January 11, 2026

ಶಾಂತಿ–ಸಹನೆಯಿಂದಲೇ ನೆಮ್ಮದಿಯ ಜೀವನ ಸಾಧ್ಯ : ಫಾದರ್ ಬಿನೋಯ್

ಶಾಂತಿ–ಸಹನೆಯಿಂದಲೇ ನೆಮ್ಮದಿಯ ಜೀವನ ಸಾಧ್ಯ : ಫಾದರ್ ಬಿನೋಯ್

ರಿಪ್ಪನ್‌ಪೇಟೆ : ಶಾಂತಿ, ಸಹನೆ ಹಾಗೂ ಸೇವಾಭಾವದಿಂದ ಬದುಕನ್ನು ರೂಪಿಸಿಕೊಂಡರೆ ಪ್ರತಿಯೊಬ್ಬರೂ ನೆಮ್ಮದಿಯ ಜೀವನವನ್ನು ಸಾಧಿಸಬಹುದು ಎಂದು ಪಟ್ಟಣದ ಗುಡ್ ಶೆಪರ್ಡ್ ಚರ್ಚಿನ ಧರ್ಮಗುರು ಫಾದರ್ ಬಿನೋಯ್ ಹೇಳಿದರು.

ನಗರದ ಗುಡ್ ಶೆಪರ್ಡ್ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಾನವ ಜೀವನ ಒತ್ತಡದಿಂದ ತುಂಬಿದೆ. ಇಂತಹ ಪರಿಸ್ಥಿತಿಯಲ್ಲಿ ಮಾನಸಿಕ ಶಾಂತಿ ಪಡೆಯಬೇಕಾದರೆ ಸಹನೆ, ತಾಳ್ಮೆ ಹಾಗೂ ಶಾಂತಿಯ ಮಾರ್ಗವನ್ನು ಅನುಸರಿಸಬೇಕಾಗಿದೆ. ಇದೇ ಸಂದೇಶವನ್ನು ಜಗತ್ತಿಗೆ ಸಾರಲು ಯೇಸು ಕ್ರಿಸ್ತರು ಅವತರಿಸಿದರು ಎಂದು ಹೇಳಿದರು.

ಯೇಸು ಕ್ರಿಸ್ತರ ಹುಟ್ಟುಹಬ್ಬವಾದ ಕ್ರಿಸ್ಮಸ್ ಹಬ್ಬವು ಪ್ರತಿಯೊಬ್ಬರಿಗೂ ಶಾಂತಿ ಹಾಗೂ ನೆಮ್ಮದಿಯನ್ನು ನೀಡಲಿ. ಜಾತಿ, ಮತ ಹಾಗೂ ಪಂಥಗಳ ಭೇದವನ್ನು ಮರೆತು ಪರಸ್ಪರ ಸದ್ಭಾವನೆ ಹಾಗೂ ಸಹೋದರತ್ವದಿಂದ ಬದುಕಿದರೆ ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಸಾಧ್ಯವೆಂದು ಫಾದರ್ ಬಿನೋಯ್ ಅಭಿಪ್ರಾಯಪಟ್ಟರು.

ಕ್ರಿಸ್ಮಸ್ ಹಬ್ಬದ ಅಂಗವಾಗಿ ಗುಡ್ ಶೆಪರ್ಡ್ ಚರ್ಚನ್ನು ದೀಪಾಲಂಕಾರಗಳಿಂದ ಮನಮೋಹಕವಾಗಿ ಸಿಂಗರಿಸಲಾಗಿತ್ತು. ಕ್ರೈಸ್ತ ಭಕ್ತರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಧಾರ್ಮಿಕ ಕಾರ್ಯಕ್ರಮದ ನಂತರ ಆಗಮಿಸಿದ ಎಲ್ಲಾ ಭಕ್ತರಿಗೆ ಕೇಕ್ ವಿತರಿಸಲಾಯಿತು.
ಹಿರಿಯರು, ಮಕ್ಕಳು ಸೇರಿದಂತೆ ಅನೇಕರು ಕ್ರಿಸ್ಮಸ್ ತಾತನ ವೇಷಧಾರಣೆಯೊಂದಿಗೆ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದರು. ಚರ್ಚಿನ ಮುಂಭಾಗದಲ್ಲಿ ಯೇಸು ಕ್ರಿಸ್ತರ ಜನನವನ್ನು ಸಾರುವ ಗೊದಲಿ (ಮ್ಯಾಂಗರ್ ಸೀನ್) ಭಕ್ತರ ಗಮನಸೆಳೆದು ಜನಾಕರ್ಷಣೆಗೆ ಕಾರಣವಾಯಿತು.

ಒಟ್ಟಾರೆ ಶಾಂತಿ, ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರುವ ಕ್ರಿಸ್ಮಸ್ ಹಬ್ಬವನ್ನು ರಿಪ್ಪನ್‌ಪೇಟೆಯಲ್ಲಿ ಭಕ್ತಿಭಾವ ಹಾಗೂ ಉತ್ಸಾಹದಿಂದ ಆಚರಿಸಲಾಯಿತು.

About The Author

Exit mobile version