ಉಗ್ರರ ದಾಳಿ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ
ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ನಿರ್ದಯವಾಗಿ ಹತ್ಯೆಗೈದ ಉಗ್ರರ ಪೈಶಾಚಿಕ ಕೃತ್ಯವನ್ನು ಖಂಡಿಸಿ ಶಿವಮೊಗ್ಗದಲ್ಲಿ ಇಂದು ಸರಣಿ ಪ್ರತಿಭಟನೆಗಳು ನಡೆದವು.
ಜಿಲ್ಲಾ ವಕೀಲ ಸಂಘ ಹಾಗೂ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಅವರು ಪ್ರತಿಭಟನೆ ನಡೆಸಿದರೆ, ಜಿಲ್ಲಾ ಕಾಂಗ್ರೆಸ್ನ ಉತ್ತರ ಬ್ಲಾಕ್ನ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಸಲಾಯಿತು.
ಜಿಲ್ಲಾ ವಕೀಲರ ಸಂಘವು ಜಿಲ್ಲಾ ವಕೀಲರ ಭವನದಿಂದ ಬಾಲರಾಜ್ ರಸ್ತೆಯಲ್ಲಿ ಸಾಗಿ ಮಹಾವೀರ ವೃತ್ತದ ಮೂಲಕ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಪ್ರವಾಸಿಗರನ್ನು ಕೊಂದವರಿಗೆ ಸೂಕ್ತ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಮರ್ಕಜಿ ಸುನ್ನಿ ಜಾಮೀಯಾ ಮಸ್ಜಿದ್ ಕಮಿಟಿಯವರು ಉಗ್ರವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಭಾರತೀಯ ಪ್ರಜೆಗಳನ್ನು ಉಗ್ರವಾದಿಗಳು ಅವರ ಕುಟುಂಬದವರ ಮುಂದೆಯೇ ಗುಂಡು ಹಾರಿಸಿ ಕೊಂದಿದ್ದಾರೆ. ಇದು ಮಾನವ ಸಮಾಜವೇ ತಲೆ ತಗ್ಗಿಸುವಂಥದ್ದು. ಉಗ್ರವಾದಿಗಳಿಗೆ ಯಾವುದೇ ಜಾತಿ, ಧರ್ಮಗಳಿಲ್ಲ. ಮಾನವಿಯತೆ ಇಲ್ಲದ ಇಂತಹವರನ್ನು ಭಾರತ ಸರ್ಕಾರ ಹುಡುಕಿ ನಡುರಸ್ತೆಯಲ್ಲೇ ಗುಂಡಿಕ್ಕಿ ಕೊಲ್ಲಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಉಗ್ರರಿಂದ ಹತ್ಯೆಯಾದವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಲಾಯಿತು.
ನಗರದ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ನ ಉತ್ತರ ಬ್ಲಾಕ್ ಕಾಂಗ್ರೆಸ್ನ ಪದಾಧಿಕಾರಿಗಳು ಪಹಲ್ಗಾಮ್ನಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಹತ್ಯೆಯಾದ ಇತರ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಮೃತಪಟ್ಟ ಮಂಜುನಾಥ್ ಅವರ ವಿಜಯ ನಗರದಲ್ಲಿರುವ ಮನೆಗೆ ಭೇಟಿ ನೀಡಿ ತಾಯಿ ಸುಮತಿ, ಸಹೋದರಿ ರೂಪ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, “ಈ ಸಂದರ್ಭದಲ್ಲಿ ಮಂಜುನಾಥ್ ಅವರ ಕುಟುಂಬಸ್ಥರ ಜೊತೆ ನಾವು ನಿಲ್ಲಬೇಕಿದೆ. ಇಂದು ಸಂಜೆ ಆರು ಗಂಟೆಗೆ ಕಾಶ್ಮೀರದಿಂದ ಮಂಜುನಾಥ್ ಅವರ ಮೃತದೇಹ ಹೊರಡಲಿದೆ. ನಾನು ಚೀಫ್ ಸೆಕ್ರೆಟರಿ ಜೊತೆಗೂ ಮಾತನಾಡುತ್ತಿದ್ದೇನೆ. ಅವರು ಪ್ರವಾಸಕ್ಕೆಂದು ಫ್ಯಾಮಿಲಿ ಜೊತೆ ಹೊರಡಿದ್ದರು. ನಾನು ಸಂತೋಷ್ ಲಾಡ್ ಅವರೊಂದಿಗೂ ಮಾತನಾಡಿದ್ದೇನೆ. ಧೈರ್ಯವಾಗಿರಿ, ನಾನು ಎಲ್ಲರನ್ನೂ ಕರೆತರುತ್ತೇನೆ ಎಂದು ಅವರು ಹೇಳಿದ್ದಾರೆ” ಎಂದರು.
“ನಮ್ಮ ರಾಜ್ಯದ ಮೂವರು ಮೃತಪಟ್ಟಿದ್ದಾರೆ. ಪ್ರತೀ ಬಾರಿ ದಾಳಿ ನಡೆದಾಗ ನಾವು ಅವರನ್ನು ಬಿಡೋದಿಲ್ಲ ಎಂದು ಹೇಳುತ್ತಿದ್ದಾರೆ. ಪುಲ್ವಾಮಾ ದಾಳಿಯ ಸಂದರ್ಭದಲ್ಲೂ ಕೂಡ ಇದನ್ನೇ ಹೇಳಿದ್ದೀರಿ. ಅಂತಹ ಸ್ಥಳಗಳಲ್ಲಿ ಪ್ರವಾಸಿಗರನ್ನು ಬಿಡುವ ಕೆಲಸವನ್ನೇಕೆ ಮಾಡಿದ್ದೀರಿ?. ಪ್ರವಾಸಿಗರನ್ನು ಬಿಟ್ಟಿದ್ದಾರೆ ಎಂದರೆ ಕೇಂದ್ರ ಸರ್ಕಾರ ಭದ್ರತೆ ವಹಿಸಬೇಕು.
ಸಾವು-ನೋವುಗಳಾದಾಗ ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತೀರಿ. ಪುಲ್ವಾಮಾ ದಾಳಿಯಾದಾಗ ಎಷ್ಟು ಜನ ಸೈನಿಕರು ಸಾವನ್ನಪ್ಪಿದರು. ಆಗ ಭಯೋತ್ಪಾದಕರನ್ನು ಸಾಯಿಸಿದ್ದೇವೆ ಎಂದು ಹೇಳಿದ್ದಾರೆ, ಅದು ನಿಜನೋ ಸುಳ್ಳೋ ಗೊತ್ತಿಲ್ಲ” ಎಂದು ಟೀಕಿಸಿದರು.
ಬೇಟೆಗೆ ಹೊರಟಿದ್ದ ನಾಲ್ವರ ಬಂಧನ; ಎರಡು ನಾಡ ಬಂದೂಕು ಸೇರಿ ಹಲವು ವಸ್ತು ವಶಕ್ಕೆ ! Four people were…
ಪ್ರವಾಸಿ ಬಸ್ ಪಲ್ಟಿ: ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಸಾವು, 20 ಮಂದಿಗೆ ಗಾಯ nursing students died and 20…
ಬೆಂಗಳೂರು ಮೂಲದ ಸಿವಿಲ್ ಕಂಟ್ರಾಕ್ಟರ್ ತೀರ್ಥಹಳ್ಳಿಯಲ್ಲಿ ನಾಪತ್ತೆ: ಮಾಹಿತಿ ನೀಡಲು ಪೊಲೀಸರ ಮನವಿ 55-year-old Bengaluru-based civil contractor Anil…
ಕರ್ತವ್ಯ ನಿರತ ಅರಣ್ಯ ವಾಚರ್ ಮೇಲೆ ಕರಡಿ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರಣ್ಯಾಧಿಕಾರಿಗಳು Forest department…
ರಾತ್ರಿ ವೇಳೆ ರೈತನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ಇಬ್ಬರು ಪೊಲೀಸರ ವಶಕ್ಕೆ Shivamogga rural police arrested two…
ರಿಪ್ಪನ್ಪೇಟೆ ಕೆಪಿಎಸ್ನಲ್ಲಿ ಉದ್ಯೋಗಾವಕಾಶ: 2 ಹುದ್ದೆಗಳಿಗೆ ಅರ್ಜಿ ಆಹ್ವಾನ | ಆ.22 ಅರ್ಜಿ ಸಲ್ಲಿಕೆಗೆ ಕೊನೆ ದಿನ Karnataka Public…