ಹಿಂದೂ ರುದ್ರಭೂಮಿಗೆ ‘ಸಿಲಿಕಾನ್ ಚೇಂಬರ್’ ಕೊಡುಗೆ – ಗ್ರಾಮಾಡಳಿತಕ್ಕೆ ಅಧಿಕೃತ ಹಸ್ತಾಂತರ
ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒಕ್ಕಲಿಗರ ಸಂಘದ ಆಗ್ರಹ
ರಿಪ್ಪನ್ಪೇಟೆ: ಗ್ರಾಮದಲ್ಲಿನ ಹಿಂದೂ ರುದ್ರಭೂಮಿಯ ಸೌಲಭ್ಯಗಳನ್ನು ಸುಧಾರಿಸುವ ಉದ್ದೇಶದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಮಿಸಲಾದ ‘ಸಿಲಿಕಾನ್ ಚೇಂಬರ್’ ಹಾಗೂ ದಹನ ಯಂತ್ರವನ್ನು ಇಂದು ಗ್ರಾಮಾಡಳಿತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಮುರುಳಿಧರ್ ಶೆಟ್ಟಿ, ಮಾನವ ಜೀವನಕ್ಕೆ ಅಂತ್ಯಕ್ರಿಯೆಯೂ ಅಷ್ಟೇ ಮಹತ್ವದ್ದಾಗಿದ್ದು, ಮೃತರಿಗೆ ಗೌರವಯುತ ಹಾಗೂ ವ್ಯವಸ್ಥಿತ ಅಂತ್ಯಸಂಸ್ಕಾರ ನೆರವೇರಿಸುವುದು ಸಮಾಜದ ಕರ್ತವ್ಯ ಎಂದು ಹೇಳಿದರು.
ಪೂಜ್ಯ ಕಾವಂದರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಜನಹಿತ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮುಕ್ತಿಧಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಸಿಲಿಕಾನ್ ಚೇಂಬರ್ ಅಳವಡಿಕೆಯಿಂದ ಬಡ–ಶ್ರೀಮಂತ ಎಂಬ ಭೇದಭಾವವಿಲ್ಲದೆ ಎಲ್ಲರೂ ಸಮಾನವಾಗಿ, ಸುಸಜ್ಜಿತ ಸೌಲಭ್ಯದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತ್ ನಿಕಟಪೂರ್ವ ಉಪಾಧ್ಯಕ್ಷ ಸುದೀಂದ್ರ ಪೂಜಾರಿ ಮಾತನಾಡಿ, ಧರ್ಮಸ್ಥಳ ದೇವಸ್ಥಾನದ ಹುಂಡಿಗೆ ಭಕ್ತರು ಸಲ್ಲಿಸುವ ಕಾಣಿಕೆಗಳು ಸಮಾಜಮುಖಿ ಕಾರ್ಯಗಳಿಗೆ ಬಳಸಲ್ಪಡುವುದಕ್ಕೆ ಈ ಯೋಜನೆ ಜೀವಂತ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರದೀಪ್, ಬಾಲಕೃಷ್ಣ, ಹರೀಶ್, ತಾಲ್ಲೂಕು ಜನಜಾಗೃತಿ ಸಮಿತಿಯ ನಾಗರತ್ನ ದೇವರಾಜ್, ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ನಾಗರಾಜ್, ಗ್ರಾಮ ಪಂಚಾಯಿತ್ ನಿಕಟಪೂರ್ವ ಸದಸ್ಯರಾದ ನಿರೂಪ್ ಕುಮಾರ್, ಡಿ.ಇ. ಮಧುಸೂದನ್, ಗಣಪತಿ ಗವಟೂರು, ಜಿ.ಡಿ. ಮಲ್ಲಿಕಾರ್ಜುನ, ಸುಂದರೇಶ್, ದೀಪಾ ಸುದೀರ್, ಶೈಲಾ ಆರ್.ಆರ್. ಪ್ರಭು, ಶುಭಾ ಶ್ರೀಧರ್, ಸಾಜಿದಾ ಹನೀಫ್, ಗೀತಾ ಸೇರಿದಂತೆ ಮುಕ್ತಿ ವಾಹನ ದಾನಿ ಚಂದ್ರಶೇಖರ (ಮಂಜಣ್ಣ ಹಾಸ್ಟಲ್), ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒಕ್ಕಲಿಗರ ಸಂಘದ ಆಗ್ರಹ
ರಿಪ್ಪನ್ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸುವ ಮೂಲಕ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಮಾರ್ಗ ಒದಗಿಸಬೇಕೆಂದು ತಾಲ್ಲೂಕು ಒಕ್ಕಲಿಗರ ಸಂಘ ಆಗ್ರಹಿಸಿದೆ.
ರಿಪ್ಪನ್ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಎಂ.ಬಿ. ಲಕ್ಷ್ಮಣಗೌಡ ಅವರು, ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನಃ ಘೋಷಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಕ್ಷೇತ್ರ ಮರುಸ್ಥಾಪನೆ ಕುರಿತ ಕೂಗಿಗೆ ಸಂಘದ ಸಂಪೂರ್ಣ ಬೆಂಬಲವಿದೆ ಎಂದರು.
ಹೊಸನಗರ ತಾಲ್ಲೂಕು ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಪ್ರದೇಶವಾಗಿದ್ದು, ವಿಶೇಷವಾಗಿ ಶರಾವತಿ ಮಡೆನೂರು ಚಕ್ರವರಾಹಿ ಯೋಜನೆ ಹಿನ್ನೆಲೆ ಅನೇಕ ರೈತಾಪಿ ಕುಟುಂಬಗಳು ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿವೆ ಎಂದು ಅವರು ಹೇಳಿದರು. ವೀರಶೈವ ಲಿಂಗಾಯಿತ, ಒಕ್ಕಲಿಗ, ಈಡಿಗ, ಕುಣಬಿ ಸೇರಿದಂತೆ ಹಲವು ಸಮುದಾಯಗಳ ಜನರು ಅಣೆಕಟ್ಟು ನಿರ್ಮಾಣದಿಂದಾಗಿ ಊರು ತೊರೆಯುವಂತಾಗಿದೆ. ಇದರಿಂದ ಅನೇಕ ಕುಟುಂಬಗಳು ದಶಕಗಳಿಂದ ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿವೆ ಎಂದು ಆರೋಪಿಸಿದರು.
ಅಕ್ರಮ-ಸಕ್ರಮ ಯೋಜನೆಯಡಿ ನಿರಾಶ್ರಿತ ಕುಟುಂಬಗಳಿಗೆ ಸರ್ಕಾರ ಭೂಮಿಯ ಮಂಜೂರು ಮಾಡುವಲ್ಲಿ ವಿಫಲವಾಗಿದೆ ಎಂದು ದೂರಿದ ಅವರು, ಕೆಲವರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅಲ್ಪಸ್ವಲ್ಪ ಜಮೀನು ಸಾಗುವಳಿ ಮಾಡುತ್ತಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದರು.
ಭೌಗೋಳಿಕವಾಗಿ ವಿಶಾಲವಾದ ಹೊಸನಗರ ತಾಲ್ಲೂಕನ್ನು ಜನಸಂಖ್ಯೆ ಆಧಾರವಾಗಿ ವಿಭಜಿಸಿ ಸಾಗರ ಮತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಸೇರಿಸಿರುವ ಕ್ರಮದಿಂದ ರಾಜಕೀಯವಾಗಿ ತಾಲ್ಲೂಕಿನ ಧ್ವನಿ ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನರ ಸಮಸ್ಯೆಗಳು ಸಮರ್ಪಕವಾಗಿ ಪ್ರತಿನಿಧಿಸಲ್ಪಡುತ್ತಿಲ್ಲ ಎಂಬ ಕಾರಣದಿಂದ ಕ್ಷೇತ್ರ ಮರುಸ್ಥಾಪನೆ ಅಗತ್ಯವಾಗಿದೆ ಎಂದರು.
ಇನ್ನಾದರೂ ಸರ್ಕಾರ ಜನಾಭಿಪ್ರಾಯಕ್ಕೆ ಸ್ಪಂದಿಸಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸುವ ಮೂಲಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಎಂ.ಬಿ. ಲಕ್ಷ್ಮಣಗೌಡ ಆಗ್ರಹಿಸಿದರು.




