The 119th birth anniversary of Sri Shivakumara Swamiji was celebrated in Rippon Pete with participation from various organizations, highlighting his immense contributions to education, social service, and the philosophy of Trivida Dasoha.
ರಿಪ್ಪನ್ ಪೇಟೆ : ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಸಮಾಜಕ್ಕೆ ಸನ್ಮಾರ್ಗ ತೋರಿದ ಮಹಾಪುರುಷರು. ಬಡವರ ಪಾಲಿಗೆ ಅನ್ನದಾತರಾಗಿ, ವಿದ್ಯಾರ್ಥಿಗಳ ಪಾಲಿಗೆ ವಿದ್ಯಾದಾತರಾಗಿ ಸಮಾಜಕ್ಕೆ ಉತ್ತಮ ಮಾರ್ಗ ತೋರಿದರು’ ಎಂದು ಪಟ್ಟಣದ ಪಿಎಸ್ ಐ ರಾಜುರೆಡ್ಡಿ ಬಣ್ಣಿಸಿದರು.
ಪಟ್ಟಣದ ವಿನಾಯಕ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು , ಹಿಂದೂಪರ ಸಂಘಟನೆಗಳು , ರೋಟರಿ ಕ್ಲಬ್ ಹಾಗೂ ಜುಮ್ಮಾ ಮಸೀದಿ ವತಿಯಿಂದ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ತ್ರಿವಿಧ ದಾಸೋಹ ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಸ್ವಾಮೀಜಿ ಅನ್ನ, ಅಕ್ಷರ ಹಾಗೂ ಭಕ್ತಿ ದಾಸೋಹವನ್ನು ಶಿರಸಾವಹಿಸಿ ಪಾಲಿಸಿದರು. ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದುದು. ಅವರ ಕೀರ್ತಿ ಕೇವಲ ರಾಜ್ಯಕ್ಕಷ್ಟೇ ಅಲ್ಲದೆ ಇಡೀ ದೇಶಕ್ಕೆ ಪಸರಿಸಿದೆ. ಅಂತಹವರ ಜನ್ಮದಿನವನ್ನು ನಾವೆಲ್ಲರೂ ಆಚರಿಸುತ್ತಿರುವುದು ಪುಣ್ಯದ ಕೆಲಸ. ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು’ ಎಂದರು.
ಮುಖಂಡರಾದ ಎಂ ಬಿ ಮಂಜುನಾಥ್ ಮಾತನಾಡಿ ‘ತಮ್ಮ ಮಠದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಅನ್ನವನ್ನು ಕೊಟ್ಟ ಶಿವಕುಮಾರ ಶ್ರೀಗಳು, ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಜ್ಞಾನದ ಬೆಳಕಾಗಿದ್ದಾರೆ. ಮಠದಲ್ಲಿ ಓದಿದವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ’ ಎಂದು ಹೇಳಿದರು.
ಪ್ರಮುಖರಾದ ಸದಾನಂದ್ ಮಾತನಾಡಿ ‘ಸ್ವಾಮೀಜಿ ಅವರು ನಮ್ಮಿಂದ ದೈಹಿಕವಾಗಿ ಮಾತ್ರ ದೂರವಾಗಿದ್ದಾರೆ. ಅವರ ತತ್ವಾದರ್ಶಗಳು ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿವೆ. ಅವರ ಆದರ್ಶ ಮತ್ತು ಸಂದೇಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದರು.
ಗಣ್ಯರು ಸ್ವಾಮೀಜಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಪ್ರಮುಖರಾದ ಸುರೇಶ್ ಸಿಂಗ್ ,ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬ್ಯಾರಿ ,ಪ್ರಮುಖರಾದ ನಾಗರಾಜ್ ಗೌಡ , ರಾಮಚಂದ್ರ ಬಳೆಗಾರ್ , ಪದ್ಮಾ ಸುರೇಶ್ , ಶೀಲಾ ಆರ್ ಡಿ , ಲೀಲಾ ಆರ್ ಶಂಕರ್ ,ರಾಮಚಂದ್ರ ಕೆರೆಹಳ್ಳಿ , ಮುರುಳಿ ಕೆರೆಹಳ್ಳಿ , ರವೀಂದ್ರ ಬಲ್ಲಾಳ್ ,ಯೋಗೇಂದ್ರಪ್ಪ ಗೌಡ , ಈಶ್ವರಪ್ಪ ಗೌಡ , ಮೈದೀನ್ ,ನವೀನ್ ಹಾಗೂ ಇನ್ನಿತರರು ಇದ್ದರು.




