ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ – ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್ ಕತ್ತರಿಸಬೇಕೋ?
A ₹7.80 lakh mortuary building in Huncha, Hosanagara taluk, remains locked six years after construction, forcing families to travel to Ripponpete or Hosanagara for post-mortem services.
ಸರ್ಕಾರದ ‘ಅಭಿವೃದ್ಧಿ’ ಎಂದರೆ ಹೇಗಿರುತ್ತದೆ ಗೊತ್ತಾ? ಅದು ಕಾಗದದಲ್ಲಿ ಭವ್ಯ ಅರಮನೆ, ವಾಸ್ತವದಲ್ಲಿ ಮಣ್ಣಿನ ಮನೆ! ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ ಶವಾಗಾರ ವ್ಯವಸ್ಥೆಯ ಈ ಹುಳುಕಿಗೆ ಜೀವಂತ—ಕ್ಷಮಿಸಿ, ‘ನಿರ್ಜೀವ’ ಸಾಕ್ಷಿಯಾಗಿ ನಿಂತಿದೆ. ಬರೋಬ್ಬರಿ 7 ಲಕ್ಷ 80 ಸಾವಿರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಸುರಿದು ಸುಸಜ್ಜಿತ ಕಟ್ಟಡ ಕಟ್ಟಲಾಗಿದೆ. ಕಾಮಗಾರಿ ಮುಗಿದು ಆರು ವರ್ಷಗಳೇ ಉರುಳಿವೆ. ಆದರೆ, ಅದನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ನಮ್ಮ ಆಡಳಿತ ಯಂತ್ರಕ್ಕೆ ಯಾವ ಪಂಚಾಂಗದಲ್ಲೂ ಇನ್ನೂ ಮುಹೂರ್ತವೇ ಸಿಕ್ಕಿಲ್ಲ!
ಬಡವ ಬದುಕಿದ್ದಾಗಲೂ ನೆಮ್ಮದಿ ಇಲ್ಲ, ಸತ್ತ ಮೇಲೂ ಸುಖವಿಲ್ಲ ಎಂಬುದು ಇಲ್ಲಿ ಅಕ್ಷರಶಃ ಸತ್ಯ. ಇತ್ತೀಚೆಗೆ ಮುತ್ತಿನಕೆರೆಯಲ್ಲಿ ಬಡ ಯುವಕನೊಬ್ಬ ಕಾಲುಜಾರಿ ಬಿದ್ದು ದುರ್ಮರಣಕ್ಕೀಡಾದ. ಆ ದುರ್ದೈವಿಯ ಶವವನ್ನು ಮರಣೋತ್ತರ ಪರೀಕ್ಷೆ ಮಾಡಲು ಹುಂಚದ ಶವಾಗಾರಕ್ಕೆ ತಂದರೆ, ಅಲ್ಲಿ ತುಕ್ಕು ಹಿಡಿದ ಬೀಗ ಸ್ವಾಗತ ಕೋರಿತು. ಪರಿಣಾಮ? ಈಗಾಗಲೇ ದಿಕ್ಕುತೋಚದಂತಾಗಿದ್ದ ಆ ಬಡ ಕುಟುಂಬ ಹೆಣವನ್ನು ಇಟ್ಟುಕೊಂಡು ರಿಪ್ಪನ್ಪೇಟೆ ಆಸ್ಪತ್ರೆಗೆ ಅಲೆಯಬೇಕಾಯಿತು.
ಕಳೆದ ನಾಲ್ಕೈದು ವರ್ಷಗಳಿಂದ ಸಾವು ಸಂಭವಿಸಿದಾಗಲೆಲ್ಲಾ ಇಲ್ಲಿನ ಜನ ಶವವನ್ನು ಹೊತ್ತು ಹೊಸನಗರ ಅಥವಾ ರಿಪ್ಪನ್ಪೇಟೆಗೆ ಓಡಬೇಕು. ಬಡವರ ಕಣ್ಣೀರು ಒರೆಸಬೇಕಾದ ಸ್ಥಳೀಯ ಆಡಳಿತ ಮಾತ್ರ ಕಣ್ಮುಚ್ಚಿ, ಕಿವಿಗೆ ಹತ್ತಿ ಇಟ್ಟುಕೊಂಡು ಕುಂಭಕರ್ಣ ನಿದ್ದೆ ಮಾಡುತ್ತಿದೆ.
2018ರಲ್ಲಿ ಅಂದಿನ ಜಿ.ಪಂ. ಸದಸ್ಯೆ ಶ್ವೇತಾ ಬಂಡಿ ಅವರ ಅನುದಾನದಲ್ಲಿ ನಿರ್ಮಾಣವಾದ ಈ ಮರಣೋತ್ತರ ಪರೀಕ್ಷಾ ಕೊಠಡಿ, ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.
ಗುತ್ತಿಗೆದಾರ ಉಮೇಶ್ ಅವರ ಪ್ರಕಾರ, ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕವೇ ಅದನ್ನು ತಾಲೂಕು ಪಂಚಾಯಿತಿ ಇಒ ಅವರಿಗೆ ಹಸ್ತಾಂತರಿಸಲಾಗಿದೆ. ಮತ್ತೊಂದೆಡೆ, ಹುಂಚ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ನೀರಿನ ಸಮಸ್ಯೆಯನ್ನು ಕಾರಣವಾಗಿ ಹೇಳಲಾಗಿತ್ತು. ಇದೀಗ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಪೈಪ್ಲೈನ್ ಅಳವಡಿಕೆಯ ಬಿಲ್ ಕೂಡ ಮಂಜೂರಾಗಿದೆ ಎನ್ನಲಾಗಿದೆ. ಆದರೂ ಶವಾಗಾರಕ್ಕೆ ಇನ್ನೂ ಬೀಗ ತೆರೆಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಜಿ ಜಿ.ಪಂ. ಸದಸ್ಯೆ ಶ್ವೇತಾ ಬಂಡಿ ಮಾತನಾಡಿ, ಹುಂಚ ಆಸ್ಪತ್ರೆ ಬಳಿ ಬಯಲಿನಲ್ಲಿ ನಾಲ್ಕು ಕಡೆ ಸೀರೆ ಕಟ್ಟಿಕೊಂಡು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದ ದೃಶ್ಯ ಕಂಡು ನೋವುಂಟಾಗಿತ್ತು. ಇಂತಹ ಪರಿಸ್ಥಿತಿ ಮತ್ತೆ ಯಾರಿಗೂ ಎದುರಾಗಬಾರದು ಎಂಬ ಉದ್ದೇಶದಿಂದ ಶವಾಗಾರ ನಿರ್ಮಾಣಕ್ಕೆ ಅನುದಾನ ತಂದಿದ್ದಾಗಿ ತಿಳಿಸಿದ್ದಾರೆ.
ಆರು ವರ್ಷ ಕಳೆದರೂ ಕಟ್ಟಡ ಉದ್ಘಾಟನೆಯಾಗದೆ ಬಳಕೆಗೆ ಬಾರದಿರುವುದು ವ್ಯವಸ್ಥೆಯ ವೈಫಲ್ಯವಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಅವರು ಹೇಳಿದ್ದಾರೆ.
ಇನ್ನೊಂದೆಡೆ, ಸ್ಥಳೀಯ ಹೋರಾಟಗಾರ ಸತೀಶ್ ಈರನಬೈಲು ವರ್ಷಗಳಿಂದ ಅರ್ಜಿ ಹಿಡಿದು ಅಧಿಕಾರಿಗಳ ಕಚೇರಿ ಬಾಗಿಲು ಅಲೆದಿದ್ದೇ ಬಂತು, ಯಾವುದೇ ಪ್ರಯೋಜನವಾಗಿಲ್ಲ. “ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೊಟ್ಟು ಕೊಟ್ಟು ಸಾಕಾಗಿದೆ. ಈ ದಪ್ಪ ಚರ್ಮದ ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಉಗ್ರ ಹೋರಾಟ ರೂಪಿಸುವುದು ನಿಶ್ಚಿತ” ಎಂದು ಅವರು ಗುಡುಗಿದ್ದಾರೆ.
ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ಮಣ್ಣುಪಾಲು ಮಾಡಿರುವ ಈ ಬೇಜವಾಬ್ದಾರಿ ಆಡಳಿತಕ್ಕೆ ನಾಚಿಕೆಯಾಗಬೇಕಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು, ತುಕ್ಕು ಹಿಡಿಯುತ್ತಿರುವ ಆ ಶವಾಗಾರದ ಬೀಗ ಒಡೆಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುತ್ತದೆಯೇ? ಕಾದು ನೋಡಬೇಕಿದೆ.
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…
13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…
ಅಡಿಕೆ ತೋಟಕ್ಕೆ ನುಗ್ಗಿದ ಖಾಸಗಿ ಬಸ್: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ Private bus loses control and…
ಸಾಗರ : ಬಳಸಗೋಡು ಬಳಿ ಭೀಕರ ರಸ್ತೆ ಅಪಘಾತ - 19 ವರ್ಷದ ಯುವಕ ಸ್ಥಳದಲ್ಲೇ ಸಾವು 19-year-old Arjun…
ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ: ಮಲೆನಾಡಿನ ಸಾವಿರಾರು ಕುಟುಂಬಗಳಿಗೆ ಆತಂಕ.! – ಜಿಲ್ಲೆಯ ಯಾವ ಗ್ರಾಮಗಳಿಗೆ ಕಸ್ತೂರಿ ರಂಗನ್…
ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಶಿಕಾರಿಪುರ ಬಂದ್ , ಬಿಗಿ ಪೊಲೀಸ್ ಬಂದೋಬಸ್ತ್ , ಹೇಗಿದೆ ಪರಿಸ್ಥಿತಿ !?…