಡುತ್ತಿದೆ.
ರಫಿ ರಿಪ್ಪನ್ ಪೇಟೆ




