ಬುದ್ದಿಮಾಂದ್ಯ ಅಂಗವಿಕಲ ಮಗಳೊಂದಿಗೆ ವಾಸಿಸುತ್ತಿರುವ ಬಡ ಮಹಿಳೆಯ ಬದುಕಿಗೆ ಸಿಕ್ಕಿತೇ ಆಸರೆ?| 6ವರ್ಷಗಳಿಂದ ಸ್ವಚ್ಚ ಸಂಕೀರ್ಣ ಕಟ್ಟಡದಲ್ಲಿ ವಾಸ| ಅಂತ್ಯೋದಯ ಕಾರ್ಡ್ ಇಲ್ಲ | ಮಗಳ ಚಿಕಿತ್ಸೆಗೆ ಸ್ಪಂದಿಸುವವರಿಲ್ಲ
ಇಂದು ರಾಜ್ಯಾದ್ಯಂತ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಎಲ್ಲೆಡೆ ಜಾರಿಯಾಗುತ್ತಿದೆ ಆದರೆ ಇಲ್ಲೊಬ್ಬ ನತದೃಷ್ಟ ಲಕ್ಷ್ಮಿ ತನ್ನ ಅಂಗವಿಕಲ ಬುದ್ದಿಮಾಂದ್ಯ ಮಗಳೊಂದಿಗೆ ಮೂಲಭೂತ ಸೌಕರ್ಯಕ್ಕಾಗಿ ಅಂಗಲಾಚುತಿದ್ದಾಳೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಮೇಲಿನ ಸಂಪಳ್ಳಿ ಗ್ರಾಮದ ಶಶಿಕಲಾ ಎಂಬ ಮಹಿಳೆ ತನ್ನ 20 ವರ್ಷದ ಬುದ್ದಿಮಾಂದ್ಯ ಮಗಳಾದ ಪೂಜಾಳೊಂದಿಗೆ. ಮೂಲಭೂತ ಸೌಕರ್ಯಕ್ಕಾಗಿ ಅಂಗಲಾಚುತ್ತಿರುವುದು ಎಂತಹ ಕಲ್ಲು ಹೃದಯವನ್ನು ಕರಗಿಸುವಂತಿದೆ.
ಮೇಲಿನ ಸಂಪಳ್ಳಿ ಗ್ರಾಮದ ಶಶಿಕಲಾ ಎಂಬ ಮಹಿಳೆಯ ಮನೆಯು ಬೀಳುವ ಹಂತದಲ್ಲಿದ್ದ ಕಾರಣ ಕಳೆದ ಆರು ವರ್ಷಗಳಿಂದ ಕಸ ವಿಲೇವಾರಿ ಸ್ವಚ್ಚ ಸಂಕೀರ್ಣ ಘಟಕದಂತಿರುವ ಸಭಾ ಭವನದಲ್ಲಿ ತನ್ನ ಮಗಳೊಂದಿಗೆ ವಾಸಿಸುತಿದ್ದು ಶೌಚಾಲಯವಿಲ್ಲದೇ,ವಿದ್ಯುತ್ ಸಂಪರ್ಕವಿಲ್ಲದೇ , ನೀರಿನ ವ್ಯವಸ್ಥೆಯಿಲ್ಲದೇ ಕತ್ತಲಲ್ಲಿ ಕಾಲ ಕಳೆಯುತ್ತ ನರಕಯಾತನೆ ಅನುಭವಿಸುತ್ತಿದ್ದಾರೆ.
ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಇಂಥ ಶೋಚನೀಯ ಸ್ಥಿತಿ ಎದುರಿಸುತ್ತಿದ್ದು, ಇವರ ಸಮಸ್ಯೆಗೆ ಪರಿಹಾರ ಒದಗಿಸಬೇಕಾದವರೇ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.
ಬಲಾಢ್ಯರಿಗೆಲ್ಲಾ ಬಿಪಿ ಎಲ್ ಕಾರ್ಡ್ ನೀಡುವ ಅಧಿಕಾರಿಗಳು ಇಂತಹ ಬಡ ಮಹಿಳೆಗೆ ಅಂತ್ಯೋದಯ ಕಾರ್ಡ್ ನೀಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ.ಮಗಳ ಅಂಗವಿಕಲ ವೇತನದಲ್ಲಿ ಬರುವ ಅಷ್ಟೋ ಇಷ್ಟೋ ಹಣದಲ್ಲಿ ಜೀವನ ಸಾಗಿಸುತ್ತಿರುವ ಶಶಿಕಲಾ ಮತ್ತು ಆಕೆಯ ಅಂಗವಿಕಲ ಬುದ್ದಿಮಾಂದ್ಯ ಮಗಳ ಶಾಪ ನಿರ್ಲಜ್ಜ ಅಧಿಕಾರಿಗಳಿಗೆ ತಟ್ಟದೇ ಇರದು.
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಸ್ವಚ್ಚಭಾರತ್ ಅಡಿಯಲ್ಲಿ ದೇಶಾದ್ಯಂತ ಮನೆಮನೆಗೆ ಶೌಚಾಲಯ ನೀಡಿದ್ದೇವೆ ಎಂದು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿರುವ ಮಾರುತಿಪುರ ಗ್ರಾಮಾಡಳಿತಕ್ಕೆ ಈ ಅನಾಥ ಮಹಿಳೆ ಕಾಣದೇ ಇರುವುದು ದುರದೃಷ್ಟಕರವೇ ಸರಿ….!!!
ಬುದ್ದಿಮಾಂದ್ಯ ಅಂಗವಿಕಲ ಮಗಳನ್ನು ಸಭಾಭವನದ ಕಟ್ಟಡದಲ್ಲಿ ಕೂಡಿಹಾಕಿ ದಿನವೆಲ್ಲಾ ಊರಿನ ನಾಲ್ಕಾರು ಮನೆಗಳಲ್ಲಿ ಆಹಾರ ಅರಸಿ ಜೀವಿಸುತ್ತಿರುವ ಈ ಶಶಿಕಲಾ ಲಜ್ಜೆಗೆಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ನತದೃಷ್ಟ ಲಕ್ಷ್ಮಿಯಲ್ಲದೇ ಮತ್ತಿನ್ನೇನು…!!??
ಸ್ವಂತ ಜಾಗವನ್ನು ಹೊಂದಿರುವ ಈಕೆಗೆ ಆಶ್ರ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಟ್ಟು ,ಬುದ್ದಿಮಾಂದ್ಯ ಅಂಗವಿಕಲ ಮಗಳ ಚಿಕಿತ್ಸೆಗೆ ನೆರವಾಗುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್