Two persons from Ripponpet were arrested and another is on the run after allegedly assaulting toll gate staff at Sasthan Toll Plaza in Udupi district. A case has been registered under relevant BNS sections.
ರಿಪ್ಪನ್ ಪೇಟೆ : ಉಡುಪಿ ಜಿಲ್ಲೆಯ ಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಸ್ತಾನ ಟೋಲ್ ಗೇಟ್ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪ್ಪನ್ ಪೇಟೆಯ ಇಬ್ಬರು ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯು ಪರಾರಿಯಾಗಿದ್ದು, ಅವನಿಗಾಗಿ ಹುಡುಕಾಟ ಮುಂದುವರಿದಿದೆ.
ಬಂಧಿತರನ್ನು ರಿಪ್ಪನ್ ಪೇಟೆಯ ಶಿವಮೊಗ್ಗ ರಸ್ತೆಯ ಅಡಿಕಟ್ಟು ನಿವಾಸಿ ವಿನಾಯಕ್ ಹಾಗೂ ವೆಂಕಟೇಶ್ ಪ್ರಸಾದ್ ಎಂದು ಗುರುತಿಸಲಾಗಿದೆ. ಇದೇ ಪ್ರಕರಣದಲ್ಲಿ ತೀರ್ಥಹಳ್ಳಿ ರಸ್ತೆಯ ನಿವಾಸಿ ಧನುಷ್ ಪರಾರಿಯಾಗಿದ್ದಾನೆ.
ದೂರುದಾರ ಯೋಗೀಶ್ ಕುಮಾರ್ (42) ಅವರು ಕಳೆದ 8 ವರ್ಷಗಳಿಂದ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಅಸಿಸ್ಟಂಟ್ ಟೋಲ್ ಪ್ಲಾಜಾ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ 24, 2026ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ಅವರು ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ.
ಉಡುಪಿ ಕಡೆಯಿಂದ ಕುಂದಾಪುರದತ್ತ ಸಾಗುತ್ತಿದ್ದ ಬಸ್ ಟೋಲ್ ಶುಲ್ಕ ಪಾವತಿಸುತ್ತಿದ್ದ ವೇಳೆ ಅದರ ಹಿಂದೆ KA-54-6555 ಸಂಖ್ಯೆಯ ಹೋಂಡಾ ಅಮೇಜ್ ಕಾರು ಬಂದು ನಿಂತಿತ್ತು. ಕಾರಿನಲ್ಲಿ ಮೂವರು ಇದ್ದರು. ಈ ವೇಳೆ ಕಾರಿನಲ್ಲಿದ್ದ ವೆಂಕಟೇಶ್ ಪ್ರಸಾದ್ ಎಂಬಾತನು ವಾಹನದಿಂದ ಇಳಿದು ಟೋಲ್ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ, “ಯಾಕೆ ಲೇಟ್ ಮಾಡುತ್ತೀರಾ?” ಎಂದು ಪ್ರಶ್ನಿಸಿ ಟೋಲ್ ಬ್ಯಾರಿಯರ್ಗೆ ಲಾತೆ ಹೊಡೆದು ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಅಲ್ಲದೆ, ಸಿಬ್ಬಂದಿಗಳನ್ನು ದೂಡಿ ಹಲ್ಲೆಗೆ ಯತ್ನಿಸಿದ್ದಾನೆ. ಈ ನಡುವೆ ಮತ್ತೊಬ್ಬ ಆರೋಪಿಯಾದ ವಿನಾಯಕ್ ಕಾರಿನಿಂದ ಕಬ್ಬಿಣದ ರಾಡ್ ತೆಗೆದುಕೊಂಡು ಬಂದು ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆತನ ದಾಳಿಯಿಂದ ತಪ್ಪಿಸಿಕೊಳ್ಳಲು ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದು, ಸಮಯಕ್ಕೆ ತಪ್ಪಿಸಿಕೊಂಡಿದ್ದಾರೆ. ಒಂದು ವೇಳೆ ತಪ್ಪಿಸಿಕೊಳ್ಳದಿದ್ದರೆ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪೊಲೀಸ್ ವರದಿ ತಿಳಿಸಿದೆ.
ಸ್ಥಳದಲ್ಲಿದ್ದ ಯೋಗೀಶ್ ಕುಮಾರ್ ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಇದೇ ವೇಳೆ ಕಾರಿನ ಚಾಲಕರಾಗಿದ್ದ ಧನುಷ್ ಆರೋಪಿಗಳನ್ನು ಅಲ್ಲೇ ಬಿಟ್ಟು ಕಾರಿನೊಂದಿಗೆ ಪರಾರಿಯಾಗಿದ್ದಾನೆ.
ಈ ಕುರಿತು ನೀಡಿದ ದೂರಿನ ಮೇರೆಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 47/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 115(2), 352, 110 ಜೊತೆಗೆ 3(5) ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.




