Headlines

ಅಕ್ರಮ ಮರಳುಗಾರಿಕೆ – ಉಪವಿಭಾಗಾಧಿಕಾರಿ ದಿಡೀರ್ ದಾಳಿ; 80 ಲೋಡ್ ಮರಳು ಪತ್ತೆ

ಅಕ್ರಮ ಮರಳುಗಾರಿಕೆ – ಉಪವಿಭಾಗಾಧಿಕಾರಿ ದಿಡೀರ್ ದಾಳಿ; 80 ಲೋಡ್ ಮರಳು ಪತ್ತೆ

Shivamogga Sub-Divisional Officer Satyanarayana led a major raid on illegal sand mining in Hadonahalli along the Tungabhadra river, seizing around 80 loads of sand.

ಶಿವಮೊಗ್ಗ: ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಹಾಡೋನಹಳ್ಳಿಯ ತುಂಗಭದ್ರ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿರುದ್ಧ ಖಡಕ್ ದಾಳಿ ನಡೆಸಲಾಗಿದ್ದು, ಕಾರ್ಯಾಚರಣೆಯಲ್ಲಿ ಸುಮಾರು 80 ಲೋಡ್ ಅಕ್ರಮ ಮರಳು ಪತ್ತೆಯಾಗಿದೆ.

ರಾತ್ರಿ ವೇಳೆ ನಡೆದ ದಾಳಿಯಲ್ಲಿ ನದಿಯ ಒಡಲಿನಿಂದ ಮಣ್ಣು ತೆಗೆದು ವಾಶ್‌ ಮೂಲಕ ಮರಳು ಬೇರ್ಪಡಿಸುವ ಅಕ್ರಮ ಚಟುವಟಿಕೆ ಬೆಳಕಿಗೆ ಬಂದಿದೆ. ಹಾಡೋನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ರೀತಿಯ ಅಕ್ರಮ ಮರಳುಗಾರಿಕೆ ಬಹಳ ಕಾಲದಿಂದ ನಡೆಯುತ್ತಿದ್ದು, ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ಬರದೇ ಇರುವುದಾಗಿ ತಿಳಿದುಬಂದಿದೆ.

ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರು ಹಲವು ಬಾರಿ ಬೆಳಗ್ಗೆಯಿಂದ ರಾತ್ರಿ ತನಕ ಸ್ಥಳದಲ್ಲೇ ಇದ್ದು ದಾಳಿ ನಡೆಸಿದ ಉದಾಹರಣೆಗಳಿವೆ. ಆದರೆ ದಾಳಿ ಬಳಿಕವೂ ಮತ್ತೆ ಅಕ್ರಮ ಚಟುವಟಿಕೆ ಮುಂದುವರಿಯುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

2025ರಿಂದ ಇದುವರೆಗೆ ಹಾಡೋನಹಳ್ಳಿ ಭಾಗದಲ್ಲಿ 13ಕ್ಕೂ ಹೆಚ್ಚು ಬಾರಿ ದಾಳಿ ನಡೆದಿದ್ದರೂ, ಅಕ್ರಮ ಮರಳುಗಾರಿಕೆ ಮಾತ್ರ ನಿಲ್ಲದೇ ಮುಂದುವರಿದಿದೆ. ಪರಿಣಾಮವಾಗಿ ತುಂಗಭದ್ರ ನದಿಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಪರಿಸರ ಹಾನಿ ಹೆಚ್ಚುತ್ತಿದೆ ಎಂಬ ಆತಂಕ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಗ್ರಾಮಸ್ಥರು, ಪೊಲೀಸರು, ಮಾಧ್ಯಮ, ಗಣಿ ಇಲಾಖೆ ಸೇರಿದಂತೆ ಎಲ್ಲರ ಸಹಕಾರ ಅಗತ್ಯವಿದೆ. ಒಬ್ಬ ಅಧಿಕಾರಿಯಿಂದ ಮಾತ್ರ ಈ ಜಾಲವನ್ನು ನಿಯಂತ್ರಿಸುವುದು ಸಾಧ್ಯವಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.
ಪ್ರಸ್ತುತ ದಾಳಿಯಲ್ಲಿ ಪತ್ತೆಯಾದ ಮರಳನ್ನು ನದಿಯಲ್ಲೇ ಬಿಡಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

About The Author

Exit mobile version