Headlines

ಪಾದಯಾತ್ರೆಗೆ ತಾಲ್ಲೂಕಿನ ವಿವಿಧ ಸಂಘಟನೆಗಳ, ಸಾರ್ವಜನಿಕರ ಅಭೂತ ಪೂರ್ವ ಬೆಂಬಲಕ್ಕೆ ಹೋರಾಟಗಾರರ ಮನವಿ

ಪಾದಯಾತ್ರೆಗೆ ತಾಲ್ಲೂಕಿನ ವಿವಿಧ ಸಂಘಟನೆಗಳ ಸಾರ್ವಜನಿಕರ ಅಭೂತ ಪೂರ್ವ ಬೆಂಬಲಕ್ಕೆ ಹೋರಾಟಗಾರರ ಮನವಿ

ರಿಪ್ಪನ್‌ಪೇಟೆ;-ಏಪ್ರಿಲ್ 5 ಮತ್ತು 6 ರಂದು ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿಸಿ ತಾಲ್ಲೂಕಿನ ನಗರದಿಂದ ಸುಮಾರು 45 ಕಿ.ಮೀ. ದೂರದ ರಿಪ್ಪನ್‌ಪೇಟೆಯವರೆಗೆ ಮಾಜಿ ಶಾಸಕ ಬಿ.ಸ್ವಾಮಿರಾವ್ ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಆಭಿನವ ಚನ್ನಬಸವ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಪಾದಯಾತ್ರೆಗೆ ತಾಲ್ಲೂಕಿನ ವಿವಿಧ ಸಂಘಟನೆಗಳ ಸಾರ್ವಜನಿಕರ ಅಭೂತ ಪೂರ್ವ ಬೆಂಬಲವನ್ನು ನೀಡುವುದರೊಂದಿಗೆ ಹೋರಾಟಕ್ಕೆ ಶಕ್ತಿಯಾಗಬೇಕು ಎಂದು ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಸಾರ್ವಜನಿಕರಿಗೆ ಕರೆ ನೀಡಿದರು.

ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜಾತಿ-ಮತ ಭೇದ ಮರೆತು ಎಲ್ಲರೂ ಒಂದಾಗಿ ಕ್ಷೇತ್ರದ ಮರುಸ್ಥಾಪನೆಗಾಗಿ ಹೋರಾಟ ನಡೆಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ.
ಎಲ್ಲಾ ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿದೆ ಎಂದರು.

ಹೊಸನಗರ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಮಾತನಾಡಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸು ಬಗ್ಗೆ ಸಾರ್ವಜನಿಕವಾಗಿ ಕೂಗು ಕೇಳಿಬರುವುದರೊಂದಿಗೆ ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತ್‌ಗಳಲ್ಲಿ ಸಭೆನಡೆಸಿ ಸಂಘಟನೆಯನ್ನು ಮಾಡುವುದರೊಂದಿಗೆ 2008 ರಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ವಿಗಂಡಿಸಿ ಸಾಗರ-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಎರಡು ಹೋಬಳಿಗಳನ್ನು ಹರಿದು ಹಂಚಲಾಗಿ ಕ್ಷೇತ್ರವನ್ನು ಜನಸೇವಕರಿಲ್ಲದೆ ಅನಾಥವನ್ನಾಗಿ ಮಾಡುವುದರೊಂದಿಗೆ ಅಭಿವೃದ್ದಿಯಲ್ಲಿ ಸಹ ಕುಂಠಿತಗೊಳ್ಳು ಕಾರಣವಾಗಿದೆ.

ಆ ಕಾರಣದಿಂದಾಗಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವ ಮೂಲಕ ಕ್ಷೇತ್ರದ ಸರ್ವಾಂಗೀಣಾಭಿವೃದ್ದಿಗೆ ಸಹಕಾರವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಸೆಳೆಯಲು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಏಪ್ರಿಲ್ 5 ರಿಂದ  ನಗರದಿಂದ ಮಾಜಿ ಶಾಸಕ ಬಿ.ಸ್ವಾಮಿರಾವ್ ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಆಭಿನವ ಚನ್ನಬಸವ ಮಹಾ ಸ್ವಾಮಿಜಿಯವರ ನೇತೃತ್ವದಲ್ಲಿ ಜಾತಿ ಬೇದ ಭಾವನೆಯಿಲ್ಲದೆ ವಿವಿಧ ಸಮಾಜದ ಸಂಘಟನೆಯವರು ಪಾದಯಾತ್ರೆ ಹೊರಟು ಹೊಸನಗರ ಕೋಡೂರು ಮಾರ್ಗವಾಗಿ ಏಪ್ರಿಲ್ 6 ರಂದು ಸಂಜೆ ಸೋಮವಾರ 4.00 ಗಂಟೆಗೆ ತಲುಪಿ ಬೃಹತ್ ಸಮಾವೇಶ ನಡೆಸುವುದರೊಂದಿಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಸದರಿಗೆ ಶಾಸಕರಿಗೆ ಕ್ಷೇತ್ರ ಮರುಸ್ಥಾಪನೆಗೆ ಒತ್ತಡ ತರಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಮಾತನಾಡಿ ಮರುವಿಂಗಡಣೆಯ ವೇಳೆ ಹೊಸನಗರ ಕ್ಷೇತ್ರವನ್ನು ವಿಂಗಡಿಸಿ ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳಿಗೆ ಹಂಚಲಾಗಿದೆ. ಇದರಿಂದ ಅಭಿವೃದ್ಧಿ ಹಿನ್ನಡೆಯಾಗಿದೆ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಹೊಸನಗರ ಕ್ಷೇತ್ರ ಮರುಸ್ಥಾಪನೆ ಅಗತ್ಯವಿದೆ ಎಂದು ಹೇಳಿದರು. ಪ್ರತಿಯೊಂದು ಮನೆಯಿಂದ ಕನಿಷ್ಠ ಒಬ್ಬರು ಪಾದಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎನ್.ವರ್ತೇಶ, ಜಿ.ಡಿ.ಮಲ್ಲಿಕಾರ್ಜುನ, ಡಿ.ಈ.ಮಧುಸೂದನ್, ಜೆ.ಎಸ್.ಚಂದ್ರಪ್ಪ, ಮುರುಳೀಧರ ಕೆರೆಹಳ್ಳಿ, ಅಶೀಫ್‌ಭಾಷಾ, ಗಣಪತಿ ಗವಟೂರು, ನೇಮಪ್ಪಬಂಡಿ, ಶ್ರೀಧರ,ನವೀನಕೆರೆಹಳ್ಳಿ ಜಾಕೀರ್ ಇನ್ನಿತರರು ಹಾಜರಿದ್ದರು.

About The Author

Exit mobile version