ಜ್ಞಾನದ ಕಿರೀಟ, ಕೊರಳಲ್ಲಿ 4 ಚಿನ್ನದ ಪದಕ: ಕುವೆಂಪು ವಿವಿಯಲ್ಲಿ ಬಿಲ್ಲೇಶ್ವರದ ಐಶ್ವರ್ಯ ಮೆರುಗು!
ಕುವೆಂಪು ವಿವಿ ಘಟಿಕೋತ್ಸವ: ಎಂ.ಎಸ್ಸಿ ಸಸ್ಯಶಾಸ್ತ್ರದಲ್ಲಿ ಪ್ರಥಮ ರ್ಯಾಂಕ್
Aishwarya E M from Hosanagara secured the 1st rank and 4 gold medals in M.Sc Botany at the Kuvempu University Convocation. Read about her inspiring journey.
ಹೊಸನಗರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಕಾಶ ಮತ್ತು ಸೂಕ್ತ ವಾತಾವರಣ ಸಿಕರೆ ಯಾವುದೇ ಉನ್ನತ ಸಾಧನೆಯನ್ನಾದರೂ ಮಾಡಬಲ್ಲರು ಎಂಬುದನ್ನು ಮಲೆನಾಡಿನ ಹೊಸನಗರ ತಾಲೂಕಿನ ಯುವತಿಯೊಬ್ಬರು ಸಾಬೀತುಪಡಿಸಿದ್ದಾರೆ.
ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಅದ್ಧೂರಿ ಘಟಿಕೋತ್ಸವದಲ್ಲಿ ಕುಮಾರಿ ಐಶ್ವರ್ಯ ಇ. ಎಂ ಅವರು ಸ್ನಾತಕೋತ್ತರ ಪದವಿ ಎಂ.ಎಸ್ಸಿ ಸಸ್ಯಶಾಸ್ತ್ರ (ಬಾಟನಿ) ವಿಭಾಗದಲ್ಲಿ ಇಡೀ ವಿಶ್ವವಿದ್ಯಾಲಯಕ್ಕೇ ಪ್ರಥಮ ರ್ಯಾಂಕ್ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬರೋಬ್ಬರಿ 4 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡು ತಮ್ಮ ತಾಲೂಕಿಗೆ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಹೊಸನಗರ ತಾಲ್ಲೂಕಿನ ಬಿಲ್ಲೇಶ್ವರ ಸಮೀಪದ ಕುಗ್ರಾಮವಾದ ಈಚಲಕೊಪ್ಪದ ನಿವಾಸಿಗಳಾದ ಶಶಿಕಲಾ ಹಾಗೂ ಮಲ್ಲಪ್ಪ ದಂಪತಿಗಳ ಸುಪುತ್ರಿಯಾಗಿರುವ ಐಶ್ವರ್ಯ ಅವರ ಈ ಸಾಧನೆ ಇಡೀ ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದರೂ, ಭೌಗೋಳಿಕ ಮಿತಿಗಳೆಲ್ಲವನ್ನೂ ಮೀರಿ ನಿಂತ ಐಶ್ವರ್ಯ, ತಮ್ಮ ನಿರಂತರ ಪರಿಶ್ರಮ, ಗುರಿಯೆಡೆಗಿನ ಅಚಲ ಶ್ರದ್ಧೆ ಹಾಗೂ ಕಠಿಣ ಅಭ್ಯಾಸದಿಂದ ಈ ಉನ್ನತ ಮಟ್ಟವನ್ನು ತಲುಪಿದ್ದಾರೆ. ಚಿನ್ನದ ಪದಕ ಕೊರಳಿಗೇರಿಸಿಕೊಂಡ ಮಗಳನ್ನು ಕಂಡು ಪೋಷಕರ ಕಣ್ಣಲ್ಲಿ ಆನಂದಭಾಷ್ಪ ಮೂಡಿತ್ತು.
ಬಾಲ್ಯದಿಂದಲೇ ಓದಿನಲ್ಲಿ ಅತೀವ ಆಸಕ್ತಿ ಹೊಂದಿದ್ದ ಈ ಪ್ರತಿಭಾವಂತೆ, ತಮ್ಮ ಶೈಕ್ಷಣಿಕ ಹಾದಿಯಲ್ಲಿ ಸತತವಾಗಿ ಅತ್ಯುನ್ನತ ಶ್ರೇಣಿಯನ್ನೇ ಕಾಯ್ದುಕೊಂಡು ಬಂದಿದ್ದಾರೆ. ಇವರ ಪ್ರಾಥಮಿಕ ಶಿಕ್ಷಣವು ಕೋಣಂದೂರಿನ ನವಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ಬಳಿಕ ಕೋಣಂದೂರಿನ ಪ್ರಸಿದ್ಧ ಎನ್.ಹೆಚ್.ಎಸ್ (NHS) ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿ, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ತರುವಾಯ ಗರ್ತಿಕೆರೆ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮುಗಿಸಿ, ಉನ್ನತ ಶಿಕ್ಷಣದ ಕನಸಿನೊಂದಿಗೆ ಸಾಗರದ ಇಂದಿರಾಗಾಂಧಿ ಮಹಿಳಾ ಕಾಲೇಜಿನಲ್ಲಿ ಬಿಎಸ್ ಸಿ ಪದವಿ ಪಡೆದರು. ಪ್ರತಿಯೊಂದು ಹಂತದಲ್ಲಿಯೂ ತಮ್ಮ ಜ್ಞಾನದಾಹವನ್ನು ಹೆಚ್ಚಿಸಿಕೊಳ್ಳುತ್ತಾ ಬಂದ ಐಶ್ವರ್ಯ, ಇಂದು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಬೆಳೆ ತೆಗೆದಿದ್ದಾರೆ.
ಮಲೆನಾಡಿನ ಮಣ್ಣಿನ ಮಗಳ ಈ ಸುವರ್ಣ ಸಾಧನೆ ಈ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿದೆ. ಸಸ್ಯಶಾಸ್ತ್ರದಂತಹ ಕಠಿಣ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿ, ವಿಶ್ವವಿದ್ಯಾಲಯದ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಿರುವುದು ಸಾಮಾನ್ಯ ವಿಷಯವಲ್ಲ.
ಐಶ್ವರ್ಯ ರವರ ಈ ಅದ್ವಿತೀಯ ಹಾಗೂ ಹೆಮ್ಮೆಯ ಸಾಧನೆಗೆ ‘ಪೋಸ್ಟ್ ಮ್ಯಾನ್ ನ್ಯೂಸ್’ ಬಳಗವು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಮುಂದಿನ ದಿನಗಳಲ್ಲಿ ಇವರು ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆದು, ನಾಡಿಗೆ ಕೀರ್ತಿ ತರುವಂತಾಗಲಿ ಎಂದು ಶುಭಕೋರುತ್ತದೆ.




