January 11, 2026

ವಿಶ್ವದಲ್ಲಿಯೇ ಭಾರತ ಅತ್ಯಂತ ಸುರಕ್ಷಿತ ದೇಶ : ಕೆ ಎಸ್ ಈಶ್ವರಪ್ಪ

ಶಿವಮೊಗ್ಗ : ವಿಶ್ವದಲ್ಲಿಯೇ ಭಾರತ ಅತ್ಯಂತ ಸುರಕ್ಷಿತ ರಾಷ್ಟ್ರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ಸ್ವಾತಂತ್ರ್ಯದ  ಅಮೃತ ಮಹೋತ್ಸದ ಅಂಗವಾಗಿ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಶನಿವಾರ ಆಯೋಜಿಸಿದ್ದ ಸೈಕಲ್‌ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತಿನ ರಾಷ್ಟ್ರಗಳಲ್ಲಿ ಭಾರತ ಶಾಂತಿಪ್ರಿಯ ದೇಶವಾಗಿದೆ. ಇಲ್ಲಿ ಧರ್ಮಗಳ ಮಧ್ಯೆ ಪ್ರೀತಿ, ಮಾನವೀಯತೆ ಇದೆ.

ಇಲ್ಲಿ ಜೀವಿಸುವುದೇ ನಮ್ಮ ಪುಣ್ಯ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಚಟುವಟಿಕೆಗಳನ್ನು ಕಂಡರೆ ಇದು ಅರ್ಥವಾಗುತ್ತದೆ. ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಹೆಚ್ಚಾಗುತ್ತಿದೆ. ಇಡೀ ಜಗತ್ತು ತಲೆ ತಗ್ಗಿಸುವಂತಹ ಕೆಲಸ ನಡೆಯುತ್ತಿದೆ. ಕ್ರೂರತೆ ಅಲ್ಲಿ ವಿಜೃಂಭಿಸುತ್ತಿದ್ದು, ಮಾನವೀಯತೆ ಮರೆಯಾಗಿದೆ. ಇದನ್ನೆಲ್ಲ ನೋಡಿದರೆ, ಭಾರತ ಅತ್ಯಂತ ಸುರಕ್ಷಿತ ರಾಷ್ಟ್ರ ಎಂದರು.

ದೇಶ ಸ್ವಾತಂತ್ರ್ಯ ಪಡೆದು 2047 ಕ್ಕೆ 100 ವರ್ಷ ಆಗಲಿರುವುದರಿಂದ ಮಾದರಿ ರಾಷ್ಟ್ರ ನಿರ್ಮಾಣ ಮಾಡಲು ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದ ಅವರು, ಸ್ವಾತಂತ್ರ್ಯ ದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿಯೂ ದೇಶದಲ್ಲಿ ಉಗ್ರಗಾಮಿಗಳು, ದೇಶದ್ರೋಹಿಗಳು ಅಲ್ಲಲ್ಲಿ ಅಡಗಿ ಕುಳಿತಿದ್ದಾರೆ. ಅವರನ್ನು ಸದೆ ಬಡಿಯುವ ಕೆಲಸವೂ ಆಗಬೇಕಿದೆ ಎಂದರು. ಯುವ ಸಮುದಾಯದಲ್ಲಿ ರಾಷ್ಟ್ರ ಭಕ್ತಿ ಬೆಳೆಸಲು ಹಾಗೂ ಸ್ವಾತಂತ್ರ್ಯ ಹೋರಾಟದ ಮಹತ್ವ ತಿಳಿಸುವ ಸಲುವಾಗಿ ಹೃದಯದಲ್ಲಿ ರಾಷ್ಟ್ರ ಭಕ್ತಿಯೊಂದಿಗೆ ಸೈಕಲ್‌ ಜಾಥಾ ನಡೆಸಲಾಗುತ್ತಿದೆ.
ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ತಿಳಿಸಿದರು. ವಿಶ್ವದಲ್ಲಿಯೇ ಭಾರತ ಶಾಂತಿಪ್ರಿಯ ರಾಷ್ಟ್ರ ವಾಗಿದೆ. ನಾವಾಗಿ ನಾವು ಯಾರ ತಂಟೆಗೂ ಹೋಗುವುದಿಲ್ಲ. ಆದರೆ, ನಮ್ಮ ಸುದ್ದಿಗೆ ಬಂದರೆ ಬಿಡುವುದಿಲ್ಲ ಎಂಬ ಸಂದೇಶವನ್ನು ಈಗಾಗಲೇ ನೀಡಲಾಗಿದೆ. ಮುಂದೆಯೂ ನಮ್ಮ ತಂಟೆಗೆ ಬರುವವರಿಗೆ ತಕ್ಕ ಉತ್ತರ ನೀಡಲಾಗುತ್ತದೆ ಎಂದರು.

ಅಫ್ಘಾನಿಸ್ಥಾನದಲ್ಲಿ ಏನಾಗುತ್ತಿದೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ. ಮಕ್ಕಳು, ಮಹಿಳೆಯರು ಹಾಗೂ ಅಲ್ಲಿನ ದೇಶಭಕ್ತರ ಮೇಲೆ ನಿರಂತರವಾಗಿ ತಾಲಿಬಾನಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಹಿಂದಿನಿಂದಲೂ ಉಗ್ರಗಾಮಿಗಳನ್ನು ಬೆಂಬಲಿಸಿಕೊಂಡು ಬಂದಿರುವ ದೇಶದಲ್ಲಿನ ಕೆಲವು ಸ್ವಯಂಘೋಷಿತ ಬುದ್ಧಿಜೀವಿಗಳು, ವಿಚಾರವಾದಿಗಳು ಇದರ ಬಗ್ಗೆ ಈಗ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದಾರೆ ಎಂದು ಹರಿಹಾಯ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ನಗರ ಯುವಮೋರ್ಚಾದ ಅಧ್ಯಕ್ಷ ದರ್ಶನ್‌ ಆರ್‌.ವಿ. ವಹಿಸಿದ್ದರು. ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ನಗರ ಬಿಜೆಪಿ ಅಧ್ಯಕ್ಷ ಎನ್‌.ಕೆ. ಜಗದೀಶ್‌, ಮೇಯರ್‌ ಸುನಿತಾ ಅಣ್ಣಪ್ಪ, ಉಪ ಮೇಯರ್‌ ಗನ್ನಿ ಶಂಕರ್‌, ವಿಭಾಗ ಪ್ರಭಾರಿ ಗಿರೀಶ್‌ ಪಟೇಲ್‌, ಜ್ಯೋತಿ ಪ್ರಕಾಶ್‌, ಎಸ್‌. ದತ್ತಾತ್ರಿ, ಬಳ್ಳೆಕೆರೆ ಸಂತೋಷ್‌ ಮತ್ತಿತರರು ಇದ್ದರು.

ನೆಹರು ಕ್ರೀಡಾಂಗಣ, ಉಷಾ ನಸಿಂìಗ್‌ ಹೋಮ್‌, ಲಕ್ಷ್ಮೀ ಟಾಕೀಸ್‌, ಜೈಲ್‌ ವೃತ್ತ ರಸ್ತೆ, ಪ್ರವಾಸಿ ಮಂದಿರ ವೃತ್ತ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ವೃತ್ತ, ಶಿವಪ್ಪ ನಾಯಕ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತದ ಮೂಲಕ ಪುನಃ ನೆಹರು ಕ್ರೀಡಾಂಗಣದವರೆಗೆ ಜಾಥಾ ನಡೆಸಲಾಯಿತು.

About The Author

Leave a Reply

Your email address will not be published. Required fields are marked *

Exit mobile version