Sri Nadamayananda Nath Swamiji delivered a spiritual message during the inauguration and re-consecration ceremony of the newly built Sri Kodandarama Temple at Madlaradimba near Ripponpet, constructed at a cost of ₹50 lakh.
ಮಾದ್ಲಾರದಿಂಬದಲ್ಲಿ ಶ್ರೀ ಕೋದಂಡರಾಮ ದೇವರ ಪುನರ್ ಪ್ರತಿಷ್ಠಾಪನೆ – ಧಾರ್ಮಿಕ ಸಮಾರಂಭದಲ್ಲಿ ಸ್ವಾಮೀಜಿ ಆಶೀರ್ವಚನ
ರಿಪ್ಪನ್ಪೇಟೆ: ಸನ್ಯಾಸಿಗಳಿಗೆ ದೀಕ್ಷೆಯ ಸಂದರ್ಭದಲ್ಲಿ ಕೇಸರಿ ವಸ್ತ್ರವನ್ನು ನೀಡುವ ಮೂಲಕ ಅವರೊಳಗಿನ ದುಷ್ಟಶಕ್ತಿಯನ್ನು ನಿಯಂತ್ರಿಸುವ ಸಂಕೇತವನ್ನು ವ್ಯಕ್ತಪಡಿಸಲಾಗುತ್ತದೆ ಎಂದು ಶಿವಮೊಗ್ಗ ಅಧಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಹೇಳಿದರು.
ರಿಪ್ಪನ್ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದ್ಲಾರದಿಂಬದಲ್ಲಿ ಶ್ರೀರಾಮ ದೇವಸ್ಥಾನ ಸೇವಾ ಸಮಿತಿಯವರ ವತಿಯಿಂದ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ಕೋದಂಡರಾಮ ದೇವರ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜೀವನದ ಸಾರ್ಥಕತೆಗೆ ಮಠ–ಮಂದಿರಗಳು ಅಗತ್ಯವೆಂದರು.ನಮ್ಮ ಮೂಲ ಆಚರಣೆಗಳು ಮತ್ತು ಸಂಸ್ಕೃತಿಗಳನ್ನು ಅರಿತು ಅವನ್ನು ಪಾಲಿಸುವುದು ಅತ್ಯವಶ್ಯಕ. ಸಿಂಧೂರವು ಸುಮಂಗಳೆಯರಿಗೆ ಭಗವಂತ ನೀಡಿದ ಪವಿತ್ರ ಸಂಕೇತವಾಗಿದೆ. ಭಾರತ ದೇಶದ ಸನಾತನ ಪರಂಪರೆಗಳನ್ನು ಅನುಸರಿಸುವುದರಿಂದ ಅಷ್ಟಐಶ್ವರ್ಯ ಲಭಿಸುತ್ತದೆ ಎಂದು ಅವರು ಹೇಳಿದರು.
ಅಜ್ಞಾನದಿಂದ ಸುಜ್ಞಾನತ್ತ ಸಾಗುವ ದಾರಿ ತೋರಿಸುವುದೇ ನಮ್ಮ ಧರ್ಮ ಮತ್ತು ಸಂಸ್ಕಾರಗಳ ಉದ್ದೇಶವಾಗಿದೆ. ಶ್ರೀರಾಮನ ತತ್ವ ಆದರ್ಶಗಳು ಇಂದಿನ ಯುವಪೀಳಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಪೂರ್ವಿಕರು ಪ್ರಕೃತಿಯಲ್ಲಿಯೇ ದೇವರನ್ನು ಕಂಡು ಆರಾಧನೆ ಮಾಡಿದವರು ಎಂದು ಅವರು ತಿಳಿಸಿದರು.
ಕಾರ್ಯಕ್ರಮಕ್ಕೆ ಶ್ರೀರಾಮ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಜಯಪ್ರಕಾಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕೊಡಗೈದಾನಿ ಯಶೋಧಮ್ಮ, ಸಮಿತಿಯ ಗೌರವಾಧ್ಯಕ್ಷ ಹೆಚ್.ಎಸ್. ಕೃಷ್ಣಮೂರ್ತಿಗೌಡ್ರು, ಬಾಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವೇದಾವತಿ ಬಾಲಚಂದ್ರ, ಸಮಿತಿಯ ಉಪಾಧ್ಯಕ್ಷ ಹೆಚ್.ಎಸ್. ರಾಜು, ಹೆಚ್.ಎಸ್. ರವಿಹಾಲುಗುಡ್ಡೆ, ಹೆಚ್.ಪಿ. ಪಾಲಾಕ್ಷ, ಚೂಡಾಮಣಿ ಹೆಚ್.ಎಸ್., ಪ್ರೀತಮ್, ಸಹಕಾರ ಸಂಘದ ಅಧ್ಯಕ್ಷ ಎಂ.ಎನ್. ಪರಮೇಶ್ ಹಾಗೂ ರಾಜ್ಯ ಒಕ್ಕಲಿಗ ಸಮಾಜದ ಮಹಿಳಾ ಮುಖಂಡೆ ಪ್ರತಿಮಾ ಶಿವಮೊಗ್ಗ ಸೇರಿದಂತೆ ಊರಿನ ಹಿರಿಯರು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಿಂತು ಸ್ವಾಗತಿಸಿದರು. ಅನನ್ಯ ಮತ್ತು ಅನುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಹೆಚ್.ವಿ. ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.




