ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಗ್ರಾಮಸ್ಥರ ಪ್ರತಿಭಟನೆ; ಹೆದ್ದಾರಿಪುರ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ
Villagers protest by planting paddy on a damaged road in Heddaripur Gram Panchayat limits, demanding immediate repair of the key road connecting Sampalli, Karadiga, Belakodu and Kolavalli villages.
ರಿಪ್ಪನ್ ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಳ್ಳಿ, ಕರಡಿಗ, ಬೆಳಕೋಡು ಹಾಗೂ ಕೊಳವಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟಿರುವುದನ್ನು ಖಂಡಿಸಿ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದರು.
ಸುಮಾರು 3–4 ಕಿ.ಮೀ. ಉದ್ದದ ಈ ರಸ್ತೆ ಮಳೆಗಾಲದಲ್ಲಿ ಕೆಸರುಗದ್ದೆಯಾಗಿ ಮಾರ್ಪಡುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿಗೆ ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಹಿಂದೆ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಸ್ಥಳಕ್ಕೆ ಕರೆತಂದು ರಸ್ತೆಯ ದುಸ್ಥಿತಿಯನ್ನು ತೋರಿಸಿದ್ದರೂ, ‘ಅನುದಾನ ಬರಲಿ, ರಸ್ತೆ ಮಾಡೋಣ’ ಎಂಬ ಉತ್ತರ ಮಾತ್ರ ದೊರೆತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರೊಬ್ಬರು, “ನಮಗೆ ವಿಷ ಕೊಟ್ಟು ಬಿಡಿ, ನಾವು ನಿಮಗೆ ಹೇಳೋದು ಹಾಗೂ ನೀವು ಕೇಳೋದು ಎಲ್ಲಾ ಒಮ್ಮೆಗೆ ಮುಗಿದು ಹೋಗಲಿ” ಎಂದು ವ್ಯವಸ್ಥೆಯ ವಿರುದ್ಧ ಬೇಸರ ಹೊರಹಾಕಿದರು.
ರಸ್ತೆಯ ದುಸ್ಥಿತಿಯಿಂದ ತುರ್ತು ಸಂದರ್ಭದಲ್ಲಿಯೂ ಆಂಬ್ಯುಲೆನ್ಸ್ ಗ್ರಾಮಗಳಿಗೆ ತಲುಪಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಇದನ್ನು ಬಿಂಬಿಸುವ ಸಲುವಾಗಿ ರೋಗಿಯೊಬ್ಬರನ್ನು ಮರದ ಕಂಬದಲ್ಲಿ ಹೊತ್ತು ಸಾಗಿಸುವ ಅಣುಕು ಪ್ರದರ್ಶನವನ್ನೂ ನಡೆಸಿದರು.
ಪಿಎಂ ಗ್ರಾಮ ಸಡಕ್ ಯೋಜನೆಯಡಿ ಈ ರಸ್ತೆಗೆ ಅನುದಾನ ಬಿಡುಗಡೆಯಾಗಿದೆ ಎಂಬ ಮಾಹಿತಿ ಇದ್ದರೂ, ಕಾಮಗಾರಿ ಇನ್ನೂ ಆರಂಭವಾಗದಿರುವುದಕ್ಕೆ ಕಾರಣವೇನು ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಸ್ಥಳೀಯ ಮುಖಂಡರು, ಶಾಸಕರು ಹಾಗೂ ಸಂಸದರ ಗಮನಕ್ಕೆ ಸಮಸ್ಯೆಯನ್ನು ಸಮರ್ಪಕವಾಗಿ ತಂದಿಲ್ಲವೇ ಎಂಬ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ರಸ್ತೆ ಈ ದುಸ್ಥಿತಿಗೆ ತಲುಪಿದೆ ಎಂದು ಆರೋಪಿಸಿದ ಗ್ರಾಮಸ್ಥರು, ತಕ್ಷಣ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಪಕ್ಷಾತೀತವಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಶಿವಪ್ಪ ಸಂಪಳ್ಳಿ, ಶೇಖರಪ್ಪ ಕಣಬಂದೂರು, ಜಯಪ್ರಕಾಶ್, ಗಣೇಶ, ಕರಡಿಗ ರಾಮು, ಗಣೇಶ್ ಸಂಪಳ್ಳಿ, ಜಯಪ್ರಕಾಶ್ ಸಂಪಳ್ಳಿ, ಪ್ರಕಾಶ್ ಕರಡಿಗ, ಮಂಜುನಾಥ್ ಬೆಳಕೋಡು, ಲಕ್ಕಪ್ಪ, ಲಿಂಗಪ್ಪ, ಉಮೇಶ್, ಶ್ರೇಯಸ್, ನಾಗರಾಜ, ಗಂಗಾಧರ, ಪ್ರಕಾಶ್, ರಾಘು, ತಿಮ್ಮನಾಯ್ಕ, ಯೋಗೇಂದ್ರ, ವಾಸು, ಮಂಜುನಾಥ, ಭೀಮರಾಜ್, ಗುಂಡಪ್ಪ, ಲೋಕಪ್ಪ, ಪುನೀತ್, ಮಧು, ಹರೀಶ್ ಸೇರಿದಂತೆ ಕರಡಿಗ, ಬೆಳಕೋಡು, ಕೊಳವಳ್ಳಿ ಹಾಗೂ ಸಂಪಳ್ಳಿ ಗ್ರಾಮದ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಸಚಿವ ಸಂಪುಟದ ಖಾತೆ ಹಂಚಿಕೆ ಫೈನಲ್: ಹಿರಿಯ ಸಚಿವರ ಖಾತೆಗಳಲ್ಲೂ ಭಾರೀ ಬದಲಾವಣೆ!10 ದಿನಗಳ ಕುತೂಹಲಕ್ಕೆ ತೆರೆ - ಇಲ್ಲಿದೆ…
ಉಳ್ಳೂರು ಕೆರೆ ಬಳಿ ಮರಕ್ಕೆ ಢಿಕ್ಕಿ ಹೊಡೆದ ಕಂಟೇನರ್ ಲಾರಿ A container lorry lost control and collided…
ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ತಂಬಾಕು–ನಿಕೋಟಿನ್ ಉತ್ಪನ್ನಗಳ ಸಂಪೂರ್ಣ ನಿಷೇಧ Karnataka government bans manufacture, storage, transport,…
ಕೆಂಚನಾಲ ಮಾರಿಕಾಂಬಾ ಜಾತ್ರಾ ಮಹೋತ್ಸವ: ಭಕ್ತಿಭಾವದ ಸಾಗರದಲ್ಲಿ ಮಿಂದೆದ್ದ ಭಕ್ತ ಸಮೂಹ Kenchanaala Marikamba Jatre was celebrated with…
ಹಸೆಮಣೆಗಿಂತ ವೃತ್ತಿಜೀವನಕ್ಕೆ ಆದ್ಯತೆ: ಬದಲಾಗುತ್ತಿರುವ ಭಾರತೀಯ ಮಹಿಳೆಯರ ಮನಸ್ಥಿತಿ! Changing trends among Indian women show a growing…
ಮಳೆಯಿಂದ ಬಸ್ ನಿಲ್ದಾಣದಲ್ಲಿ ನಿಂತಿದ್ದವರು ಪೊಲೀಸರ ಬಲೆಗೆ : ಸಾವಿರಾರು ಮೌಲ್ಯದ ಗಾಂಜಾ ವಶ Three people were arrested…