ಹೊಸನಗರ ತಾಲೂಕಿನ ಹರಿದ್ರಾವತಿ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು,ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬ “ರಿಪಬ್ಲಿಕ್ ಆಫ್ ಹರಿದ್ರಾವತಿ” ಅಧಿಪತ್ಯ ಘೋಷಣೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ಹೌದು ಮಲೆನಾಡಿನಾದ್ಯಂತ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರು ಅಲ್ಪ ಮಟ್ಟಿಗೆ ಅದಕ್ಕೆ ಕಡಿವಾಣ ಹಾಕುವಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಹಾಗೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಯಶಸ್ವಿಯು ಆಗಿದೆ.ಆದರೆ ಹೊಸನಗರ ತಾಲೂಕಿನ ಹರಿದ್ರಾವತಿ ಎಂಬ ಸುಸಂಸ್ಕೃತ ಗ್ರಾಮದ ಶರಾವತಿ ಹಿನ್ನೀರಿನ ಕೆರೆಹಳ್ಳಿ ಪಾಯಿಂಟ್ ನಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬ “ರಿಪಬ್ಲಿಕ್ ಆಫ್ ಹರಿದ್ರಾವತಿ” ಘೋಷಿಸಿಕೊಂಡ ಹಾಗೆ ತನ್ನ ಮರಳು ಮಾಫ಼ಿಯಾ ಜಾಲವನ್ನು ಆಳವಾಗಿ ಬೇರೂರಿಸಿದ್ದಾನೆ ಎನ್ನಲಾಗುತ್ತಿದೆ.
ಆ ಪ್ರಭಾವಿ ಮುಖಂಡನ “ರಿಪಬ್ಲಿಕ್ ಅಫ್ ಹರಿದ್ರಾವತಿ” ಅಧಿಪತ್ಯದಲ್ಲಿ ಕೆರೆಹಳ್ಳಿ ಪಾಯಿಂಟ್ ನಲ್ಲಿ ಮರಳು ಸಾಗಾಟಕ್ಕೆ ಯಾವುದೇ ಪರ್ಮೀಟ್ ಅಗತ್ಯವಿಲ್ಲ.ಲಾರಿ ಅಥವಾ ಟಿಪ್ಪರ್ ಮಾಲೀಕರು ದಿನಕ್ಕೆ ಎಷ್ಟು ಬಾರಿಯಾದರು,ಎಷ್ಟು ಪ್ರಮಾಣವಾದರೂ ಮರಳು ಸಾಗಿಸಬಹುದು. ಆದರೆ ಪ್ರತಿ ತಿಂಗಳಿಗೊಮ್ಮೆ “ರಿಪಬ್ಲಿಕ್ ಅಫ್ ಹರಿದ್ರಾವತಿ” ಅಧಿಪತ್ಯ ಘೋಷಿಸಿರುವ ಆ ಮುಖಂಡನಿಗೆ 45000(ನಲವತ್ತೈದು ಸಾವಿರ)ರೂ ಹಣ ತಲುಪಿಸಿದರೆ ಸಾಕು ಉಳಿದದ್ದೆಲ್ಲಾ ಆತನೇ ನೋಡಿಕೊಳ್ಳುತ್ತಾನೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಸ್ಥಳೀಯರು.
ಆ ಸ್ವಯಂ ಘೋಷಿತ ಮುಖಂಡನ ಮರಳು ಮಾಫ಼ಿಯಾದ ವಿರುದ್ದ ಸಾಮಾಜಿಕ ಚಿಂತನೆಯುಳ್ಳ ಪ್ರಬುದ್ದ ವ್ಯಕ್ತಿಗಳು ದನಿಯೆತ್ತಿದರೆ ಅಂತಹವರ ದನಿಯಡಗಿಸಲು ಅವರ ವಿರುದ್ದ ತನ್ನ ಪಟಾಲಂ ಮೂಲಕ ಹಲ್ಲೆ,ದಬ್ಬಾಳಿಕೆ ನಡೆಸುವ ಮಟ್ಟಕ್ಕೆ ಆ ಮುಖಂಡನ ಮಾಫ಼ಿಯಾದ ಜಾಲ ಬೇರೂರಿದೆ.
ಅಂದಾಜಿನ ಪ್ರಕಾರ ಪ್ರತಿನಿತ್ಯ ಸುಮಾರು 40 ರಿಂದ 50 ಲೋಡ್ ಮರಳು ಹರಿದ್ರಾವತಿಯ ಕೆರೆಹಳ್ಳಿ ಹೊಳೆಯಿಂದ ಶಿವಮೊಗ್ಗ,ಸಾಗರ ಪಟ್ಟಣಗಳಿಗೆ ಸಾಗಿಸಲಾಗುತ್ತಿದೆ ಎನ್ನಲಾಗುತ್ತಿದ್ದು ಸಂಬಂಧಪಟ್ಟ ಇಲಾಖೆಯವರು ಜಾಣಕುರುಡು ಪ್ರದರ್ಶಿಸುತ್ತಿದ್ದಾರೋ ಅಥವಾ ಸ್ವಯಂ ಘೋಷಿತ ಮುಖಂಡನ ಜೊತೆ ಶಾಮೀಲಾಗಿದ್ದಾರೋ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ಅಕ್ರಮ ಮರಳುಗಾರಿಕೆಯ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್