ವಿಶ್ವನಾಥ್ ಕೊಲೆ ಯತ್ನ ಪ್ರಕರಣ: ಐವರು ಆರೋಪಿಗಳು ನ್ಯಾಯಾಲಯಕ್ಕೆ ಶರಣು
Five accused in the attempted murder case of Vishwanath alias Mudde in Bhadravathi have surrendered before the 2nd Additional JMFC Court. Police investigation into the brutal assault case continues.
ಭದ್ರಾವತಿ: ಹಳೇನಗರದ ಕುರುಬರ ಬೀದಿ ನಿವಾಸಿ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳು ಶುಕ್ರವಾರ ನಗರದ 2ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಕೆಲವು ದಿನಗಳ ಹಿಂದೆ ನಗರದ ಅನ್ವರ್ ಕಾಲೋನಿಯ ವಾಗೀಶ್ ಚಿತ್ರಮಂದಿರದ ಮುಂಭಾಗದ ಟೀ ಅಂಗಡಿಯಲ್ಲಿ ಕುಳಿತು ಟೀ ಸೇವಿಸುತ್ತಿದ್ದ ವಿಶ್ವನಾಥ್ ಅಲಿಯಾಸ್ ಮುದ್ದೆ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ವಿಶ್ವನಾಥ್ ಅವರನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಘಟನೆಯ ಬಳಿಕ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ಹೊಸಮನೆ ನಿವಾಸಿ ಪ್ರಮೋದ್ ಅಲಿಯಾಸ್ ಗಾಂಧಿ ಹಾಗೂ ಕಾರ್ಗಲ್ ನಿವಾಸಿ ಜಗದೀಶ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಇದೀಗ ಪ್ರಕರಣದ ಉಳಿದ ಆರೋಪಿಗಳಾದ ಎಂಪಿಎಂ ನಿವಾಸಿ ಕರಾಟೆ ಪ್ರಕಾಶ್ ಅಲಿಯಾಸ್ ಪ್ರಕಾಶ್, ನ್ಯೂಟೌನ್ ಕೂಲಿ ಬ್ಲಾಕ್ ಹಾಗೂ ಆಂಜನೇಯ ಅಗ್ರಹಾರದ ನಿವಾಸಿಗಳಾದ ಆಲ್ವಿನ್, ರಾಕೇಶ್, ಪ್ರಜ್ವಲ್ ಮತ್ತು ಬಂಡಾರಹಳ್ಳಿ ನಿವಾಸಿ ಭರತ್ ಅವರು ಸ್ವಯಂಪ್ರೇರಿತವಾಗಿ ನ್ಯಾಯಾಲಯಕ್ಕೆ ಹಾಜರಾಗಿ ಶರಣಾಗಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಆರೋಪಿಗಳಿದ್ದು, ಎಲ್ಲರೂ 25 ರಿಂದ 35 ವರ್ಷದೊಳಗಿನವರಾಗಿದ್ದಾರೆ. ಪ್ರಕರಣದ ತನಿಖೆಯನ್ನು ಹಳೇನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನೀಲ್ ತೇಲಿ ಮುಂದುವರಿಸಿದ್ದಾರೆ.




