Headlines

ಕುತ್ತಿಗೆ ಸೀಳಿ ವೃದ್ಧೆ ಹತ್ಯೆ: ಆರೋಪಿಗೆ ಜೀವಾವಧಿ ಶಿಕ್ಷೆ, ₹30 ಸಾವಿರ ದಂಡ

ಕುತ್ತಿಗೆ ಸೀಳಿ ವೃದ್ಧೆ ಹತ್ಯೆ: ಆರೋಪಿಗೆ ಜೀವಾವಧಿ ಶಿಕ್ಷೆ, ₹30 ಸಾವಿರ ದಂಡ

Shivamogga court sentences a 48-year-old man to life imprisonment and imposes a ₹30,000 fine for the 2023 murder of a 60-year-old woman over a property dispute in Suttukote village.

ಶಿವಮೊಗ್ಗ, ಜೂನ್ 25: ಆಸ್ತಿ ಹಂಚಿಕೆ ವಿಚಾರದಲ್ಲಿ ಉಂಟಾಗಿದ್ದ ವೈಷಮ್ಯದ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರನ್ನು ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಆರೋಪಿಗೆ ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ತೀರ್ಪು ನೀಡಿದೆ.

ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದ ಹನುಮಂತ್ ನಾಯ್ಕ್ (48) ಶಿಕ್ಷೆಗೆ ಗುರಿಯಾದ ಆರೋಪಿ.

ಪ್ರಕರಣದ ವಿವರದಂತೆ, ಆರೋಪಿ ಹನುಮಂತ್ ನಾಯ್ಕ್ ತನ್ನ ಮನೆಯ ಒಂದು ಭಾಗದಲ್ಲಿ ಜ್ಯೋತಿಬಾಯಿ ಎಂಬುವರಿಗೆ ವಾಸಿಸಲು ಅವಕಾಶ ನೀಡಿದ್ದ. ಇದೇ ವೇಳೆ ಆಸ್ತಿ ಹಂಚಿಕೆ ವಿಚಾರದಲ್ಲಿ ರತ್ನಾಬಾಯಿ (60) ತಮ್ಮನ್ನು ಮೋಸಗೊಳಿಸಿದ್ದು ಹಾಗೂ ಗ್ರಾಮಸ್ಥರ ಮುಂದೆ ಅವಮಾನ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಜ್ಯೋತಿಬಾಯಿ ಮತ್ತು ಹನುಮಂತ್ ನಾಯ್ಕ್ ಅವರು ರತ್ನಾಬಾಯಿ ವಿರುದ್ಧ ವೈಷಮ್ಯ ಹೊಂದಿದ್ದರು.

2023ರ ಮಾರ್ಚ್ 15ರಂದು ರಾತ್ರಿ ರತ್ನಾಬಾಯಿ ಅವರು ಹನುಮಂತ್ ನಾಯ್ಕ್ ಮನೆಯ ಮುಂಭಾಗದ ಕಟ್ಟೆಯ ಮೇಲೆ ಮಲಗಿದ್ದ ವೇಳೆ, ಆರೋಪಿ ಚಾಕುವಿನಿಂದ ಅವರ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಪೊಲೀಸ್ ಇನ್‌ಸ್ಪೆಕ್ಟರ್ ತಿಪ್ಪೆಸ್ವಾಮಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಅಭಯ್ ಧನಪಾಲ್ ಚೌಗಲ ಅವರು ಆರೋಪದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೂನ್ 24ರಂದು ಜೀವಾವಧಿ ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.

About The Author

Exit mobile version