ಕೊಳವಂಕ ವ್ಯಾಪ್ತಿಯಲ್ಲಿ ಕಾಡಾನೆ ಪ್ರತ್ಯಕ್ಷ: ಅರಣ್ಯ ಇಲಾಖೆಯ ಕಾರ್ಯಾಚರಣೆ, ಸಾರ್ವಜನಿಕರಿಗೆ ಎಚ್ಚರಿಕೆ
ಆನೆ ಸುರಕ್ಷಿತ ಸ್ಥಳಾಂತರಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಖಡಕ್ ಸೂಚನೆ
A lone wild elephant was spotted near Kolavanka limits in Ripponpet, causing panic among villagers. Forest officials launched an operation to drive the elephant back safely into the forest, while MLA Beluru Gopalakrishna issued strict instructions to ensure public safety.
ರಿಪ್ಪನ್ ಪೇಟೆ: ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಗ ಗ್ರಾಮದ ಕಲ್ಲುಹಳ್ಳ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಒಂಟಿ ಕಾಡಾನೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಆನೆಯನ್ನು ಅರಣ್ಯ ಪ್ರದೇಶದತ್ತ ಓಡಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಾರ್ವಜನಿಕರಿಗೆ ಹಾಗೂ ತೋಟ-ಬೆಳೆಗಳಿಗೆ ಯಾವುದೇ ಹಾನಿ ಆಗದಂತೆ ಕ್ರಮ ಕೈಗೊಳ್ಳುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅರಣ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇನ್ನೂ ಸ್ಥಳಕ್ಕೆ ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸ್ಥಳೀಯರ ಪ್ರಕಾರ, ಬೆಳಿಗ್ಗೆ ಸುಮಾರು 5:30ರ ವೇಳೆಗೆ ಕಲ್ಲುಹಳ್ಳದ ನ್ಯಾಯಬೆಲೆ ಅಂಗಡಿ ಸಮೀಪ ಕಾಣಿಸಿಕೊಂಡ ಆನೆ, ಬಳಿಕ ಮನೆಗಳ ಹತ್ತಿರದಿಂದ ಸಾಗುತ್ತ ತೋಟ ಪ್ರದೇಶಕ್ಕೆ ನುಗ್ಗಿದೆ. ನಂತರ ಹಾರೋಹಿತ್ಲು ಗ್ರಾಮದ ದಿಕ್ಕಿನಲ್ಲಿ ಸಂಚರಿಸಿದೆ ಎಂದು ತಿಳಿದುಬಂದಿದೆ.
ಈ ಭಾಗದಲ್ಲಿ ಆನೆಗಳ ಸಂಚಾರ ಸಾಮಾನ್ಯವಾಗಿದ್ದರೂ, ಮನೆಗಳು ಹಾಗೂ ತೋಟಗಳ ಅತಿ ಸಮೀಪದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದೆ. ಆದರೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಆನೆ ಕಂಡುಬಂದ ಪ್ರದೇಶಗಳಿಗೆ ಅನಾವಶ್ಯಕವಾಗಿ ತೆರಳದೇ ಎಚ್ಚರಿಕೆಯಿಂದ ಇರಲು ಮನವಿ ಮಾಡಿದೆ.




