ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಕೆ
Demand grows for the restoration of Hosanagara Assembly constituency as Suhan Ali submits a memorandum to CM Siddaramaiah highlighting 18 years of developmental neglect.
ಶಿವಮೊಗ್ಗ: ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿಸಿ, ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ನಿವಾಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸುಹಾನ್ ಅಲಿ ಅವರು ಚಿಕ್ಕಮಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಅವರು, 2008ರಲ್ಲಿ ಹೊಸನಗರ ತಾಲೂಕು ತನ್ನ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡ ಬಳಿಕ ಕಳೆದ 18 ವರ್ಷಗಳಿಂದ ಅಭಿವೃದ್ಧಿ ಹಿನ್ನಡೆ ಅನುಭವಿಸುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ಇತರ ರಾಜ್ಯಗಳಲ್ಲಿ ಕೇವಲ 10ರಿಂದ 15 ಸಾವಿರ ಮತದಾರರಿದ್ದರೂ ಪ್ರತ್ಯೇಕ ಕ್ಷೇತ್ರಗಳಿರುವುದನ್ನು ಉದಾಹರಿಸಿದ ಅವರು, ಹೊಸನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತದಾರರು ಹಾಗೂ ಸುಮಾರು 175 ಕಿ.ಮೀ ವ್ಯಾಪ್ತಿಯ ಭೌಗೋಳಿಕ ವಿಸ್ತೀರ್ಣ ಇದ್ದರೂ ಕ್ಷೇತ್ರವಿಲ್ಲದಿರುವುದು ಅನ್ಯಾಯಕರವಾಗಿದೆ ಎಂದು ತಿಳಿಸಿದ್ದಾರೆ.
ಕ್ಷೇತ್ರ ಮರುಸ್ಥಾಪನೆಗಾಗಿ ಇದೇ ತಿಂಗಳ 5 ಮತ್ತು 6ರಂದು 96 ವರ್ಷದ ಹಿರಿಯ ರಾಜಕಾರಣಿ ಬಿ. ಸ್ವಾಮಿರಾವ್ ಅವರ ನೇತೃತ್ವದಲ್ಲಿ ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ 45 ಕಿಲೋಮೀಟರ್ ಪಾದಯಾತ್ರೆ ನಡೆದಿದ್ದು, ಸಾವಿರಾರು ಜನರು ಜಾತಿ-ಧರ್ಮ ಭೇದವಿಲ್ಲದೆ ಭಾಗವಹಿಸಿರುವುದು ಗಮನಾರ್ಹವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇದೇ ವಿಚಾರವಾಗಿ ತಾಲ್ಲೂಕಿನ ಜನಪ್ರತಿನಿಧಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂಸದರು ಹಾಗೂ ಜಿಲ್ಲಾಧಿಕಾರಿಗಳಿಗೆ ಸಹ ಪತ್ರ ಬರೆದಿರುವುದಾಗಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಸಂಬಂಧಪಟ್ಟ ಸಮಿತಿಗೆ ಶಿಫಾರಸು ಮಾಡಿ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.




