ಸಾಗರ: ಇನ್ನು ಮುಂದೆ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಗಣ್ಯರಿಗೆ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದನ್ನು ಸದನದಲ್ಲಿ ಪ್ರಶ್ನಿಸಲಿದ್ದೇನೆ ಎಂದು ಶಾಸಕ, ಎಂಎಸ್ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಘೋಷಿಸಿದರು.
ಇಲ್ಲಿನ ದೇವರಾಜ ಅರಸು ಸಭಾಭವನದಲ್ಲಿ ಭಾನುವಾರ ತಾಲೂಕಿನಲ್ಲಿ ಈವರೆಗೆ 1 ಲಕ್ಷ ಕೋವಿಡ್ ನಿರ್ಬಂಧಕ ಲಸಿಕೆ ನೀಡಿದ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರದ ಸ್ವಯಂ ಸೇವಕರು ಹಾಗೂ ಆರೋಗ್ಯ ಇಲಾಖೆಯ ನೌಕರರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಯಾರೋ ಒಬ್ಬರು ನನಗೆ ಸಮಾರಂಭಗಳಲ್ಲಿ ಹಾರ,ಶಾಲು ಬೇಡ ಎಂದಿದ್ದನ್ನು ಮಾಧ್ಯಮದವರು ಶಹಭಾಷ್ಗಿರಿ ಕೊಟ್ಟು ಪ್ರಕಟಿಸಿದ್ದನ್ನೇ ಆಧಾರವಾಗಿಟ್ಟುಕೊಂಡು ಸರ್ಕಾರ ಹಾರ, ಹಣ್ಣು ಬೇಡ ಎಂದು ಆದೇಶ ಹೊರಡಿಸುತ್ತದೆ. ಇವೆಲ್ಲ ಕೀಳು ಪ್ರಚಾರದ ಸಾಮಗ್ರಿಯಾಗುತ್ತವೆ.
ಇಂತಹ ಆದೇಶದಿಂದ ಹೂವು ಬೆಳೆಯುವವ, ಕಟ್ಟುವವ, ಮಾರುವವ… ಹೀಗೆ ಹಲವು ಹಂತದ ಜನರಿಗೆ ಸಂಕಷ್ಟ ಬರಲಿದೆ. ಉಪಯೋಗವಾಗುವ ವಸ್ತುಗಳನ್ನು ಕೊಡುವುದು ಮುಖ್ಯ ಎಂಬುದನ್ನು ಒಪ್ಪಬಹುದು. ಆದರೆ ಅದನ್ನು ನಿರ್ದಿಷ್ಟಪಡಿಸುವ ಕೆಲಸ ಆಗಬಾರದು. ಒಂದು ಹೂವಿನ ಹಾರದ ಹಿಂದೆಯೂ ಹಲವರ ಬದುಕಿದೆ ಎಂಬುದನ್ನು ಮರೆಯಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಹಿಂದೆ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್, ನನಗೆ ಸನ್ಮಾನ ಮಾಡುವುದಿದ್ದರೆ ಉಣ್ಣೆ ಶಾಲು, ಹತ್ತಿ ಶಾಲು ಕೊಡಿ. ರೇಷ್ಮೆ ಶಾಲು, ಹಣ್ಣು, ಹಾರ ಬೇಡ ಎಂದು ಹೇಳುತ್ತಿದ್ದರು. ಅದನ್ನು ಒಟ್ಟು ಮಾಡಿ ಅವರು ಚಳಿಯಿಂದ ನಡುಗುವ ಬಡವರಿಗೆ ವಿತರಿಸುತ್ತಿದ್ದರು.
ಈಗ ಸಭೆ ಸಮಾರಂಭಗಳಲ್ಲಿ ಹಾರ, ಶಾಲು, ನೆನಪಿನ ಕಾಣಿಕೆ ಕೊಡಬೇಡಿ. ಅದರ ಬದಲು ಪುಸ್ತಕ ಕೊಡಿ ಎಂದು ಹೇಳುವುದು ಕೂಡ ಪ್ರಶ್ನಾರ್ಹ.
ನಾನೂ ಸಹ ಪುಸ್ತಕ ಪ್ರೇಮಿ. ನಮ್ಮ ಮನೆಯಲ್ಲೂ ಕುವೆಂಪು ಅವರಿಂದ ಹಿಡಿದು ಎಲ್ಲ ಲೇಖಕರ ಪುಸ್ತಕ ಗ್ರಂಥ ಭಂಡಾರದಲ್ಲಿದೆ. ಅತಿ ಹೆಚ್ಚು ಓದುವ ಶಾಸಕರಲ್ಲಿ ನಾನು ಪ್ರಮುಖನಾಗಿದ್ದೇನೆ.ನಾನು ಎಷ್ಟು ಜನ ಪುಸ್ತಕಗಳನ್ನು ದಿನಾಲು ಓದುತ್ತಾರೆ ಎಂದು ಪ್ರಶ್ನಿಸಬೇಕಾಗುತ್ತದೆ. ನಾನು ಪುಸ್ತಕಗಳ ವಿರೋಧಿಯಲ್ಲ. ಆದರೆ ಉಪಯೋಗವಾಗುವ ವಸ್ತುಗಳನ್ನು ಗೌರವವಾಗಿ ಕೊಡುವುದಕ್ಕೆ ತಡೆ ಒಡ್ಡುವ ಕ್ರಮವೇ ಸರಿಯಲ್ಲ ಎಂದು ಹಾಲಪ್ಪ ಪ್ರತಿಪಾದಿಸಿದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್