ಮಹಿಳಾ ಮೀಸಲಾತಿ–ಕ್ಷೇತ್ರ ವಿಂಗಡಣೆ ಮಸೂದೆ ಒಟ್ಟಿಗೆ ಮಂಡಿಸುವ ಅವಶ್ಯಕತೆ ಏನಿತ್ತು – ಕಿಮ್ಮನೆ ರತ್ನಾಕರ್ ಟೀಕೆ
Former minister Kimmane Rathnakar questions the NDA govt for introducing Women’s Reservation Bill and Delimitation Bill together, calling it politically motivated during ongoing elections.
ಶಿವಮೊಗ್ಗ : ಮಹಿಳಾ ಮೀಸಲಾತಿ ಮಸೂದೆ ಹಾಗೂ ಕ್ಷೇತ್ರ ವಿಂಗಡಣೆ ಮಸೂದೆಗಳನ್ನು ಒಂದೇ ಸಮಯದಲ್ಲಿ ಮಂಡಿಸುವ ಅವಶ್ಯಕತೆ ಏನಿತ್ತು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ. ಪಂಚರಾಜ್ಯಗಳ ಚುನಾವಣೆಯ ನಡುವೆಯೇ ಈ ಮಸೂದೆಗಳನ್ನು ತರಾತುರಿಯಲ್ಲಿ ಮಂಡಿಸಿರುವುದು ಅನುಮಾನಾಸ್ಪದವಾಗಿದೆ ಎಂದು ಅವರು ಟೀಕಿಸಿದರು.
ಮಂಗಳವಾರ ಪ್ರೆಸ್ ಟ್ರಸ್ಟ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಕೆಲವು ರಾಜ್ಯಗಳಲ್ಲಿ ಮತದಾನ ಬಾಕಿ ಇದ್ದಾಗಲೇ ಮಸೂದೆ ಮಂಡನೆ ಮಾಡಿರುವುದು ಸರಿಯಲ್ಲ. ಚುನಾವಣಾ ಫಲಿತಾಂಶಗಳ ನಂತರವೂ ಇದನ್ನು ಮಂಡಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಮುಖಂಡರು ತಾವೇ ಬುದ್ಧಿವಂತರಾಗಿದ್ದು, ಇತರರನ್ನು ತಗ್ಗಾಗಿ ನೋಡುತ್ತಿದ್ದಾರೆ. ಆದರೆ ದೇಶದ ಜನರಿಗೆ ವಾಸ್ತವ ತಿಳಿಯಲು ಆರಂಭವಾಗಿದೆ ಎಂದರು.
ಕ್ಷೇತ್ರ ಮರು ವಿಂಗಡಣೆ ಮಸೂದೆ ಯನ್ನು ಮಹಿಳಾ ಮೀಸಲಾತಿ ಮಸೂದೆಗೆ ಜೋಡಿಸಿರುವುದೇ ತಪ್ಪಾಗಿದೆ. ಈ ಎರಡಕ್ಕೂ ಸಂಬಂಧವೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಜನಗಣತಿ ವರದಿ ಬಂದ ಬಳಿಕ ಕ್ಷೇತ್ರ ವಿಂಗಡಣೆ ಮಾಡಬಹುದು ಎಂದು ಅವರು ಹೇಳಿದರು.
‘ಎರಡಕ್ಕೂ ಒಂದೇ ಮತ ಹೇಗೆ?’
ಎರಡೂ ಮಸೂದೆಗಳಿಗೆ ಒಂದೇ ಮತ ಹಾಕುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು. ಇದು ಜನರನ್ನು ಗೊಂದಲಕ್ಕೆ ತಳ್ಳುವ ಪ್ರಯತ್ನವಾಗಿದೆ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದರು. ಮಹಿಳೆಯರ ಬಗ್ಗೆ ಗೌರವವಿಲ್ಲದ ಬಿಜೆಪಿ ರಾಜಕೀಯ ಲಾಭಕ್ಕಾಗಿ ಮಸೂದೆ ಮಂಡಿಸಿದೆ ಎಂದು ಅವರು ಟೀಕಿಸಿದರು.
ಖರ್ಗೆ ಹೇಳಿಕೆಗೆ ಬೆಂಬಲ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ಮುಖಂಡರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿದ ಅವರು, ಖರ್ಗೆಯವರ ಹೇಳಿಕೆಗೆ ತಮ್ಮ ಬೆಂಬಲವಿದೆ ಎಂದರು. ದಲಿತ ಸಮುದಾಯದ ಮೇಲಿನ ಅನ್ಯಾಯದ ಹಿನ್ನೆಲೆಯಲ್ಲಿ ಅವರು ಆ ರೀತಿಯ ಮಾತು ಹೇಳಿದ್ದಾರೆ ಎಂದು ಸಮರ್ಥಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಬಿಜೆಪಿಗೆ ಚರ್ಚೆಗೆ ಸವಾಲು
ಮಹಿಳಾ ಮೀಸಲಾತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗೆ ನಾನು ಸಿದ್ಧ. ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬಿ.ವೈ. ವಿಜಯೇಂದ್ರ ಹಾಗೂ ಎಸ್.ಎನ್. ಚನ್ನಬಸಪ್ಪ ಚರ್ಚೆಗೆ ಬರಲಿ ಎಂದು ಕಿಮ್ಮನೆ ರತ್ನಾಕರ್ ಸವಾಲು ಹಾಕಿದರು.




