ಸಾಗರ: ಚುನಾಯಿತ ಪ್ರತಿನಿಧಿಗೆ ಗೌರವ ಕೊಡದ ನಗರಸಭೆ ಆಡಳಿತ ವೈಖರಿಯನ್ನು ಖಂಡಿಸಿ ಬುಧವಾರ ನಗರಸಭಾ ಕಾಂಗ್ರೆಸ್ ಸದಸ್ಯೆ ಮಧುಮಾಲತಿ ಪೌರಾಯುಕ್ತರ ಕೊಠಡಿ ಎದುರು ಏಕಾಂಗಿ ಧರಣಿ ನಡೆಸಿ, ಆಡಳಿತದ ವಿರುದ್ಧ ಧಿಕ್ಕಾರ ಕೂಗಿದ್ದರು ಈ ಸಂಧರ್ಭದಲ್ಲಿ ಅವರಿಗೆ ಬೆಂಬಲಿಸಿದ ಹೋರಾಟಗಾರ ಅನ್ವರ್ ಭಾಷಾ ರವರಿಗೆ ನಗರಸಭೆ ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ನಾಗರಾಜ್ ರವರು ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಏಕೋ ಏನೋ ಇತ್ತೀಚೆಗೆ ಸಾಗರ ನಗರಸಭೆ ಜಿಲ್ಲೆಯಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ..ಆದರೆ ಅದು ಪ್ರಗತಿಯಲ್ಲಿ ಅಲ್ಲ…ಹೋರಾಟ,ಫೈಲ್ ನಾಪತ್ತೆ,ದೂರು ದುಮ್ಮಾನ ತರಹದ ಪ್ರಕರಣಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದು ಇಂದು ಸಹ ಪ್ರಜಾಪ್ರಭುತ್ವ ತಲೆತಗ್ಗಿಸುವ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಘಟನೆಯ ಹಿನ್ನಲೆ :
ನಿನ್ನೆಯ ದಿನ ನಗರಸಭೆ ಸದಸ್ಯೆ ಮಧುಮಾಲತಿ ಕಲ್ಲಪ್ಪ, ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲದಂತೆ ಆಗಿದೆ.ಕೆಲ ಮಾಹಿತಿ ಕೇಳಿದಾಗ ವೆಂಕಟೇಶ್ ಎಂಬುವವರು ಅವರು ನಾನು ಸದಸ್ಯೆ ಎನ್ನುವುದನ್ನು ಸಹ ನೋಡದೆ ದಬಾಯಿಸಿದ್ದಾರೆ ಎಂದು ಶಾಸಕರು ಮತ್ತು ನಗರಸಭೆ ಅಧ್ಯಕ್ಷರು ಸ್ಥಳಕ್ಕೆ ಬಂದು ನ್ಯಾಯ ಕೊಡಿಸುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದು ಕುಳಿತುಕೊಂಡಿದ್ದರು ಈ ಸಂಧರ್ಭದಲ್ಲಿ ಹೋರಾಟಗಾರ ಅನ್ವರ್ ಭಾಷಾ ಮಧುಮಾಲತಿ ರವರಿಗೆ ಬೆಂಬಲವಾಗಿ ನಿಂತು ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದ್ದರು.
ಈ ಹಿನ್ನಲೆಯಲ್ಲಿ ಇಂದು ಹೋರಾಟಗಾರ ಅನ್ವರ್ ಭಾಷಾ ರವರಿಗೆ ಕರೆ ಮಾಡಿರುವ ನಗರಸಭೆ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ನಾಗರಾಜ್ ರವರು ಕರೆ ಮಾಡಿ “ನೀನು ಏನಕ್ಕಾಗಿ ಧಿಕ್ಕಾರ ಕೂಗಿದೀಯಾ – ನಾಳೆ ಬೆಳಿಗ್ಗೆ ನೀನು ನಗರಸಭೆಗೆ ಬರಬೇಕು ಇಲ್ಲದಿದ್ದಲ್ಲಿ ನಿನ್ನ ಮನೆಯ ಬಾಗಿಲಿಗೆ ನಾವು ಬರುತ್ತೇವೆ ಎಂದು ಏಕವಚನದಲ್ಲಿ ಧಮ್ಕಿ ಹಾಕಿರುವ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ದೂರು ದಾಖಲು :
ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಸಾಗರದ ಡಿವೈಎಸ್ಪಿ ಕಛೇರಿಗೆ ಅನ್ವರ್ ಭಾಷಾರವರು ದೂರು ನೀಡಿದ ನಂತರ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ “ಪ್ರಜಾಪ್ರಭುತ್ವದಲ್ಲಿ ಧಿಕ್ಕಾರ ಕೂಗುವ ಹಾಗೂ ಅನ್ಯಾಯದ ವಿರುದ್ದ ಸೆಟೆದು ನಿಲ್ಲುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಈ ತರಹದ ದಬ್ಬಾಳಿಕೆಗೆ ಮಣಿಯುವುದಿಲ್ಲ” ಎಂದಿದ್ದಾರೆ.
ಒಟ್ಟಾರೆಯಾಗಿ ನಗರಸಭೆಯ ಮಹಿಳಾ ಸದಸ್ಯೆಗೆ ಆದ ಅಗೌರವದ ವಿರುದ್ದ ಪ್ರತಿಭಟಿಸಿದ ಸಾಮಾಜಿಕ ಹೋರಾಟಗಾರ ಅನ್ವರ್ ಭಾಷಾ ರವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಮಗೆ ಹಳೆ ಬ್ರಿಟಿಷ್ ಆಡಳಿತವನ್ನು ನೆನಪಿಸುವಂತಿದೆ.
ಬೆದರಿಕೆ ಹಾಕಿದ್ದಾರೆನ್ನಲಾಗುವ ವೈರಲ್ ಆಡಿಯೋ ಇಲ್ಲಿ ಕೇಳಿ 👇👇👇
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್