ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಗ್ರಾಮಸ್ಥರ ಪ್ರತಿಭಟನೆ; ಹೆದ್ದಾರಿಪುರ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ
Villagers protest by planting paddy on a damaged road in Heddaripur Gram Panchayat limits, demanding immediate repair of the key road connecting Sampalli, Karadiga, Belakodu and Kolavalli villages.
ರಿಪ್ಪನ್ ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಳ್ಳಿ, ಕರಡಿಗ, ಬೆಳಕೋಡು ಹಾಗೂ ಕೊಳವಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟಿರುವುದನ್ನು ಖಂಡಿಸಿ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದರು.
ಸುಮಾರು 3–4 ಕಿ.ಮೀ. ಉದ್ದದ ಈ ರಸ್ತೆ ಮಳೆಗಾಲದಲ್ಲಿ ಕೆಸರುಗದ್ದೆಯಾಗಿ ಮಾರ್ಪಡುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿಗೆ ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಹಿಂದೆ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಸ್ಥಳಕ್ಕೆ ಕರೆತಂದು ರಸ್ತೆಯ ದುಸ್ಥಿತಿಯನ್ನು ತೋರಿಸಿದ್ದರೂ, ‘ಅನುದಾನ ಬರಲಿ, ರಸ್ತೆ ಮಾಡೋಣ’ ಎಂಬ ಉತ್ತರ ಮಾತ್ರ ದೊರೆತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರೊಬ್ಬರು, “ನಮಗೆ ವಿಷ ಕೊಟ್ಟು ಬಿಡಿ, ನಾವು ನಿಮಗೆ ಹೇಳೋದು ಹಾಗೂ ನೀವು ಕೇಳೋದು ಎಲ್ಲಾ ಒಮ್ಮೆಗೆ ಮುಗಿದು ಹೋಗಲಿ” ಎಂದು ವ್ಯವಸ್ಥೆಯ ವಿರುದ್ಧ ಬೇಸರ ಹೊರಹಾಕಿದರು.
ರಸ್ತೆಯ ದುಸ್ಥಿತಿಯಿಂದ ತುರ್ತು ಸಂದರ್ಭದಲ್ಲಿಯೂ ಆಂಬ್ಯುಲೆನ್ಸ್ ಗ್ರಾಮಗಳಿಗೆ ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಇದನ್ನು ಬಿಂಬಿಸುವ ಸಲುವಾಗಿ ರೋಗಿಯೊಬ್ಬರನ್ನು ಮರದ ಕಂಬದಲ್ಲಿ ಹೊತ್ತು ಸಾಗಿಸುವ ಅಣುಕು ಪ್ರದರ್ಶನವನ್ನೂ ನಡೆಸಿದರು.
ಪಿಎಂ ಗ್ರಾಮ ಸಡಕ್ ಯೋಜನೆಯಡಿ ಈ ರಸ್ತೆಗೆ ಅನುದಾನ ಬಿಡುಗಡೆಯಾಗಿದೆ ಎಂಬ ಮಾಹಿತಿ ಇದ್ದರೂ, ಕಾಮಗಾರಿ ಇನ್ನೂ ಆರಂಭವಾಗದಿರುವುದಕ್ಕೆ ಕಾರಣವೇನು ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಸ್ಥಳೀಯ ಮುಖಂಡರು, ಶಾಸಕರು ಹಾಗೂ ಸಂಸದರ ಗಮನಕ್ಕೆ ಸಮಸ್ಯೆಯನ್ನು ಸಮರ್ಪಕವಾಗಿ ತಂದಿಲ್ಲವೇ ಎಂಬ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ರಸ್ತೆ ಈ ದುಸ್ಥಿತಿಗೆ ತಲುಪಿದೆ ಎಂದು ಆರೋಪಿಸಿದ ಗ್ರಾಮಸ್ಥರು, ತಕ್ಷಣ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಪಕ್ಷಾತೀತವಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶಿವಪ್ಪ ಸಂಪಳ್ಳಿ, ಶೇಖರಪ್ಪ ಕಣಬಂದೂರು, ಜಯಪ್ರಕಾಶ್, ಗಣೇಶ, ಕರಡಿಗ ರಾಮು, ಗಣೇಶ್ ಸಂಪಳ್ಳಿ, ಜಯಪ್ರಕಾಶ್ ಸಂಪಳ್ಳಿ, ಪ್ರಕಾಶ್ ಕರಡಿಗ, ಮಂಜುನಾಥ್ ಬೆಳಕೋಡು, ಲಕ್ಕಪ್ಪ, ಲಿಂಗಪ್ಪ, ಉಮೇಶ್, ಶ್ರೇಯಸ್, ನಾಗರಾಜ, ಗಂಗಾಧರ, ಪ್ರಕಾಶ್, ರಾಘು, ತಿಮ್ಮನಾಯ್ಕ, ಯೋಗೇಂದ್ರ, ವಾಸು, ಮಂಜುನಾಥ, ಭೀಮರಾಜ್, ಗುಂಡಪ್ಪ, ಲೋಕಪ್ಪ, ಪುನೀತ್, ಮಧು, ಹರೀಶ್ ಸೇರಿದಂತೆ ಕರಡಿಗ, ಬೆಳಕೋಡು, ಕೊಳವಳ್ಳಿ ಹಾಗೂ ಸಂಪಳ್ಳಿ ಗ್ರಾಮದ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಸಾಗರ ಗ್ರಾಮಾಂತರ ಠಾಣೆಯ ನೂತನ ಪಿಎಸ್ಐ ಆಗಿ ಶಂಕರ್ ಗೌಡ ಪಾಟೀಲ್ ನೇಮಕ PSI Shankar Gowda Patil has…
ಶತಮಾನದ ಸಂಭ್ರಮದಲ್ಲಿ ರಿಪ್ಪನ್ಪೇಟೆ ಬಾಲಕರ ಶಾಲೆ: ಸೆ. 3ಕ್ಕೆ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ Ripponpete Government Model Boys…
ಪ್ಲಾಸ್ಟಿಕ್ ಚೀಲಗಳ ನಡುವೆ ಅಡಗಿದ್ದ 7.5 ಅಡಿ ಬೃಹತ್ ಹೆಬ್ಬಾವು ಸೆರೆ A 7.5-foot-long, 10 kg giant python…
ಈದ್ ಮಿಲಾದ್ - ಗಣೇಶೋತ್ಸವಕ್ಕೆ ಅನುಮತಿ ಇಲ್ಲದೆ ಡಿಜೆ ಹಾಕಿದರೆ ಕೇಸ್ ! ಸೌಂಡ್ ಸಿಸ್ಟಂ ಮಾಲೀಕರಿಗೆ ಪೊಲೀಸರಿಂದ ಖಡಕ್…
ಅಕ್ರಮ ಜಂಬಿಟ್ಟಿಗೆ ಕಲ್ಲು ಕ್ವಾರಿಗೆ ತಹಶೀಲ್ದಾರ್ ದಿಢೀರ್ ದಾಳಿ; ಜೆಸಿಬಿ ವಶಕ್ಕೆ, ಪ್ರಕರಣ ದಾಖಲು Sagar Tahsildar Dr. Prathibha…
ಗೋಡಾನ್ ಜಾಲರಿ ಮುರಿದು ಅಡಕೆ ಕಳವು; ₹2.50 ಲಕ್ಷ ಮೌಲ್ಯದ 4.80 ಕ್ವಿಂಟಾಲ್ ಅಡಕೆ ದೋಚಿದ ಕಳ್ಳರು Thieves broke…