
ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಮುಖ್ಯಮಂತ್ರಿ ಅಭಿನಂದನೆ | ರಿಪ್ಪನ್ ಪೇಟೆಯ ಕಾವ್ಯಾ ಸೇರಿದಂತೆ ಕರ್ನಾಟಕದ ಮೂರು ಕ್ರೀಡಾಪಟುಗಳಿಗೆ ಬಹುಮಾನದ ಜತೆ ಸರ್ಕಾರಿ ಉದ್ಯೋಗ ಘೋಷಿಸಿದ ಸಿಎಂ
ವಿಶ್ವಕಪ್ ಜಯಿಸಿದ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯ ಕೋರಿ ಅಭಿನಂದಿಸಿದ್ದಾರೆ.
ತಂಡದಲ್ಲಿರುವ ಕರ್ನಾಟಕದ ಆಟಗಾರ್ತಿಯರ ಸಾಧನೆಗೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿ, ಅವರಿಗೆ ತಲಾ ₹10 ಲಕ್ಷ ನಗದು ಬಹುಮಾನ ಹಾಗೂ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದರು.
ಕಾವೇರಿ ನಿವಾಸದಲ್ಲಿ ತಂಡದ ಪ್ರತಿಯೊಬ್ಬ ಆಟಗಾರ್ತಿಯನ್ನು ವೈಯುಕ್ತಿಕವಾಗಿ ಸನ್ಮಾನಿಸಿದ ನಂತರ ಅವರು ಈ ಮಹತ್ವದ ಪ್ರಕಟಣೆ ಮಾಡಿದರು. ತಂಡದಲ್ಲಿರುವ ಇತರೆ ರಾಜ್ಯಗಳ 13 ಪಟುಗಳಿಗೆ ತಲಾ ₹2 ಲಕ್ಷ ನಗದು ಬಹುಮಾನ ನೀಡುವುದಾಗಿ ಕೂಡ ಮುಖ್ಯಮಂತ್ರಿ ತಿಳಿಸಿದ್ದಾರೆ.
ತಂಡದ ನಾಯಕಿ, ತುಮಕೂರು ಜಿಲ್ಲೆಯ ಶಿರಾ ಮೂಲದ ದೀಪಿಕಾ ಅವರ ನಾಯಕತ್ವ ಮತ್ತು ಆಟದ ವೈಖರಿ ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಕ್ರೀಡಾಪಟು ಕಾವ್ಯಾ ಆಚಾರ್ ರವರ ಆಟವನ್ನು ಮುಖ್ಯಮಂತ್ರಿಗಳು ವಿಶೇಷವಾಗಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಉಪಸ್ಥಿತರಿದ್ದರು.




