ಫೇಸ್ಬುಕ್ ನಲ್ಲಿ ಪ್ರಾರಂಭವಾದ ಲವ್ ಸ್ಟೋರಿ ಕೊಲೆಯಲ್ಲಿ ಅಂತ್ಯ – ಆನ್ ಲೈನ್ ಪ್ರೇಮಿಗಳು ನೋಡಲೇಬೇಕಾದ ಸ್ಟೋರಿ
ಫೇಸ್ ಬುಕ್ ನಲ್ಲಿ ಆರಂಭವಾದ ಮಹಿಳೆ ಹಾಗೂ ಯುವಕನ ನಡುವಿನ ಲವ್ ಸ್ಟೋರಿ ಕೃಷ್ಣಾನದಿ ದಡದಲ್ಲಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ ಮೂಲದ ಮಮತಾ (48) ಕೊಲೆಯಾದ ಮಹಿಳೆ. ರೇವಣಸಿದ್ದಯ್ಯ (26) ಮಹಿಳೆಯನ್ನು ಕೊಂದ ಯುವಕ. ಪತಿಯನ್ನು ಕಳೆದುಕೊಂಡಿದ್ದ ಮಹಿಳೆ ಮಮತಾಳಿಗೆ ಫೇಸ್ ಬುಕ್ ನಲ್ಲಿ ವಿಜಯಪುರ ಮೂಲದ ಯುವಕ ರೇವಣಸಿದ್ದಯ್ಯನ ಪರಿಚಯವಾಗಿದೆ.ಪರಿಚಯ, ಸ್ನೇಹವಾಗಿ ಪ್ರೀತಿಗೆ ತಿರುಗಿದೆ.
ಇಬ್ಬರ ನಡುವಿನ ಪ್ರೀತಿ-ಪ್ರೇಮದ ಸಲುಗೆಯಿಂದ ಯುವಕ ಮಹಿಳೆ ಮಮತಾಳಿಂದ ಹಣವನ್ನು ಪಡೆದಿದ್ದನಂತೆ. ಹಣ ಕೇಳಿದರೆ ರೇವಣಸಿದ್ದ ವಾಪಸ್ ಕೊಡದೇ ಜಗಳವಾಡಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಇದೇ ವಿಚಾರವಾಗಿ ಮನಸ್ತಾಪ ಆರಂಭವಾಗಿದೆ. ಅಲ್ಲದೇ ಇತ್ತಿಚೆಗೆ ಮಮತಾ, ರೇವಣಸಿದ್ದಯ್ಯನಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದಳಂತೆ. ಮದುವೆ ಮಾತುಕತೆ ವಿಚಾರವಾಗಿ ರೇವಣಸಿದ್ದ ಪ್ಲಾನ್ ಮಾಡಿ ಮಮತಾಳನ್ನು ಬಬಲೇಶ್ವರಕ್ಕೆ ಕರೆಸಿಕೊಂಡಿದ್ದ.
ಬೀಳಗಿ ಬಳಿ ಕೃಷ್ಣಾನದಿ ಬಳಿ ಮಮತಾಳನ್ನು ಕರೆದೊಯ್ದು ರಾಡ್ ನಿಂದ ಆಕೆಯ ತಲೆಗೆ ಹೊಡೆದು ಹತ್ಯೆಗೈದು ಶವವನ್ನು ನದಿ ದಡದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಶಿವಮೊಗ್ಗ ಠಾಣೆಯಲ್ಲಿ ಮಮತಾ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೇ ವೇಳೆ ಬೀಳಗಿ ಬಳಿ ಕೃಷ್ಣಾನದಿ ದಡದಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ತನಿಖೆ ನಡೆಸಿ ಗುರುತು ಪತ್ತೆ ಮಾಡಿದ ಪೊಲೀಸರಿಗೆ ಶಿವಮೊಗ್ಗ ಮೂಲದ ಮಮತಾ ಎಂಬ ಮಹಿಳೆಯ ಶವ ಎಂಬುದು ಗೊತ್ತಾಗಿದೆ.
ಮಮತಾಳ ಮೊಬೈಲ್ ಮೂಲಕ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿ ರೇವಣಸಿದ್ದಯ್ಯನನ್ನು ಬಂಧಿಸಿದ್ದಾರೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್