ಬಂಕಾಪುರದ ಮೂಲಸೌಕರ್ಯ ಸಮಸ್ಯೆಗಳ ಕುರಿತು ಜನರ ಧ್ವನಿ ಆಲಿಸಿದ ಶಾಸಕ
ಬಂಕಾಪುರ: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಶಿಥಿಲಾವಸ್ಥೆಯಲ್ಲಿರುವ ನಾಡಕಚೇರಿ ವೀಕ್ಷಣೆಗೆ ಭೇಟಿ ನೀಡಿದ ಶಾಸಕ ಯಾಸೀರ್ ಅಹಮದ್ ಖಾನ್ ಪಠಾಣ್ ಅವರಿಗೆ ಸಾರ್ವಜನಿಕರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.
ನಾಡಕಚೇರಿ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ನವೀಕರಿಸಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪ ತಹಸೀಲ್ದಾರ್ ಕಚೇರಿಯನ್ನು ಇದೇ ಕಟ್ಟಡದಲ್ಲಿ ಮುಂದುವರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಇದರಿಂದ ಸರ್ಕಾರಕ್ಕೆ ಅನಗತ್ಯವಾಗಿ ಖರ್ಚಾಗುತ್ತಿರುವ ಬಾಡಿಗೆಯ ಹಣ ಉಳಿಯಲಿದೆ ಎಂದು ತಿಳಿಸಿದರು.
ಪಟ್ಟಣದ ಗ್ರಂಥಾಲಯ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು, ಅದರ ನೂತನ ಕಟ್ಟಡ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಎಂದು ಮನವಿ ಮಾಡಲಾಯಿತು. ಜೊತೆಗೆ ಹಲವು ವರ್ಷಗಳಿಂದ ಸರ್ಕಾರಿ ಪಿಯು ಕಾಲೇಜು ಆರಂಭಿಸುವಂತೆ ಬೇಡಿಕೆ ಇರುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಪಿಯು ಕಾಲೇಜು ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಶಾಸಕರನ್ನು ಒತ್ತಾಯಿಸಿದರು.
ಏಷ್ಯಾ ಖಂಡದಲ್ಲೇ ಎರಡನೇ ಅತಿದೊಡ್ಡ ನವಿಲುಧಾಮ ಎಂಬ ಖ್ಯಾತಿ ಪಡೆದಿರುವ 139 ಎಕರೆ ವ್ಯಾಪ್ತಿಯ ಕೋಟೆ ಆವರಣದಲ್ಲಿ ನವಿಲುಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ. ನವಿಲುಗಳ ಸಂರಕ್ಷಣೆ ಹಾಗೂ ವಾಸಕ್ಕೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಪುರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದು, ಈ ಕುರಿತು ಸಾರ್ವಜನಿಕರ ಅಹವಾಲು ಆಲಿಸಲು ಶೀಘ್ರ ಸಭೆ ಕರೆಯುವಂತೆ ಮನವಿ ಮಾಡಲಾಯಿತು.
ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ಯಾಸೀರ್ ಅಹಮದ್ ಖಾನ್ ಪಠಾಣ್ ಮಾತನಾಡಿ, “ಪಟ್ಟಣದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಏ.ಕೆ. ಆದವಾನಿಮಠ, ಅಬ್ದುಲ್ ರಜಾಕ್ ತಹಸೀಲ್ದಾರ್, ಉಪ ತಹಸೀಲ್ದಾರ್ ವಿ.ವಿ. ಕುಲಕರ್ಣಿ, ಮಂಜುನಾಥ್ ಕೂಲಿ, ಮಹಮ್ಮದ್ ಹುಸೇನ್ ಖತೀಬ್, ಓಂಪ್ರಕಾಶ್ ಅಂಗಡಿ, ಸೋಮಣ್ಣ ಕುರಿ, ಸಿದ್ದಯ್ಯ ಹಿರೇಮಠ, ನನ್ನೇಸಾಬ್ ದೇವಗಿರಿ, ವಿಜಯ್ ದೇಸಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ನಿಂಗರಾಜ ಕುಡಲ್, ಹಾವೇರಿ ಜಿಲ್ಲೆ




