Headlines

ಕುಸಿದು ಬಿದ್ದ ನರ್ಸ್ ಬದುಕಲಿಲ್ಲ… ಆದರೆ ಸಾವಿನಲ್ಲೂ 7 ಮಂದಿಗೆ ಹೊಸ ಬದುಕು ಕೊಟ್ಟ ಕೀರ್ತನಾ!

ಕುಸಿದು ಬಿದ್ದ ನರ್ಸ್ ಬದುಕಲಿಲ್ಲ… ಆದರೆ ಸಾವಿನಲ್ಲೂ 7 ಮಂದಿಗೆ ಹೊಸ ಬದುಕು ಕೊಟ್ಟ ಕೀರ್ತನಾ!

Kirthana, a 23-year-old nurse from Bhadravati, gave the gift of life through multi-organ donation after her untimely death. Her selfless act has brought hope to several patients awaiting transplants.

ಭದ್ರಾವತಿ: ಹಳೇನಗರದ ಸುಭಾಷ್ ನಗರದ ನಿವಾಸಿಗಳಾದ ಕುಮಾರ್ ಮತ್ತು ಲೀಲಾ ದಂಪತಿಯ ಪುತ್ರಿ ಕೀರ್ತನಾ (23) ತಮ್ಮ ಸಾವಿನಲ್ಲೂ ಬಹು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆಯ ಅಪೂರ್ವ ಮಾದರಿಯಾಗಿದ್ದಾರೆ.

ಕೀರ್ತನಾ ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ನರ್ಸಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಮಂಗಳವಾರ ತಮ್ಮ ಮನೆಯಿಂದ ಕರ್ತವ್ಯಕ್ಕೆ ತೆರಳಿದ್ದ ಅವರು, ಅಂದು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಪ್ರಜ್ಞಾಹೀನರಾಗಿದ್ದರು.

ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಘಟನೆಯ ಬಗ್ಗೆ ಅದೇ ರಾತ್ರಿ ಆಸ್ಪತ್ರೆಯ ಸಿಬ್ಬಂದಿ ಕೀರ್ತನಾ ಅವರ ತಂದೆ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು. ವೈದ್ಯರು ಹಲವು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಅವರು ಚೇತರಿಸಿಕೊಳ್ಳಲಿಲ್ಲ. ಅಂತಿಮವಾಗಿ ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಮೃತ್ಯುವಿನ ಬಳಿಕ ಕುಟುಂಬ ಸದಸ್ಯರು ಮಹತ್ವದ ನಿರ್ಧಾರ ಕೈಗೊಂಡು ಕೀರ್ತನಾ ಅವರ ಬಹು ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದರು. ಸೋಮವಾರ ಬೆಂಗಳೂರಿನ ಮಹದೇವಪುರದಲ್ಲಿರುವ ಕೃಷ್ಣ ಕಿಮ್ಸ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಯಿತು. ಇದರಿಂದ ಹಲವು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣ ದೊರಕಿದೆ.

ಮಂಗಳವಾರ ಕೀರ್ತನಾ ಅವರ ಪಾರ್ಥಿವ ಶರೀರವನ್ನು ಭದ್ರಾವತಿಗೆ ತರಲಾಗಿದ್ದು, ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕೀರ್ತನಾ ಅವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿಯೆಂದು ಶ್ಲಾಘಿಸಿದ್ದಾರೆ.

About The Author

Exit mobile version