ಕಲ್ಲೂರು ಬಸವಣ್ಣ ದೇವಸ್ಥಾನದಲ್ಲಿ 15ನೇ ಶತಮಾನದ ವಿಜಯನಗರ ಕಾಲದ ಅಪರೂಪದ ಶಾಸನ ಪತ್ತೆ
A rare 15th-century Vijayanagara era inscription has been discovered at the Kalluru Basavanna Temple near Ripponpet, revealing historical land donation details
ರಿಪ್ಪನ್ಪೇಟೆ: ಸಮೀಪದ ಹೆದ್ದಾರಿಪುರದ ಕಲ್ಲೂರು ಗ್ರಾಮದ ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದ ಅಪರೂಪದ ‘ನಂದಿಗಂಬ ದಾನ ಶಾಸನ’ವೊಂದು ಪತ್ತೆಯಾಗಿದ್ದು, ಇದು ಈ ಭಾಗದ ಸ್ಥಳೀಯ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದೆ.
ಸಂಶೋಧಕರಾದ ಆದಿತ್ಯ ನಂಜವಳ್ಳಿ, ಗಣೇಶ್ ಕೆ.ಎನ್ ಹಾಗೂ ಪತ್ರಕರ್ತ ಎನ್.ಕಾರ್ತಿಕ್ ಕೌಂಡಿನ್ಯ ಅವರ ತಂಡ ಈ ಶಾಸನವನ್ನು ಪತ್ತೆಹಚ್ಚಿ ಅಧ್ಯಯನ ನಡೆಸಿದೆ. ಇದು ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ಆಳ್ವಿಕೆಯ ಕಾಲಕ್ಕೆ, ನಿರ್ದಿಷ್ಟವಾಗಿ 15ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂದು ಗುರುತಿಸಲಾಗಿದೆ.
ಶಾಸನದಲ್ಲಿರುವ ಮಾಹಿತಿಯ ಪ್ರಕಾರ, ಕ್ರಿ.ಶ. 1424 (ಶಕವರ್ಷ 1346)ರಲ್ಲಿ ಮೂರನೇ ಬುಕ್ಕರಾಯನ ಮಗ ಎರಡನೇ ದೇವರಾಯನು ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ ಈ ಭೂದಾನ ನಡೆದಿದೆ. ಶಾಸನದಲ್ಲಿ ಕಲ್ಲೂರು ಗ್ರಾಮವನ್ನು ‘ಕಲೂರ ನಾಡು’ ಎಂದು ಉಲ್ಲೇಖಿಸಲಾಗಿದೆ. ಆರಗದನಾಡಿನ ವ್ಯಾಪ್ತಿಗೆ ಸೇರಿದ ಈ ಕಲೂರನಾಡನ್ನು ಹಂಪಿಯ ಪ್ರಸಿದ್ಧ ವಿರೂಪಾಕ್ಷ ದೇವರಿಗೆ ಅಮೃತಪಡಿ (ನೈವೇದ್ಯ) ಸೇವೆಗಾಗಿ ಧಾರೆಯೆರೆದು ಕೊಟ್ಟಿರುವುದಾಗಿ ಶಾಸನದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಇದು ಆ ಕಾಲದಲ್ಲಿ ದೇವಾಲಯಗಳ ನಿರ್ವಹಣೆ ಮತ್ತು ಪೂಜಾ ಕಾರ್ಯಗಳಿಗೆ ಭೂದಾನ ನೀಡುವ ಮಹತ್ವದ ಪರಂಪರೆಯನ್ನು ಸಾರುತ್ತದೆ.
ಶಾಸನದಲ್ಲಿ ವಿಜಯನಗರದ ಅರಸ ಮೂರನೇ ಬುಕ್ಕರಾಯನನ್ನು “ಮಹಾರಾಜಾದಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ವಿಜಯಬುಕ್ಕರಾಯ” ಹಾಗೂ ಎರಡನೇ ದೇವರಾಯನನ್ನು “ವೀರಪ್ರತಾಪದೇವರಾಯ ಮಹಾರಾಯ” ಎಂದು ಕೊಂಡಾಡಲಾಗಿದೆ. ಅಲ್ಲದೆ, ಅಂದಿನ ಕಲೂರನಾಡಿನ ಗಡಿಭಾಗಗಳಾಗಿದ್ದ ಒಡರಸುಳಿ (ವಡಾಹೊಸಳ್ಳಿ), ಬಿದರಹಳ್ಳಿ, ತೆಳಲ (ತಳಲೆ), ಕಣಬಂದೂರು, ಕರಡಿಗ ಮತ್ತು ಕಕರಿಯ ಗ್ರಾಮಗಳ ಸ್ಪಷ್ಟ ಉಲ್ಲೇಖವಿದ್ದು, ಆ ಕಾಲದ ಭೌಗೋಳಿಕ ವ್ಯಾಪ್ತಿ ಮತ್ತು ಆಡಳಿತ ವ್ಯವಸ್ಥೆಯ ಕುರಿತು ಅಮೂಲ್ಯ ಮಾಹಿತಿ ದೊರೆತಿದೆ.
ಈ ಸಂದರ್ಭದಲ್ಲಿ ಶ್ರೀ ಬಸವಣ್ಣ ದೇವಸ್ಥಾನದ ಅಧ್ಯಕ್ಷರಾದ ನಾಗರಾಜ್ ವೈ.ಟಿ, ಗೌರವಾಧ್ಯಕ್ಷ ವೀರಭದ್ರಪ್ಪ ಗೌಡ, ಗಿರಿರಾಜ್ ಗೌಡ, ಮಂಜುನಾಥ್, ಆದರ್ಶ ಕಲ್ಲೂರು, ಶಿವಣ್ಣ, ಚಂದ್ರಹಾಸ, ಮಲ್ಲಿಕಾರ್ಜುನ, ದಾನಪ್ಪ, ಆದರ್ಶ ಮೂಗುಡ್ತಿ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
“ವಿಜಯನಗರ ಸಾಮ್ರಾಜ್ಯದ ಅಧೀನ ರಾಜ್ಯವಾಗಿ ಆರಗನಾಡು ಅಸ್ತಿತ್ವಕ್ಕೆ ಬಂದಿದ್ದರಿಂದ ಈ ನಾಡಿನ ಕೆಲವು ಪ್ರದೇಶಗಳನ್ನು ವಿಜಯನಗರ ಸಾಮ್ರಾಜ್ಯಕ್ಕೆ ದಾನ ದತ್ತಿ ಕೊಟ್ಟ ಬಗ್ಗೆ ಶಾಸನಗಳಲ್ಲಿ ಮಾಹಿತಿ ಲಭಿಸುತ್ತದೆ. ಇಲ್ಲಿ ಸಿಕ್ಕಿರುವ ಶಾಸನದಿಂದ ಅಂದಿನ ರಾಜರ ಮಾಹಿತಿ ಮಾತ್ರವಲ್ಲದೆ ಸ್ಥಳೀಯ ಗ್ರಾಮಗಳ ಗಡಿಗಳು ಲಭ್ಯವಾಗಿವೆ. ಗ್ರಾಮಗಳ ವಿಸ್ತೀರ್ಣದ ಮಾಹಿತಿ ಸ್ಥಳೀಯ ಅಧ್ಯಯನದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.”
– ಆದಿತ್ಯ ನಂಜವಳ್ಳಿ, ಸಂಶೋಧಕರು
“ನಮ್ಮ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಇಷ್ಟು ಹಳೆಯ ವಿಜಯನಗರ ಕಾಲದ ಶಾಸನ ಪತ್ತೆಯಾಗಿರುವುದು ನಮಗೆ ಹೆಮ್ಮೆಯ ವಿಷಯ. ಇದರಿಂದ ನಮ್ಮ ಕಲೂರ ನಾಡಿನ ಇತಿಹಾಸ ಎಲ್ಲರಿಗೂ ತಿಳಿಯುವಂತಾಗಿದೆ.”
– ವೀರಭದ್ರಪ್ಪ ಗೌಡ, ಸ್ಥಳೀಯರು
ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್ಮೇಲ್ ಆರೋಪ - ಕೆರೆಗೆ ಹಾರಿ ಸಾಗರದ ಯುವತಿ A 22-year-old woman from Sagara…
ಬೆದರಿಸಿ ಹಣ, ಮೊಬೈಲ್ ದೋಚಿದ್ದ ಆರೋಪಿಗಳು ಪೊಲೀಸರ ಬಲೆಗೆ Shivamogga Tunganaagar police arrested three accused in a…
ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ Six people were arrested for…
ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ South Western Railway extends temporary stoppages…
ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ Tourist bus and fish transport goods vehicle…
ಬೈಕ್ ಸವಾರನ ಮೇಲೆ ಮುಸಿಯ ದಾಳಿ; ಗಂಭೀರ ಗಾಯ A bike rider was seriously injured after a…