ರಿಪ್ಪನ್ಪೇಟೆ : ತನ್ನ ಸುತ್ತಮುತ್ತಲಿನ ಪರಿಸರದ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿ ಮನಸ್ಸಿನಲ್ಲಿ ಉಂಟಾದ ಭಾವನೆಗಳಿಗೆ ಜೀವ ತುಂಬಿ “ಸರ್ವ ಜ್ಞಾನ ಸಮಾಗಮ” ಕವನ ಸಂಕಲನ ಪುಸ್ತಕದ ಮೂಲಕ ಅಭಿವ್ಯಕ್ತಗೊಳಿಸಿದ ಗ್ರಾಮೀಣ ಪ್ರತಿಭೆಯ ಸಾಧನೆ ಶ್ಲಾಘನೀಯ ಎಂದು ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಉಪಪ್ರಾಚಾರ್ಯ ಕೆಸಿನಮನೆ ರತ್ನಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಹೊಸನಗರ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಅಯೋಜಿಸಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಜಿ.ಎನ್. ವಿನಯ್ ಕೊಡಸೆ ರವರ ಚೊಚ್ಚಲ ಕವನ ಸಂಕಲನ “ಸರ್ವ ಜ್ಞಾನ ಸಮಾಗಮ” ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ತನ್ನ ಭವಿಷ್ಯದ ಕಾಲಘಟ್ಟ ರೂಪಿಸಿಕೊಳ್ಳುವ ಎಸ್ಎಸ್ಎಲ್ಸಿ ವ್ಯಾಸಂಗದ ಜೊತೆ ಜೊತೆಯಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಂಡ ಗ್ರಾಮೀಣ ಪ್ರತಿಭೆಯ ಭಾಷಾ ಪಾಂಡಿತ್ಯ ಹಾಗೂ ರಾಷ್ಟ್ರಭಕ್ತಿಯ –ಪ್ರೇರಕ ಶಕ್ತಿ ಇಮ್ಮಡಿಗೊಳಿಸುವ ಕವನಗಳ ರಚನೆ ಯುವ ಬರಹಗಾರರಿಗೆ ಪ್ರೇರಣೆ ತಂದು ಕೊಡಲಿದೆ ಎಂದರು.
ಹೊಸನಗರ ತಾಲೂಕ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ. ಮ. ನರಸಿಂಹ ಮಾತನಾಡಿ, ಜಿ .ಎನ್. ವಿನಯ್ ಕೊಡಸೆ ಕವನಗಳಿಗೆ ಸೀಮಿತ ಅವಧಿ ಮೀಸಲಿಟ್ಟು ,ಎಸ್.ಎಸ್.ಎಲ್.ಸಿ ಯಲ್ಲಿ 616 ಅಂಕಗಳನ್ನು ಪಡೆದು ಸರ್ಕಾರಿ ಶಾಲೆಯಲ್ಲಿ ತಾಲ್ಲೂಕಿನಲ್ಲಿಯೇ ಅತ್ಯುನ್ನತ ಶ್ರೇಣಿಯಲ್ಲಿ ದ್ವಿತೀಯ ಸ್ಥಾನ ಪಡೆದ ಹೆಗ್ಗಳಿಕೆ ಈತನದು. ವಿದ್ಯಾರ್ಥಿಯ ಈ ಸಾಧನೆ ಉಳಿದವರಿಗೆ ಸ್ಪೂರ್ತಿಯಾಗಿ, ಸಾಹಿತ್ಯದ ಕೃಷಿಯಲ್ಲಿ ಮಿನುಗುತಾರೆಯಾಗಿ ವಿಜ್ರಂಭಿಸಲಿ ಎಂದರು.
ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎನ್. ಸತೀಶ್ ಮಾತನಾಡಿ, ಬೆಳೆಯುವ ಸಿರಿ, ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ , ಪ್ರೋತ್ಸಾಹಿಸಿದ ಶಿಕ್ಷಕ ವೃಂದ ಹಾಗೂ ಪೋಷಕವರ್ಗ ಅಭಿನಂದನಾರ್ಹರು ಎಂದರು.
ಯುವ ಕವಿ ವಿನಯ್ ಜಿ. ಎನ್. ಕೊಡಸೆ ಮಾತನಾಡಿ, ಬಡತನ ದೇವರ ಸೃಷ್ಟಿಯಲ್ಲ. ಮಾನವನ ದುರಾಸೆಗಳೇ ಬಡತನದ ಕತೃ. ಜಡತ್ವವನ್ನು ಬಿಟ್ಟು ಕಾಯಕದಲ್ಲಿ ನಿಷ್ಟೆ, ಪ್ರಾಮಾಣಿಕತೆ, ಮೈಗೂಡಿಸಿಕೊಳ್ಳಬೇಕು. ಆಗ ಪರಕಾಯ ಪ್ರವೇಶಗೊಂಡು, ಸೃಜನಶೀಲ ವ್ಯಕ್ತಿತ್ವ ರೂಪುಗೊಳ್ಳಲಿದೆ,ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ. ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ ಎಂದು ನೆನಪಿಸಿ ಕ್ರಿಯಾತ್ಮಕವಾಗಿ ನನ್ನನ್ನು ಹುರಿದುಂಬಿಸಿದ ಉಪ ಪ್ರಾಂಶುಪಾಲ ಕೆಸಿವಿನಮನೆ ರತ್ನಾಕರ್ ಹಾಗೂ ಪುಸ್ತಕ ವಿನ್ಯಾಸಕ್ಕೆ ರೂಪ ಕೊಟ್ಟ ಕಲಾ ವಿಭಾಗದ ಮಂಜನಾಯ್ಕ್ ಹಾಗೂ ಶಿಕ್ಷಕರು , ಪೋಷಕ ವರ್ಗದ ಪ್ರೋತ್ಸಾಹದ ನುಡಿಗಳು ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಮಳಕೊಪ್ಪ ಈಶ್ವರ್ ಅಧ್ಯಕ್ಷತೆ ವಹಿಸಿದ್ದರು.ಕಲಾ ವಿಭಾಗದ ಮಂಜನಾಯ್ಕ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಯುವ ಕವಿ ವಿನಯ್ ಕೊಡಸೆ ರವರ ತಂದೆ ನಾಗರಾಜ್ ತಾಯಿ ವೀಣಾ ನಾಗರಾಜ್ ಹಾಗೂ ಕುಟುಂಬವರ್ಗ ಹಾಜರಿದ್ದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್