ಸಾಗರದ ಇತಿಹಾಸ ಪ್ರಸಿದ್ಧ ಗಣಪತಿ ಕೆರೆಯಲ್ಲಿ ಮತ್ತೆ ನೀರುನಾಯಿ ಹಿಂಡು ಪ್ರತ್ಯಕ್ಷವಾಗಿದೆ. ಜೊಂಡು ತೆಗೆದು ಸ್ವಚ್ಛವಾಗಿರುವ ಕೆರೆಯಲ್ಲಿ ಕಳೆದ ವರ್ಷವೂ ಇವು ಕಂಡುಬಂದಿದ್ದವು.
ಶರಾವತಿ ಹಿನ್ನೀರು, ವರದಾ ನದಿಗಳು ನೀರು ನಾಯಿಗಳ ಆವಾಸ ಸ್ಥಾನ. ವರದಾ ನದಿಯ ಉಪ ನದಿಗಳ ಮೂಲಕ ಸಾಗರ ಪಟ್ಟಣದ ಗಣಪತಿ ಕೆರೆಗೆ ನೀರು ನಾಯಿಗಳು ಬಂದಿರುವ ಸಾಧ್ಯತೆ ಇದೆ. ಅಳಿವಿನ ಅಂಚಿನಲ್ಲಿರುವ ಪ್ರಾಣಿ ಆಗಿರುವುದರಿಂದ ಇವುಗಳಿಗೆ ಹಾನಿ ಮಾಡಿದರೆ ಅರಣ್ಯ ಇಲಾಖೆ ಕೇಸ್ ದಾಖಲು ಮಾಡುತ್ತದೆ.
ಗುಂಪು ಗುಂಪಾಗಿ ವಾಸಿಸುವ ನೀರು ನಾಯಿಗಳು ಅಲೆಮಾರಿಗಳಾಗಿವೆ. ಸಾಮಾನ್ಯವಾಗಿ ಶರಾವತಿ ಹಿನ್ನೀರಿನ ಲಿಂಗನಮಕ್ಕಿ, ಕೋಗಾರು, ಮಳಲಿ ಭಾಗಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತವೆ. ಆದರೆ ಗಣಪತಿ ಕೆರೆಯಲ್ಲಿ ಗುಂಪಾಗಿ ಸಾಗುವ ನೀರುನಾಯಿಗಳು ಕಂಡುಬಂದಿದ್ದು ಕೆರೆಯಲ್ಲಿದ್ದ ಮೀನನ್ನು ಕಬಳಿಸುತ್ತಿದ್ದವು. ಮೀನಿನ ಚಲನವಲನ ಗಮನಿಸಿ ಒಮ್ಮೆ ಮೇಲಕ್ಕೆ ಹಾರಿ ಗಪ್ಪೆಂದು ತನ್ನ ಬಾಯಿಗೆ ಮೀನನ್ನು ಸೇರಿಸಿಕೊಳ್ಳುವ ಚಾಣಾಕ್ಷತನ ರೋಮಾಂಚಕಾರಿಯಾಗಿದೆ.
ಸಾಗರದ ಜನತೆಗೆ ಈ ಅಪರೂಪದ ಪ್ರಾಣಿಯ ಮೀನಿನ ಬೇಟೆ ನೋಡುವುದೇ ಒಂದು ಸಡಗರವಾಗಿದೆ. ಕ್ಯಾಮರಾ ಕಣ್ಣಿಗೂ ಸಿಗದೆ ಕ್ಷಣಮಾತ್ರದಲ್ಲಿ ಮಾಯವಾಗುತ್ತವೆ.
ಗಣಪತಿ ಕೆರೆಯಲ್ಲಿ ಮೀನುಗಾರಿಕೆ ಗುತ್ತಿಗೆ ಪಡೆದವರಿಗೆ ನೀರು ನಾಯಿಗಳು ಭಾರಿ ಸಂಕಷ್ಟ ತಂದೊಡ್ಡಿದೆ. ಗೆಂಡೆ, ಕಾಟ್ಲಾ, ಗೌರಿ, ಮೃಗಾಲ, ರೋವು, ಬೆಳ್ಳಿಗೆಂಡೆ, ಹುಲ್ಲುಗೆಂಡೆ ಜಾತಿಯ ಮೀನುಗಳನ್ನು ಕೆರೆಯಲ್ಲಿ ಬಿಡಲಾಗಿದೆ. ಪ್ರತಿ ಮೀನು ಈಗ 10 ರಿಂದ 12 ಕೆಜಿ ತೂಗುತ್ತವೆ. ಆದರೆ ನೀರು ನಾಯಿಗಳ ಗುಂಪು ಪ್ರತಿದಿನ ನೂರಾರು ಮೀನುಗಳನ್ನು ಹಿಡಿದು ತಿನ್ನುತ್ತಿವೆ.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್