Headlines

ಐದು ವರ್ಷ ಹಿಂದಿನ ದರೋಡೆ ಪ್ರಕರಣಕ್ಕೆ ತೀರ್ಪು – ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಐದು ವರ್ಷ ಹಿಂದಿನ ದರೋಡೆ ಪ್ರಕರಣಕ್ಕೆ ತೀರ್ಪು – ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ

A Shivamogga court sentenced an accused to seven years of rigorous imprisonment and imposed a ₹10,000 fine in a five-year-old robbery case involving cash and a mobile phone.

ಶಿವಮೊಗ್ಗ, ಜುಲೈ 2: ಐದು ವರ್ಷಗಳ ಹಿಂದೆ ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆಯ ರಾಘವೇಂದ್ರ ಕ್ಲಾತ್ ಸಮೀಪ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಗೆ ಶಿವಮೊಗ್ಗ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿವರಗಳ ಪ್ರಕಾರ, 2021ರ ಮೇ 4ರಂದು ರಾತ್ರಿ ಸುಮಾರು 2.45ರ ವೇಳೆಗೆ ಆರೋಪಿ ಮೊಹಮ್ಮದ್ ನೂರುಲ್ಲಾ, ಮೊಹಮ್ಮದ್ ತಬರಕ್ ಉಲ್ಲಾ ಹಾಗೂ ಸೈಯದ್ ಅಹಮ್ಮದ್ ಅವರು ದೂರುದಾರರಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ₹500 ನಗದು ಹಾಗೂ ಸುಮಾರು ₹12,000 ಮೌಲ್ಯದ ಮೊಬೈಲ್ ಫೋನ್ ದರೋಡೆ ಮಾಡಿದ್ದರು. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿ ಸಂಜೀವ್ ಕುಮಾರ್ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ವಿಚಾರಣೆ ವೇಳೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದ್ದರು. ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿಗಳಲ್ಲಿ ಮೊಹಮ್ಮದ್ ನೂರುಲ್ಲಾ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು ಆರೋಪಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

About The Author

Exit mobile version