ಶಾಲಾ ಬಾಲಕನ ಬ್ಯಾಗ್ ನಲ್ಲಿ ನಾಗರಾಜ….!!
ರಿಪ್ಪನ್ ಪೇಟೆ : ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಭುವನ್ ಬ್ಯಾಗಿನಲ್ಲಿ ಸದ್ದಿಲ್ಲದೆ ಮಲಗಿದ್ದ ನಾಗರಾಜ..!
ಶುಕ್ರವಾರ ಬೆಳಗ್ಗೆ ಶಾಲೆಯ ಬೆಲ್ಲು ಹೊಡೆದು ತರಗತಿ ಪ್ರಾರಂಭವಾದಾಗ ನಲಿಕಲಿ ತರಗತಿಯ ಶಿಕ್ಷಕ ಪಾಠ ಓದಲು ಪುಸ್ತಕ ಬ್ಯಾಗಿನಿಂದ ಹೊರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ, ಹಾಜರಾತಿ ಕರೆಯುತ್ತಿದ್ದರು.ವಿದ್ಯಾರ್ಥಿ ಭುವನ್ ಶಿಕ್ಷಕರ ಅಣತಿಯಂತೆ ಪುಸ್ತಕ ಹೊರತೆಗೆದಾಗ ಖಾಲಿ ಬ್ಯಾಗಿನಲ್ಲಿ ಮಲಗಿದ್ದ ಹಾವನ್ನು ಕಂಡಿದ್ದಾನೆ.
ತನ್ನ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಆರ್ ಮಣಿಕಂಠ ಅವನಿಗೆ ಬ್ಯಾಗನಲ್ಲಿ ಇರುವ ಹಾವನ್ನು ತೋರಿಸಿದ್ದಾನೆ.ಹಾವನ್ನು ಕಂಡ ತಕ್ಷಣವೇ ಮಣಿಕಂಠಬ್ಯಾಗಿನ ಜಿಪ್ ಎಳೆದು ಹಾವು ಹೊರಬರದಂತೆ ಮಾಡಿದ್ದಾನೆ. ನಂತರ ಬ್ಯಾಗು ಸಮೇತ ಶಿಕ್ಷಕರ ಬಳಿ ಬಂದು ಇದರಲ್ಲಿ ಹಾವು ಇದೆ ಎಂದು ತಿಳಿಸಿದ್ದಾನೆ.
ವಿದ್ಯಾರ್ಥಿಯ ಮಾತಿಗೆ ಚಕಿತರಾದ ಶಿಕ್ಷಕರು ಬ್ಯಾಗನ್ನು ಹೊರತಂದು ತೆರೆದು ನೋಡಿದಾಗ ಅದರಲ್ಲಿ ಸದ್ದಿಲ್ಲದೆ ಸುರುಳಿ ಸುತ್ತಿಕೊಂಡು ಬೇಟೆಗಾಗಿ ಕಾದು ಕುಳಿತ ನಾಗರ ಹಾವನ್ನು ಕಂಡು ಬೆಚ್ಚಿ ಬೀಳುವ ಸರದಿ ಶಿಕ್ಷಕರದಾಗಿತ್ತು.
ಶಾಲೆಯ ಕೂಗಳತೆ ದೂರದಲ್ಲಿದ್ದ ವಿದ್ಯಾರ್ಥಿ ಭುವನ್ ಮನೆಯಿಂದ ಪೋಷಕರನ್ನು ಕರೆಯಿಸಿದ ಶಿಕ್ಷಕರು, ಘಟನೆಯ ನೈಜ್ಯತೆ ಹಾಗೂ ಸಹಪಾಠಿ ಮಣಿಕಂಠನ ಸಮಯ ಪ್ರಜ್ಞೆಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು ನಂತರ ಪೋಷಕರ ಸಮ್ಮುಖದಲ್ಲಿ ಬ್ಯಾಗಿನಲ್ಲಿದ್ದ ವಿಷಪೂರಿತ ನಾಗರಹಾವನ್ನು ಶಿಕ್ಷಕ ವೃಂದ ಜೊತೆಗೂಡಿ ಸಮೀಪದ ಕಾಡಿಗೆ ಬಿಟ್ಟು ಬಂದರು.
ಒಟ್ಟಾರೆ ಶಾಲಾ ಬ್ಯಾಗಿನಲ್ಲಿ ಬಂದಿದ್ದ ನಾಗಪ್ಪ ಯಾರಿಗೂ ಗಂಡಾಂತರ ತರದೆ ಸುಖಾಂತ್ಯವಾಗಿ ಕಾಡು ಸೇರಿದ.ವಿದ್ಯಾರ್ಥಿ ಮಣಿಕಂಠನ ಸಮಯಪ್ರಜ್ಞೆಗೆ ಗ್ರಾಮಸ್ಥರು ಹಾಗೂ ಶಿಕ್ಷಕರು ಪ್ರಸಂಶಿಸಿದ್ದಾರೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್