Headlines

ಶಿವಮೊಗ್ಗ ಜೈಲಿಗೆ ಕರೆದೊಯ್ಯುವಾಗ ಆರೋಪಿ ಬಟ್ಟೆಮಲ್ಲಪ್ಪ ಸರ್ಕಲ್‌ನಲ್ಲಿ ಸಿನಿಮೀಯ ಎಸ್ಕೇಪ್‌!

ಶಿವಮೊಗ್ಗ ಜೈಲಿಗೆ ಕರೆದೊಯ್ಯುವಾಗ ಆರೋಪಿ ಬಟ್ಟೆಮಲ್ಲಪ್ಪ ಸರ್ಕಲ್‌ನಲ್ಲಿ ಸಿನಿಮೀಯ ಎಸ್ಕೇಪ್‌!

ಊಟ ಕೇಳಿದ ಆರೋಪಿ ಅಧಿಕಾರಿಗಳನ್ನು ಯಾಮಾರಿಸಿ ಪರಾರಿ; ಹೊಸನಗರದಲ್ಲಿ ಪ್ರಕರಣ ದಾಖಲು

A 36-year-old accused escaped from Forest Department officials while being taken to Shivamogga Central Prison near Battemallappa Circle in Hosanagara taluk. Police have registered a case and launched a search.

ಹೊಸನಗರ : ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಆರೋಪಿಯೊಬ್ಬ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸುಪರ್ದಿಯಿಂದ ತಪ್ಪಿಸಿಕೊಂಡಿರುವ ಘಟನೆ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ನಡೆದಿದೆ.

ಹೊಸನಗರ ತಾಲೂಕಿನ ಅಡುಗೋಡಿ ಗ್ರಾಮದ ವೆಂಕಟೇಶ್ (36) ಪರಾರಿಯಾದ ಆರೋಪಿ ಎಂದು ಗುರುತಿಸಲಾಗಿದೆ. ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ವಾರಂಟ್ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ವೆಂಕಟೇಶ್‌ನನ್ನು ವಶಕ್ಕೆ ಪಡೆದು ಹೊಸನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ, ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುವಂತೆ ಆದೇಶಿಸಿದ್ದರು. ಅದರಂತೆ ಅರಣ್ಯ ಉಪವಲಯ ಅಧಿಕಾರಿಗಳಾದ ಸುನೀಲ್ ಡಿ. ಕುಂಬಾರ್, ಇಬ್ರಾಹಿಂ, ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಚಕ್ರಪಾಣಿ ಅವರು ಇಲಾಖೆಯ ವಾಹನದಲ್ಲಿ ಆರೋಪಿಯನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ವಾಹನವು ಬಟ್ಟೆಮಲ್ಲಪ್ಪ ಸರ್ಕಲ್ ಸಮೀಪ ತಲುಪಿದಾಗ, ತನಗೆ ಹಸಿವಾಗಿದ್ದು ಊಟ ಕೊಡಿಸುವಂತೆ ಆರೋಪಿ ವೆಂಕಟೇಶ್ ಮನವಿ ಮಾಡಿದ್ದಾನೆ ಎನ್ನಲಾಗಿದೆ.

ಆರೋಪಿಯ ಮಾತನ್ನು ನಂಬಿದ ಅಧಿಕಾರಿಗಳಾದ ಸುನೀಲ್ ಹಾಗೂ ಇಬ್ರಾಹಿಂ ಅವರು ಸಮೀಪದ ಸಹನಾ ಹೋಟೆಲ್‌ನಿಂದ ಊಟ ತರಲು ತೆರಳಿದ್ದಾರೆ.

ಈ ವೇಳೆ ವಾಹನದಲ್ಲೇ ಕಾವಲಿದ್ದ ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಸಿಬ್ಬಂದಿ ಚಕ್ರಪಾಣಿ ಅವರನ್ನು ತಳ್ಳಿಹಾಕಿ, ಹಲ್ಲೆ ನಡೆಸಿದ ಬಳಿಕ ಆರೋಪಿ ವೆಂಕಟೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ತಕ್ಷಣ ಸಿಬ್ಬಂದಿ ಬಟ್ಟೆಮಲ್ಲಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಶೋಧ ನಡೆಸಿದರೂ ಆರೋಪಿ ಪತ್ತೆಯಾಗಿಲ್ಲ.

ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಯ ಪತ್ತೆಗೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

About The Author

Exit mobile version