ರಿಪ್ಪನ್ ಪೇಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ

Ripponpete police introduce an online traffic fine system where rule violations like riding without a helmet or triple riding are captured via mobile cameras and fines are sent directly to vehicle owners through SMS.

ರಿಪ್ಪನ್ ಪೇಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ

ಹೆಲ್ಮೆಟ್ ಹಾಕದೇ ಪೇಟೆಗೆ ಬರ್ತೀರಾ? ಹುಷಾರ್… ಮೊಬೈಲ್‌ಗೆ ‘ಟಿನ್’ ಅಂತ ದಂಡದ ಮೆಸೇಜ್ ಬರುತ್ತೇ.!

ರಿಪ್ಪನ್ ಪೇಟೆ : “ಹೆಲ್ಮೆಟ್ ಹಾಕೋದು ಬೇಡ, ಪೊಲೀಸ್ ಕಾಣೋದೇ ಇಲ್ಲ… ಪೇಟೆಗೆ ಒಮ್ಮೆ ಸುತ್ತಿ ಬರೋಣ” ಎಂದು ಯೋಚಿಸಿ ಬೈಕ್ ಹತ್ತುವ ಸವಾರರೇ ಈಗ ಸ್ವಲ್ಪ ಜಾಗ್ರತೆ. ನೀವು ಪೊಲೀಸ್ ನೋಡದೇ ಹೋಗಬಹುದು, ಆದರೆ ಪೊಲೀಸ್ ನಿಮ್ಮನ್ನು ನೋಡದೇ ಬಿಡೋದಿಲ್ಲ!

ಇತ್ತೀಚೆಗೆ ರಿಪ್ಪನ್ ಪೇಟೆ ಪಟ್ಟಣದಲ್ಲಿ ಹೊಸ “ಅದೃಶ್ಯ” ಪೊಲೀಸ್ ವ್ಯವಸ್ಥೆ ಜಾರಿಯಾಗಿದೆ. ರಸ್ತೆಯಲ್ಲೇ ತಡೆದು ದಂಡ ಹಾಕೋ ದಿನಗಳು ಸ್ವಲ್ಪ ಕಡಿಮೆಯಾಗುತ್ತಿದ್ದು, ಈಗ ತಪ್ಪು ಮಾಡಿದ್ರೆ ನೇರವಾಗಿ ನಿಮ್ಮ ಮೊಬೈಲ್‌ಗೆ ‘ಟಿನ್’ ಅಂತ ಸಂದೇಶ ಬರುತ್ತಿದೆ. ಅದನ್ನು ತೆರೆಯುತ್ತಿದ್ದಂತೆಯೇ “ಸಂಚಾರ ನಿಯಮ ಉಲ್ಲಂಘನೆ – ದಂಡ ಪಾವತಿಸಿ” ಎಂಬ ಸಿಹಿ ಸುದ್ದಿ ಎದುರಾಗುತ್ತಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಜುರೆಡ್ಡಿ ನೇತೃತ್ವದಲ್ಲಿ ಈ ಹೊಸ ಪ್ರಯೋಗ ನಡೆಯುತ್ತಿದೆ. ಪಟ್ಟಣದ ಪ್ರಮುಖ ರಸ್ತೆಗಳ ಬಳಿ ಪೊಲೀಸ್ ಸಿಬ್ಬಂದಿ ಸುಮ್ಮನೆ ನಿಂತಿರುವಂತೆ ಕಾಣಬಹುದು. ಆದರೆ ಅವರ ಕೈಯಲ್ಲಿರುವ ಮೊಬೈಲ್ ಫೋನ್ ಕ್ಯಾಮೆರಾ ಕೆಲಸ ಮಾಡ್ತಾ ಇರುತ್ತದೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಾ ಬಂದರೆ, ಮೂವರು ಕೂತು ಸವಾರಿ ಮಾಡ್ತಾ ಬಂದರೆ ಅಥವಾ ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸುತ್ತಾ ಬಂದರೆ — ಒಂದು ಕ್ಲಿಕ್ ಸಾಕು!

ಆ ಫೋಟೋ ಜಿಪಿಎಸ್ ಮಾಹಿತಿಯೊಂದಿಗೆ ಠಾಣೆಗೆ ಹೋಗುತ್ತದೆ. ಅಲ್ಲಿಂದ ಶಿವಮೊಗ್ಗದ ಐಟಿಎಂಎಸ್ (ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್) ವಿಭಾಗಕ್ಕೆ ಕಳುಹಿಸಲಾಗುತ್ತದೆ. ನಂತರ ಅಧಿಕಾರಿಗಳು ಪರಿಶೀಲನೆ ಮಾಡಿ, ತಪ್ಪು ಖಚಿತವಾದರೆ ನಿಮ್ಮ ವಾಹನದ ನೋಂದಣಿ ಸಂಖ್ಯೆಯ ಆಧಾರದಲ್ಲಿ ದಂಡವನ್ನು ಆನ್‌ಲೈನ್ ಮೂಲಕ ನಿಮ್ಮ ಹೆಸರಿಗೆ ಕಳುಹಿಸುತ್ತಾರೆ. ಅಂದರೆ ನೀವು ಮನೆಗೆ ತಲುಪುವಷ್ಟರಲ್ಲಿ ನಿಮ್ಮ ಮೊಬೈಲ್‌ಗೆ ದಂಡದ ಸಂದೇಶ ತಲುಪುವ ಸಾಧ್ಯತೆ ಇದೆ.

ಇದರಿಂದ ರಸ್ತೆಯಲ್ಲಿ ವಾಹನ ನಿಲ್ಲಿಸಿ “ಸಾರ್ ಹೆಲ್ಮೇಟ್ ಮನೆಯಲ್ಲಿದೆ ಬಿಡಿ”, “ಹಿಂಗೇ ಹಾಲು ತಗೋಳೊಕೆ ಬಂದೆ ಸರ್ ” , ಎಂಎಲ್ ಎ ಗೆ ಪೋನ್ ಮಾಡ್ಲಾ ಸರ್ ,  “ಈ ಸಲ ಕ್ಷಮಿಸಿ”, “ಆ ರಾಜಕೀಯ ವ್ಯಕ್ತಿ ನಮ್ಮ ಸಂಭಂಧಿ ಸರ್ ” ಎಂಬ ಚರ್ಚೆಗಳಿಗೆ ಅವಕಾಶವೇ ಇಲ್ಲ .. ಪೊಲೀಸ್ ಸಿಬ್ಬಂದಿಗೂ ಕಿರಿಕಿರಿ ಕಡಿಮೆ, ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಪೊಲೀಸರ ಪ್ರಕಾರ, ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2026ರ ಮೊದಲ ಮೂರು ತಿಂಗಳಲ್ಲಿ 8 ರಸ್ತೆ ಅಪಘಾತಗಳು ಸಂಭವಿಸಿ, 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ದುರ್ಘಟನೆಗಳಲ್ಲಿ ಬಹುಪಾಲು ರಸ್ತೆ ನಿಯಮಗಳ ಪಾಲನೇ ಮಾಡದೇ ನಿರ್ಲಕ್ಷ್ಯತನದಿಣ್ದ ವಾಹನ ಚಾಲನೆ ಮಾಡಿರುವುದೇ ಕಾರಣವಾಗಿರುವುದು ಗಮನಿಸಲಾಗಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವುದು, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುವುದು, ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸುವುದು, ನಿಷಿದ್ಧ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು ಹಾಗೂ ಸರಕು ವಾಹನಗಳಲ್ಲಿ ಜನರನ್ನು ಸಾಗಿಸುವಂತಹ ತಪ್ಪುಗಳಿಗೆ ಕನಿಷ್ಠ 500 ರೂ.ವರೆಗೆ ದಂಡ ವಿಧಿಸಲಾಗುತ್ತಿದೆ.

ಹೀಗಾಗಿ ಪೇಟೆಗೆ ಬರೋ ಮೊದಲು ಬೈಕ್ ಸ್ಟಾರ್ಟ್ ಮಾಡುವ ಮೊದಲು ಹೆಲ್ಮೆಟ್ ಹಾಕಿಕೊಳ್ಳಿ. ಇಲ್ಲದಿದ್ದರೆ ಪೊಲೀಸ್ ಕಾಣದಿದ್ದರೂ, ಮೊಬೈಲ್‌ನಲ್ಲಿ “ಟಿನ್” ಅಂತ ದಂಡ ಬರುವುದನ್ನು ನೋಡಿ ಅಚ್ಚರಿ ಪಡಬೇಕಾಗಬಹುದು

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ

ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ Mother and three…

1 hour ago

ಹಿಟ್ ಅಂಡ್ ರನ್; ಬೈಕ್‌ಗೆ ಟಿಪ್ಪರ್ ಡಿಕ್ಕಿ – ಯುವತಿ ಸ್ಥಳದಲ್ಲಿಯೇ ಸಾವು

ಹಿಟ್ ಅಂಡ್ ರನ್; ಬೈಕ್‌ಗೆ ಟಿಪ್ಪರ್ ಡಿಕ್ಕಿ – ಯುವತಿ ಸ್ಥಳದಲ್ಲಿಯೇ ಸಾವು Young woman Archana Jain dies…

2 hours ago

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು Ripponpete: Akhila Karnataka Building Workers Organization district president…

18 hours ago

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಅಪೇಕ್ಷಾಗೆ ರನ್ನರ್‌ಅಪ್ ಸಾಧನೆ

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಅಪೇಕ್ಷಾಗೆ ರನ್ನರ್‌ಅಪ್ ಸಾಧನೆ Ripponpete's Apeksha K. secured second place and runner-up…

22 hours ago

ಆಗುಂಬೆಯಲ್ಲಿ ಮಕ್ಕಳೊಂದಿಗೆ ಗದ್ದೆಗಿಳಿದ ಪೊಲೀಸ್‌ ಅಧಿಕಾರಿ; ಹೂಟಿ–ನಾಟಿ ಕಲಿಸಿದ PSI ಶಿವನಗೌಡ ಪಾಟೀಲ್

ಆಗುಂಬೆಯಲ್ಲಿ ಮಕ್ಕಳೊಂದಿಗೆ ಗದ್ದೆಗಿಳಿದ ಪೊಲೀಸ್‌ ಅಧಿಕಾರಿ; ಹೂಟಿ–ನಾಟಿ ಕಲಿಸಿದ PSI ಶಿವನಗೌಡ ಪಾಟೀಲ್ Agumbe PSI Shivanagowda Patil joined…

22 hours ago

ವಿದ್ಯಾರ್ಥಿನಿಯನ್ನು ಬೆದರಿಸಿ 15 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿ

ವಿದ್ಯಾರ್ಥಿನಿಯನ್ನು ಬೆದರಿಸಿ 15 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿ College student threatened and robbed of…

2 days ago