Headlines

ಪಾರದರ್ಶಕವಾಗಿ ನೆರವೇರಿದ ಕಲಾ ಕೌಸ್ತುಭ ಸಂಘದ ಲಕ್ಕಿ ಡ್ರಾ

Kala Kaustubha Kannada Sangha successfully conducted a transparent lucky draw event in Rippon Pete as part of its 32nd Kannada Rajyotsava celebrations, earning public trust and appreciation.

ರಿಪ್ಪನ್ ಪೇಟೆ : ಪಟ್ಟಣದ ಕಲಾ ಕೌಸ್ತುಭ ಕನ್ನಡ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಲಕ್ಕಿ ಡ್ರಾ ಕಾರ್ಯಕ್ರಮವು ವಿನಾಯಕ ವೃತ್ತದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.

ಸಂಘದ 32ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ ಈ ಲಕ್ಕಿ ಡ್ರಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರ ಸಮ್ಮುಖದಲ್ಲಿ ಪಾರದರ್ಶಕವಾಗಿ ಡ್ರಾ ಪ್ರಕ್ರಿಯೆ ನಡೆಸಲಾಯಿತು.

ಲಕ್ಕಿ ಡ್ರಾದ ಪ್ರಥಮ ಬಹುಮಾನವಾದ ಎಲೆಕ್ಟ್ರಿಕ್ ಬೈಕ್ (ಟಿಕೆಟ್ ಸಂಖ್ಯೆ 1968) ನಾಗರಾಜ್ ಕೆದಲುಗುಡ್ಡೆ ಅವರಿಗೆ ಲಭಿಸಿತು. ದ್ವಿತೀಯ ಬಹುಮಾನವಾದ ಸೈಕಲ್ (ಟಿಕೆಟ್ ಸಂಖ್ಯೆ 1891) ವಿನಾಯಕ ನಗರದ ನಿಶ್ಚಲ್ ಎಸ್ ಎಂಬುವವರಿಗೆ ಲಭಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಮುಖ ಸುರೇಶ್ ಸಿಂಗ್, “ಕಲಾ ಕೌಸ್ತುಭ ಕನ್ನಡ ಸಂಘವು ಕಳೆದ 32 ವರ್ಷಗಳಿಂದ ನಿರಂತರವಾಗಿ ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಸಾಂಸ್ಕೃತಿಕ ಮತ್ತು ಕನ್ನಡಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಸಂಘದ ಕಾರ್ಯಗಳಲ್ಲಿ ಸದಾ ನಿಷ್ಠೆ ಮತ್ತು ಪಾರದರ್ಶಕತೆ ಕಾಪಾಡಲಾಗುತ್ತಿದೆ. ಇದರಿಂದ ಸಂಘವು ಸಾರ್ವಜನಿಕರ ವಿಶ್ವಾಸವನ್ನು ಗಳಿಸಿದೆ” ಎಂದು ಹೇಳಿದರು.

ಮುಖ್ಯ ಅತಿಥಿ ಮಹೇಂದ್ರ ಗೌಡ ಮಾತನಾಡಿ, “ನವೆಂಬರ್ 28, 29 ಮತ್ತು 30ರಂದು ನಡೆದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಗಿತ್ತು. ಅದರ ಅಂಗವಾಗಿ ಲಕ್ಕಿ ಡ್ರಾ ಘೋಷಿಸಲಾಗಿದ್ದರೂ ಕೆಲವು ಕಾರಣಗಳಿಂದ ನಿಗದಿತ ವೇಳೆಗೆ ನಡೆಸಲು ಸಾಧ್ಯವಾಗಿರಲಿಲ್ಲ. ಆದರೂ, ಸಂಘದ ಮೇಲಿರುವ ಸಾರ್ವಜನಿಕರ ನಂಬಿಕೆ ಅಚಲವಾಗಿದ್ದು, ಕೆಲವು ಟೀಕೆಗಳು ಫಲಿಸಿಲ್ಲ” ಎಂದು ಹೇಳಿದರು.

ಸಂಘದ ಅಧ್ಯಕ್ಷ ಮುರುಳಿಧರ್ ಕೆರೆಹಳ್ಳಿ ಮಾತನಾಡಿ, “ಕಲಾ ಕೌಸ್ತುಭ ಕನ್ನಡ ಸಂಘಕ್ಕೆ ತನ್ನದೇ ಆದ ಸಮೃದ್ಧ ಇತಿಹಾಸವಿದ್ದು, ಟೀಕೆಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ. ಕಳೆದ ಮೂವತ್ತೆರಡು ವರ್ಷಗಳಿಂದ ಸಂಘವು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಾ ಸಾರ್ವಜನಿಕರ ಅಪಾರ ವಿಶ್ವಾಸವನ್ನು ಗಳಿಸಿದೆ. ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ ಮಹಿಳೆಯರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಗಿದ್ದು, ಮಹಿಳಾ ಸಬಲೀಕರಣಕ್ಕೂ ಸಂಘ ಒತ್ತು ನೀಡಿದೆ. ಜೊತೆಗೆ ಆರೋಗ್ಯ ತಪಾಸಣಾ ಶಿಬಿರಗಳು, ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂತಹ ಸಂಘದ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸುವುದು ಸರಿಯಾದ ನಡೆ ಅಲ್ಲ” ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಸ್ಕೂಟರ್ ವಿಜೇತ ನಾಗರಾಜ್ ಕೆದಲುಗುಡ್ಡೆ ಹಾಗೂ ದ್ವಿತೀಯ ಬಹುಮಾನ ವಿಜೇತ ನಿಶಾಲ್ ರವರಿಗೆ ಮುಖ್ಯ ಅತಿಥಿ ಮಹೇಂದ್ರಗೌಡ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

About The Author

Exit mobile version