ಕಣ್ಣಿನ ಕ್ಯಾನ್ಸರ್ ಗೆ ತುತ್ತಾಗಿದ್ದ ಪೃಥ್ವಿ ಬಾಳಿಗೆ ಬೆಳಕಾದ ಶಾಸಕ ಬೇಳೂರು ಗೋಪಾಲಕೃಷ್ಣ | ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸುವ ಭರವಸೆ

MLA extends financial support for a child battling cancer in Shivamogga, assuring full coverage of medical expenses and arranging treatment at a private hospital.

ಹೊಸನಗರ : ಪತ್ರಿಕೋದ್ಯಮದ ಒಂದು ಸ್ಪಂದನೆ, ಒಂದು ವರದಿ… ಕೆಲವೊಮ್ಮೆ ಒಂದು ಕುಟುಂಬದ ಬದುಕನ್ನೇ ಬದಲಾಯಿಸಬಹುದು ಎಂಬುದಕ್ಕೆ ಹೊಸನಗರ ಸಮೀಪದ ಪುಟ್ಟ ಕಂದಮ್ಮ ಪೃಥ್ವಿಯ ಕಥೆ ಸ್ಪಷ್ಟ ಉದಾಹರಣೆಯಾಗಿದೆ. ಕಣ್ಣಿನ ಕ್ಯಾನ್ಸರ್‌ನಿಂದ ನರಳುತ್ತಿದ್ದ ಈ ಮಗುವಿನ ನೋವು, ಪೋಷಕರ ಅಳಲು, ಬಡತನದ ಅಸಹಾಯಕತೆ—ಇವೆಲ್ಲವನ್ನು ಪೋಸ್ಟ್ ಮ್ಯಾನ್ ನ್ಯೂಸ್ ಹೃದಯ ಸ್ಪರ್ಶಿಸುವ ರೀತಿಯಲ್ಲಿ ಹೊರತಂದ ಬಳಿಕ, ಇಂದು ಆ ಕುಟುಂಬದ ಬದುಕಿನಲ್ಲಿ ಆಶಾಕಿರಣ ಮೂಡಿದೆ.

ವರದಿಯ ಬೆನ್ನಲ್ಲೇ ಕ್ಯಾನ್ಸರ್ ಪೀಡಿತ ಮಗುವಿನ ಮನೆಗೆ ಭೇಟಿ ನೀಡಿದ ತಹಶೀಲ್ದಾರ್ ಭರತ್ ರಾಜ್ ಮತ್ತು ಶಾಸಕ ಬೇಳೂರು ಗೋಪಾಲಕೃಷ್ಣ ಸೂಚನೆಯ ಮೇರೆಗೆ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುತ್ತಾ ಸಮೀಪದ ಎಡೆಚಿಟ್ಟೆ ಗ್ರಾಮದ ವಿವೇಕ್ ಮತ್ತು ಸೌಮ್ಯ ದಂಪತಿಯ ಮುದ್ದಿನ ಮಗ ಪೃಥ್ವಿ. ಇನ್ನೂ ಸರಿಯಾಗಿ ಮಾತಾಡಲೂ ಬಾರದ ವಯಸ್ಸಿನಲ್ಲಿ, ಆಟವಾಡಬೇಕಾದ ಈ ಪುಟ್ಟ ಕಂದಮ್ಮ, ಕಣ್ಣಿನ ಕ್ಯಾನ್ಸರ್ ಎಂಬ ಭೀಕರ ರೋಗದೊಂದಿಗೆ ಹೋರಾಟ ನಡೆಸುತ್ತಿದ್ದನು. ಬಲಗಣ್ಣಿನಲ್ಲಿ ಆರಂಭವಾದ ರೋಗ ಗಂಭೀರ ಹಂತ ತಲುಪಿದ್ದು, ಕಣ್ಣಿನ ಒಳಭಾಗವೇ ಹಾನಿಗೊಳಗಾಗಿತ್ತು. ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ ಕಣ್ಣು ತೆಗೆದುಹಾಕಬೇಕು, ಇಲ್ಲದಿದ್ದರೆ ರೋಗ ಮೆದುಳಿಗೂ ಹರಡುವ ಅಪಾಯವಿದೆ ಎಂದು ಎಚ್ಚರಿಸಿದ್ದರು.

ಪ್ರತಿನಿತ್ಯದ ದಿನಸಿ ಬದುಕಿನ ಖರ್ಚು ಕೂಡ ಕಷ್ಟವಾಗಿರುವ ಈ ಬಡ ಕುಟುಂಬಕ್ಕೆ ಸಾವಿರಾರು ರೂಪಾಯಿ ಚಿಕಿತ್ಸಾ ವೆಚ್ಚ ಹೇಗೆ ಸಾಧ್ಯ? ಶಿವಮೊಗ್ಗಕ್ಕೆ ಹೋಗಲು ಬಸ್ ಟಿಕೆಟ್ ಹಣಕ್ಕೂ ಪರದಾಡುವ ಪರಿಸ್ಥಿತಿಯಲ್ಲಿ, ಮಗುವಿನ ಜೀವ ಉಳಿಸುವುದು ಕನಸಾಗಿ ಉಳಿದಿತ್ತು. ಮಗುವಿನ ನೋವನ್ನು ನೋಡುತ್ತಾ ಕಣ್ಣೀರು ಹಾಕುವುದರ ಹೊರತಾಗಿ ಅವರ ಬಳಿ ಮತ್ತೇನು ಇರಲಿಲ್ಲ..

ಇಂತಹ ಸಂಕಷ್ಟದ ಕ್ಷಣದಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಹೊರಬಂದಿತು. ಈ ವರದಿ ಸಮಾಜದ ಗಮನ ಸೆಳೆಯಿತು. ಅದಕ್ಕೆ ಸ್ಪಂದಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಮಾನವೀಯತೆ ಮೆರೆದರು. “ಮಗುವಿನ ಚಿಕಿತ್ಸೆ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ” ಎಂಬ ಅವರ ಮಾತು, ಆ ಕುಟುಂಬಕ್ಕೆ ಹೊಸ ಜೀವ ತುಂಬಿದಂತಾಯಿತು.

ಇದಷ್ಟೇ ಅಲ್ಲ, ತಹಶೀಲ್ದಾರ್ ಭರತ್ ರಾಜ್ ಸ್ಥಳಕ್ಕೆ ಭೇಟಿ ನೀಡಿ, ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದರು. ಕಣ್ಣಿನ ಸ್ಕ್ಯಾನ್ ಸಮಸ್ಯೆಯಿಂದ ನಿಂತಿದ್ದ ಪ್ರಕ್ರಿಯೆ ಇದೀಗ ಮುಂದುವರಿಯಲಿದ್ದು, ಸರ್ಕಾರದ ಸೌಲಭ್ಯಗಳೂ ಕುಟುಂಬಕ್ಕೆ ದೊರೆಯಲಿವೆ.

ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಮಾತನಾಡಿ ಕ್ಯಾನ್ಸರ್‌ಗೆ ತುತ್ತಾಗಿರುವ ಮಗುವಿನ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಶಾಸಕರು ತಕ್ಷಣ ಸ್ಪಂದಿಸಿ ಅಗತ್ಯ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ವಿಳಂಬವಾಗದಂತೆ ವ್ಯವಸ್ಥೆ ಮಾಡಲಾಗಿದ್ದು, ಅದರ ಸಂಪೂರ್ಣ ವೆಚ್ಚವನ್ನು ಶಾಸಕರೇ ಭರಿಸಲಿದ್ದಾರೆ. ಈ ಕುರಿತು ಪೋಷಕರಿಗೂ ಮಾಹಿತಿ ನೀಡಲಾಗಿದ್ದು, ಮಂಗಳವಾರ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.

ಒಂದೇ ವರದಿ… ಆದರೆ ಅದರ ಪರಿಣಾಮ ಅಪಾರ. ಇಂದು ಪೃಥ್ವಿಯ ಕಣ್ಣಿನಲ್ಲಿ ನೋವಿನ ಜೊತೆಗೆ ಒಂದು ಹೊಸ ಭರವಸೆ ಮೂಡಿದೆ. ಪೋಷಕರ ಕಣ್ಣಲ್ಲಿ ಅಸಹಾಯಕತೆಯ ಕಣ್ಣೀರು ಅಲ್ಲ, ಸಂತಸದ ಕಣ್ಣೀರು ಹರಿಯುತ್ತಿದೆ.

ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಕೇವಲ ಸುದ್ದಿ ಅಲ್ಲ—ಒಂದು ಜೀವ ಉಳಿಸುವ ದಿಕ್ಕಿನಲ್ಲಿ ನಡೆದ ಮಾನವೀಯ ಹೆಜ್ಜೆಯಾಗಿದೆ.

ಈ ಸಂಧರ್ಭದಲ್ಲಿ ತಾಲೂಕ್ ಆಹಾರ ನಿರೀಕ್ಷಕರಾದ ಬಾಲರಾಜ್ , ಮುಖಂಡರಾದ ನಿರೂಪ್ ಕುಮಾರ್ ಹಾಗೂ ಪೋಸ್ಟ್ ಮ್ಯಾನ್ ನ್ಯೂಸ್ ಸಂಪಾದಕರಾದ ರಫಿ ರಿಪ್ಪನ್ ಪೇಟೆ ಇದ್ದರು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

RIPPONPETE | ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಆಯ್ಕೆ

RIPPONPETE | ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಆಯ್ಕೆ Ripponpete Eid Milad Committee…

13 hours ago

ನಾಗರಹಳ್ಳಿ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಸಂಭ್ರಮ

ನಾಗರಹಳ್ಳಿ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಸಂಭ್ರಮ Nagarahalli Nagendra Swamy Temple in Hosanagara taluk celebrated Nagara…

14 hours ago

ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಆ.19ರಂದು ‘ಶಿಕಾರಿಪುರ ಚಲೋ’ ಹಾಗೂ ಬಂದ್‌ಗೆ ಕರೆ

ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಆ.19ರಂದು ‘ಶಿಕಾರಿಪುರ ಚಲೋ’ ಹಾಗೂ ಬಂದ್‌ಗೆ ಕರೆ VHP and Bajrang Dal…

14 hours ago

ತಾಯಿ-ಮಗಳ ಜೀವ ಉಳಿಸಿದ ಮೂವರು ಯುವಕರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನ

ತಾಯಿ-ಮಗಳ ಜೀವ ಉಳಿಸಿದ ಮೂವರು ಯುವಕರಿಗೆ ಪೊಲೀಸ್ ಇಲಾಖೆಯಿಂದ ಗೌರವ ಸನ್ಮಾನ Three youths rescued a mother and…

15 hours ago

Ranks Institute–ಜೆಸಿಐ ಹೊಸನಗರ ಡೈಮಂಡ್‌ ಆಯೋಜನೆಯಲ್ಲಿ ‘Gen Z Connect’ ಯಶಸ್ವಿ

ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್–ಜೆಸಿಐ ಹೊಸನಗರ ಡೈಮಂಡ್‌ ಸಹಯೋಗದಲ್ಲಿ ‘Gen Z Connect’ ತರಬೇತಿ ಯಶಸ್ವಿ Ranks Institute–JCI Hosanagara Diamond Hosts…

1 day ago

ಬೆಳ್ಳೂರು GHPSನಲ್ಲಿ ಸ್ವಾತಂತ್ರ್ಯ ಸಂಭ್ರಮ: ಶಾಲೆಗೆ ಕೊಡುಗೆಗಳ ಮಹಾಪೂರ!

ಬೆಳ್ಳೂರು GHPSನಲ್ಲಿ ಸ್ವಾತಂತ್ರ್ಯ ಸಂಭ್ರಮ: ಶಾಲೆಗೆ ಕೊಡುಗೆಗಳ ಮಹಾಪೂರ! Satish Ripponpete donated a TV to GHPS Bellur…

2 days ago