Headlines

ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರನ್ನು ಕೇಂದ್ರ ಪ್ರಕಟಿಸಲಿ – ಕ ಸಾ ಪ|airport

ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರನ್ನು ಕೇಂದ್ರ ಪ್ರಕಟಿಸಲಿ

ರಿಪ್ಪನ್ ಪೇಟೆ :ಶಿವಮೊಗ್ಗದ ಸೋಗಾನೆಯಲ್ಲಿ ಆರಂಭವಾಗಲಿರುವ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಕೇಂದ್ರ ಸರ್ಕಾರ ಉದ್ಘಾಟನೆಯ ದಿನದಂದು ಘೋಷಣೆ ಮಾಡಬೇಕೆಂದು ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ. ನರಸಿಂಹ ಆಗ್ರಹಿಸಿದರು.

ಶನಿವಾರ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿಯ ಕುವೆಂಪು ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ವಿಮಾನ ನಿಲ್ದಾಣದ ನಾಮ ಫಲಕಗಳಲ್ಲಿ ಕನ್ನಡ ಭಾಷೆಯನ್ನು ನಮೂದಿಸಬೇಕು . ಕನ್ನಡ ನಾಮಫಲಕವನ್ನು ಮಧ್ಯಂತರದಲ್ಲಿ ತೆರವುಗೊಳಿಸುವ ಕಾರ್ಯ ಮಾಡಬಾರದೆಂದು ಹೊಸನಗರ ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸುತ್ತಿದೆ ಎಂದರು.

ಕನ್ನಡ ನಾಡಿನಲ್ಲಿ ಕನ್ನಡದ ನಾಡು ನುಡಿಗೆ ಸಾಧನೆಗೈದ ಅನೇಕ ಶಿವಶರಣೆಯರು ಹಾಗೂ ಹೆಸರಾಂತ ಖ್ಯಾತ ಕವಿಗಳು ,ಸಾಹಿತಿಗಳು ಈ ಕನ್ನಡ ನಾಡಿಗೆ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ ಇಂತಹ ದಾರ್ಶನಿಕರ ಹೆಸರನ್ನು ವಿವಿಧ ಪ್ರಾಧಿಕಾರಗಳಿಗೆ ಇಡಬೇಕು ಎಂದು ಒತ್ತಾಯಿಸಿದರು. ಸೋಗಾನೆ ವಿಮಾನ ನಿಲ್ದಾಣ ಯಡಿಯೂರಪ್ಪನವರ ಕನಸಿನ ಕೂಸು. ಯಡಿಯೂರಪ್ಪ ರವರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಹೆಸರಿಡಲು ಸರ್ಕಾರದ ತೀರ್ಮಾನವಾದರೂ ಸಹ ತಮ್ಮಹೆಸರ ಬದಲಿಗೆ ಕುವೆಂಪು ಹೆಸರು ಸೂಚಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

ಈಗಾಗಲೇ ಯಡಿಯೂರಪ್ಪನವರ ಸೂಚನೆಯಂತೆ ಸರ್ಕಾರ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಲು ತೀರ್ಮಾನ ಮಾಡಿದೆ. ಅದರಂತೆ ಉದ್ಘಾಟನೆ ದಿನ ಘೋಷಣೆಯಾಗಬೇಕೆಂದು ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಕಾಮತ್, ಕ ಸಾ ಪ ಹೋಬಳಿ ಘಟಕದ ಕಾರ್ಯದರ್ಶಿ ಪಿಯುಸ್ ರೋಡ್ರಿಗಸ್, ತಾಲೂಕು ಕ ಸಾ ಪ ಸಂಘಟನಾ ಕಾರ್ಯದರ್ಶಿ ಈಶ್ವರಪ್ಪ ಕುಕ್ಕಳಲೆ ಇದ್ದರು.

About The Author

Leave a Reply

Your email address will not be published. Required fields are marked *

Exit mobile version