
ಯುವ ಕವಿ ಮಂಜುನಾಥ ಭಂಡಾರಿ ಅವರ “ಚೈತ್ರ ಚೇತನ” ಕವನ ಸಂಕಲನ ಬಿಡುಗಡೆ
The “Chaitra Chetana” poetry collection by young poet and writer Manjunath Bhandari was released in a literary and cultural event attended by writers, poets, and literature lovers.
ರಿಪ್ಪನ್ ಪೇಟೆ : ಪಟ್ಟಣದ ಯುವ ಕವಿ ಹಾಗೂ ಸಾಹಿತಿ ಮಂಜುನಾಥ ಭಂಡಾರಿ ಅವರ “ಚೈತ್ರ ಚೇತನ” ಕವನ ಸಂಕಲನ ಬಿಡುಗಡೆ ಸಮಾರಂಭವು ಭಾನುವಾರ ಗ್ರಾಮ ಪಂಚಾಯತಿ ಸಭಾಂಗಣದ ಕುವೆಂಪು ಸಭಾಭವನದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ನೆರವೇರಿತು.
ಹಿರಿಯ ಸಾಹಿತಿ ಶ್ರೀಪತಿ ಹಳಗುಂದ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿ, ಇಂದಿನ ವೇಗದ ಯುಗದಲ್ಲಿ ಸಾಹಿತ್ಯವು ಕೇವಲ ಮನರಂಜನೆಯ ಸಾಧನವಲ್ಲ, ಸಮಾಜದ ಒಳಹೊಕ್ಕ ಚಿಂತನೆಗಳನ್ನು ಹೊರತರುವ ಶಕ್ತಿಯಾಗಿದೆ ಎಂದು ಹೇಳಿದರು.
“ಚೈತ್ರ ಚೇತನ” ಕವನ ಸಂಕಲನದಲ್ಲಿ ಜೀವನ ಮೌಲ್ಯಗಳು, ಗ್ರಾಮೀಣ ಬದುಕಿನ ಸ್ಪಂದನೆ ಹಾಗೂ ಮಾನವೀಯತೆ ಸ್ಪಷ್ಟವಾಗಿ ವ್ಯಕ್ತವಾಗಿವೆ. ಯುವ ಕವಿಗಳು ಸಮಾಜದ ನೋವು-ನಲಿವುಗಳನ್ನು ಸಾಹಿತ್ಯದ ಮೂಲಕ ದಾಖಲಿಸುವ ಕಾರ್ಯ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ತ.ಮ. ನರಸಿಂಹ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯ ಚಟುವಟಿಕೆಗಳು ಹೆಚ್ಚುತ್ತಿರುವುದು ಕನ್ನಡ ಭಾಷೆಯ ಆರೋಗ್ಯಕರ ಬೆಳವಣಿಗೆಯ ಸಂಕೇತವಾಗಿದೆ ಎಂದು ಹೇಳಿದರು. ಕವಿತೆಗಳು ಮಾನವನ ಅಂತರಂಗವನ್ನು ಜಾಗೃತಿಗೊಳಿಸುವ ಶಕ್ತಿ ಹೊಂದಿವೆ ಎಂದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕಾಮತ್ ಮಾತನಾಡಿ, ಸಾಹಿತ್ಯವು ಸಮಾಜವನ್ನು ಒಗ್ಗೂಡಿಸುವ ಸೇತುವೆಯಾಗಿದ್ದು, ಹೊಸ ಕವಿಗಳಿಗೆ ವೇದಿಕೆ ಸಿಗಬೇಕಾಗಿದೆ. ಈ ರೀತಿಯ ಕಾರ್ಯಕ್ರಮಗಳು ಹೊಸ ಪ್ರತಿಭೆಗಳಿಗೆ ಉತ್ತೇಜನ ನೀಡುತ್ತವೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಹನುಮಂತ ಅನಂತ ಪಾಟೀಲ ಸಾಹಿತ್ಯದ ಮೌಲ್ಯಗಳ ಕುರಿತು ಮಾತನಾಡಿದರೆ, ಸಾಹಿತ್ಯಾಸಕ್ತ ಕೆ. ಮೋಹನ್ ಕೃತಿಯ ಸಾಹಿತ್ಯಿಕ ಗುಣಗಳನ್ನು ಪ್ರಶಂಸಿಸಿದರು.
ಕಾರ್ಯಕ್ರಮಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಎಂ.ಎಂ. ಪರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಬೀಬ್, ಪಿ. ರಮೇಶ್ ಹಾಗೂ ಟಿ.ಆರ್. ಕೃಷ್ಣಪ್ಪ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕವಿ ಎಂ. ಮಂಜುನಾಥ ಭಂಡಾರಿ ಮಾತನಾಡಿ, “ಕಾವ್ಯವು ನನ್ನ ಆತ್ಮದ ಅಭಿವ್ಯಕ್ತಿ. ಸಮಾಜದಲ್ಲಿ ಕಾಣುವ ಅನುಭವಗಳು, ನೋವುಗಳು ಮತ್ತು ಬದುಕಿನ ಸಣ್ಣ ಸಣ್ಣ ಸ್ಪಂದನೆಗಳೇ ಈ ಸಂಕಲನಕ್ಕೆ ಪ್ರೇರಣೆ,” ಎಂದು ಹೇಳಿದರು.
ಶಿಕ್ಷಕಿ ಅಂಬಿಕಾ ಕಾರ್ಯಕ್ರಮ ನಿರೂಪಣೆ ನಡೆಸಿದರು. ಸಾಹಿತ್ಯಾಸಕ್ತರು, ಕವಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




