Headlines

ಗ್ರಾಮೀಣ ಕ್ರೀಡೆಗಳಿಂದ ಯುವಜನರ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ: ಹರತಾಳು ಹಾಲಪ್ಪ


ಗ್ರಾಮೀಣ ಕ್ರೀಡೆಗಳಿಂದ ಯುವಜನರ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ: ಹರತಾಳು ಹಾಲಪ್ಪ

State BJP Vice President Hartalu Halappa inaugurated a floodlight volleyball tournament in Ripponpet, highlighting the importance of rural sports for the physical and mental well-being of the youth.

​ರಿಪ್ಪನ್‌ಪೇಟೆ: ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದರಿಂದ ಗ್ರಾಮದ ಹಿತ ಕಾಪಾಡುವ ಜೊತೆಗೆ ಯುವಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಬಹುದು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ತಿಳಿಸಿದರು.

ಪಟ್ಟಣದಲ್ಲಿ ‘ವಿಆರ್ ಸ್ಪೋರ್ಟ್ಸ್’ ಹಾಗೂ ‘ಕ್ರೀಡಾಲೋಕ ಗೆಳೆಯರ ಬಳಗ’ದ ವತಿಯಿಂದ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ವಾಲಿಬಾಲ್‌ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿ  ಕ್ರೀಡೆಯಿಂದ ಸಮಾಜದಲ್ಲಿ ನೈತಿಕತೆ ಬೆಳೆಯುತ್ತದೆ. ಇದರಲ್ಲಿ ಭಾಗವಹಿಸುವ ಯುವಕರು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸಂಘಟನಾ ಚಾತುರ್ಯ ಹಾಗೂ ಶಿಸ್ತನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಾಲಪ್ಪ ಹೇಳಿದರು.

​ಇಂದಿನ ಗ್ರಾಮೀಣ ಯುವಕರು ಮೊಬೈಲ್ ಮತ್ತು ಟಿವಿಯ ಪ್ರಭಾವದಿಂದ ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ. ಜತೆಗೆ ಅನಾರೋಗ್ಯಕರ ಆಹಾರ ಪದ್ಧತಿಯೂ ಹೆಚ್ಚಾಗಿದೆ. ಉತ್ತಮ ಆಹಾರ ಹಾಗೂ ಕ್ರೀಡಾಸಕ್ತಿಯಿಂದ ಮಾತ್ರ ಸಧೃಡ ದೇಹ ಮತ್ತು ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ತಾಪಂ ಮಾಜಿ‌ ಅಧ್ಯಕ್ಷ ವೀರೇಶ್ ಆಲುವಳ್ಳಿ, “ಇಂದು ಕ್ರೀಡೆ ಕೇವಲ ಕ್ರಿಕೆಟ್‌ಗೆ ಸೀಮಿತವಾಗುತ್ತಿರುವುದು ವಿಷಾದನೀಯ. ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಅನೇಕ ಗ್ರಾಮೀಣ ಆಟಗಳು ಮರೆಯಾಗುತ್ತಿವೆ. ಸೂಕ್ತ ಅವಕಾಶ, ಪ್ರಚಾರ ಹಾಗೂ ಮಾರ್ಗದರ್ಶನದ ಕೊರತೆಯಿಂದ ಗ್ರಾಮೀಣ ಪ್ರತಿಭೆಗಳು ಬೆಳೆಯದೆ ಉಳಿಯುತ್ತಿವೆ. ಇಂತಹ ಕ್ರೀಡಾಕೂಟಗಳು ಹೆಚ್ಚೆಚ್ಚು ನಡೆದರೆ ಪ್ರತಿಭೆಗಳಿಗೆ ಉತ್ತಮ ವೇದಿಕೆ ದೊರೆಯುತ್ತದೆ” ಎಂದು ಅಭಿಪ್ರಾಯಪಟ್ಟರು.

ಉದ್ಯಮಿ ಸಂತೋಷ್ ಆಶ್ರಿತಾ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಇಂತಹ ಕ್ರೀಡಾಕೂಟಗಳ ಆಯೋಜನೆ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಒದಗಿಸುತ್ತದೆ, ಕ್ರೀಡೆಗಳು ವ್ಯಕ್ತಿತ್ವ ವಿಕಾಸಕ್ಕೆ ಮಹತ್ತರ ಪಾತ್ರವಹಿಸುತ್ತವೆ ಹಾಗೂ ತಂಡಭಾವನೆ, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ, ಗ್ರಾಮೀಣ ಭಾಗದ ಪ್ರತಿಭೆಗಳು ನಗರ ಮಟ್ಟಕ್ಕೆ ಬರಲು ಎಲ್ಲರೂ ಕೈಜೋಡಿಸಬೇಕು. ಆಯೋಜಕರು ನಡೆಸಿದ ಈ ರೀತಿಯ ಪಂದ್ಯಾವಳಿಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಅವರು ಪ್ರಶಂಸಿಸಿದರು.

ಈ ರೋಚಕ ವಾಲಿಬಾಲ್ ಪಂದ್ಯಾವಳಿಯ ಸಿಟಿ ವಿಭಾಗದಲ್ಲಿ ಉದ್ಯಮಿ ಅಜ್ಮಲ್ ಮಾಲೀಕತ್ವದ ‘ಎ.ಜೆ. ಫ್ರೆಂಡ್ಸ್‌ ರಿಪ್ಪನ್‌ಪೇಟೆ’ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿತು.ದ್ವಿತೀಯ ಸ್ಥಾನವನ್ನು ಅದೈಯ್ ಗುಡ್ಡೆಕೊಪ್ಪ ತನ್ನ ಮುಡಿಗೇರಿಸಿಕೊಂಡಿತು.

ಗ್ರಾಮಾಂತರ ವಿಭಾಗದಲ್ಲಿ ಅತಿಥೇಯ ತಂಡ ಕ್ರೀಡಾಲೋಕ ತಂಡ ಪ್ರಥಮ ಸ್ಥಾನ ಗಳಿಸಿದರೇ , ದ್ವಿತೀಯ ಸ್ಥಾನವನ್ನು ರೆಡ್ಡಿ ಬಾಯ್ಸ್ ತಂಡ ಪಡೆದುಕೊಂಡಿದೆ.

ಸಿಟಿ ವಿಭಾಗದಲ್ಲಿ ಬೆಸ್ಟ್ ಆಲ್ ರೌಂಡರ್ ಸಂಜಯ್ ಹಾಸನ್ , ಬೆಸ್ಟ್ ಅಟ್ಯಾಕರ್ ಉತ್ತಮ್ ಕುಂದಾಪುರ , ಬೆಸ್ಟ್ ಪಾಸರ್ ಸನ್ನಿಧಿ ಕುಂದಾಪುರ , ಬೆಸ್ಟ್ ಬ್ಲಾಕರ್ ಸಮೀರ್ ಭದ್ರಾವತಿ ಪಾಲಾಯಿತು

ಗ್ರಾಮಾಂತರ ವಿಭಾಗದಲ್ಲಿ ಬೆಸ್ಟ್ ಆಲ್ ರೌಂಡರ್ ನಿತೀಶ್ ರಿಪ್ಪನ್ ಪೇಟೆ , ಬೆಸ್ಟ್ ಅಟ್ಯಾಕರ್ ಷಣ್ಮುಖ ರಿಪ್ಪನ್ ಪೇಟೆ , ಬೆಸ್ಟ್ ಪಾಸರ್ ಜಾಹೀರ್ ರಿಪ್ಪನ್ ಪೇಟೆ , ಬೆಸ್ಟ್ ಬ್ಲಾಕರ್ ಅಭಿಶ್ರೇಯಾಂಕ್ ತೀರ್ಥಹಳ್ಳಿ ಪಾಲಾಯಿತು.

​ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಿದ ಹಿರಿಯ ವಾಲಿಬಾಲ್ ಆಟಗಾರರು ಹಾಗೂ ಅಂಪೈರ್‌ಗಳನ್ನು ವಿಆರ್ ಸ್ಪೋರ್ಟ್ಸ್ ಮತ್ತು ಕ್ರೀಡಾಲೋಕ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ವಿಆರ್ ಸ್ಪೋರ್ಟ್ಸ್ ಹಾಗೂ ಕ್ರೀಡಾಲೋಕ ಗೆಳೆಯರ ಬಳಗದ ಅಧ್ಯಕ್ಷ ಪಿ. ರಮೇಶ್, ಕಾರ್ಯದರ್ಶಿ ಹರೀಶ್, ಬಿಜೆಪಿ ತಾಲೂಕು ಅಧ್ಯಕ್ಷ ಎನ್. ಸತೀಶ್, ಪ್ರಮುಖರಾದ ಸುಧೀಂದ್ರ ಪೂಜಾರಿ, ಆರ್. ಟಿ. ಗೋಪಾಲ್, ಸುಂದರೇಶ್ ಕೆರೆಹಳ್ಳಿ, ಕಗ್ಗಲಿ ಲಿಂಗಪ್ಪ, ಮಲ್ಲಿಕಾರ್ಜುನ್, ಸುಧೀರ್ ಪಿ., ಭೀಮಾರಾಜ್, ಉಮೇಶ್ ಹಾಗೂ ಜಯದೇವ್ ಸೇರಿದಂತೆ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

About The Author

Exit mobile version