POSTMANNEWS

ನೈಜ ಸುದ್ದಿ ನೇರ ಬಿತ್ತರ..

ಕಮಿಷನ್ ಆಸೆಗೆ ಬ್ಯಾಂಕ್ ಖಾತೆ ಮಾರಾಟ: ಶಿವಮೊಗ್ಗದಲ್ಲಿ ₹55 ಕೋಟಿ ಸೈಬರ್ ವಂಚನೆ ಜಾಲ ಪತ್ತೆ , ಚಾಲಕನ ಹಿಂದೆ ಕೋಟ್ಯಾಂತರ ರೂಪಾಯಿಗಳ ಸೈಬರ್ ಸಾಮ್ರಾಜ್ಯ!

Shivamogga cyber crime police bust a massive ₹55 crore cyber fraud involving rented bank accounts. Driver arrested in commission-based scam.

ಶಿವಮೊಗ್ಗ:ಹಣದ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ಸೈಬರ್ ವಂಚಕರಿಗೆ ಒದಗಿಸುತ್ತಿದ್ದ ಭಾರೀ ಜಾಲವೊಂದನ್ನು ಶಿವಮೊಗ್ಗದ ಸೈಬರ್ ಅಪರಾಧ ಠಾಣೆ ಪೊಲೀಸರು ಭೇದಿಸಿದ್ದಾರೆ.

ಈ ಪ್ರಕರಣದಲ್ಲಿ ಶಿವಮೊಗ್ಗದ ತುಂಗಾ ನಗರ ನಿವಾಸಿ ಕೆ. ಶರತ್ ಕುಮಾರ್ ಅಲಿಯಾಸ್ ಗುಂಡ ಎಂಬಾತನನ್ನು ಬಂಧಿಸಲಾಗಿದೆ.

ಚಾಲಕ ವೃತ್ತಿ ಮಾಡುತ್ತಿದ್ದ ಶರತ್ ಕುಮಾರ್, ತನ್ನ ಸ್ನೇಹಿತ ಅಮಿತ್ (ಟೀ ಅಂಗಡಿ ಮಾಲೀಕ) ಸೇರಿದಂತೆ ಹಲವರನ್ನು ಕಮಿಷನ್ ಆಮಿಷಕ್ಕೆ ಒಳಪಡಿಸಿ ಅವರ ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್ ಹಾಗೂ ಮೊಬೈಲ್ ಸಂಖ್ಯೆಗಳನ್ನೂ ಪಡೆದುಕೊಳ್ಳುತ್ತಿದ್ದ. 15 ದಿನಕ್ಕೊಮ್ಮೆ ಕಮಿಷನ್ ನೀಡುವುದಾಗಿ ನಂಬಿಸಿ ಖಾತೆಗಳನ್ನು ಬಳಸಿದ್ದಾನೆ ಎನ್ನಲಾಗಿದೆ.

ಸ್ವಲ್ಪ ಸಮಯದ ಬಳಿಕ ಅಮಿತ್‌ನ ಬ್ಯಾಂಕ್ ಖಾತೆ ಫ್ರೀಜ್ ಆದ ಹಿನ್ನೆಲೆಯಲ್ಲಿ ಅನುಮಾನಗೊಂಡು ಬ್ಯಾಂಕ್‌ಗೆ ವಿಚಾರಿಸಿದಾಗ, ಆ ಖಾತೆ ವಿರುದ್ಧವೇ 51 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿತ್ತು. ಬಳಿಕ ಅಮಿತ್ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಗೊಂಡಿತು.

96ಕ್ಕೂ ಹೆಚ್ಚು ಪ್ರಕರಣ, ₹55.43 ಕೋಟಿ ವಂಚನೆ

ಪೊಲೀಸರು ಆರೋಪಿ ಶರತ್ ಕುಮಾರ್‌ನಿಂದ 18 ಬ್ಯಾಂಕ್ ಪಾಸ್‌ಬುಕ್‌ಗಳು, 25 ಎಟಿಎಂ ಕಾರ್ಡ್‌ಗಳು, 7 ಚೆಕ್ ಬುಕ್‌ಗಳು, 2 ಮೊಬೈಲ್ ಫೋನ್‌ಗಳು ಹಾಗೂ 2 ಕ್ಯೂಆರ್ ಕೋಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ಬಳಿ ಪತ್ತೆಯಾದ 19 ಬಾಡಿಗೆ ಬ್ಯಾಂಕ್ ಖಾತೆಗಳ ವಿರುದ್ಧ ದೇಶಾದ್ಯಂತ 96ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ.

ಈ ಖಾತೆಗಳ ಮೂಲಕ ಸಾರ್ವಜನಿಕರಿಗೆ ಒಟ್ಟು ₹55,43,56,248 ಮೊತ್ತದ ವಂಚನೆ ನಡೆದಿದ್ದು, ಇದರಲ್ಲಿ ₹11,48,42,898 ಹಣ ವರ್ಗಾವಣೆಯಾದ ದಾಖಲೆಗಳು ಲಭ್ಯವಾಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಕಾರ್ಯಪ್ಪ, ರಮೇಶ್, ಸೈಬರ್ ಕ್ರೈಂ ಡಿವೈಎಸ್‌ಪಿ ಕೃಷ್ಣಮೂರ್ತಿ ಹಾಗೂ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಒಬ್ಬನೇ ಅಲ್ಲ, ದೇಶವ್ಯಾಪಿ ಜಾಲ

ಸಾರ್ವಜನಿಕರ ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚಕರಿಗೆ ಒದಗಿಸುವ ಜಾಲ ದೇಶಾದ್ಯಂತ ವ್ಯಾಪಕವಾಗಿದೆ. ರಾಜ್ಯದ ಸೈಬರ್ ಕಮಾಂಡ್ ಘಟಕ ಈಗಾಗಲೇ 14 ಮಂದಿಯನ್ನು ಬಂಧಿಸಿದ್ದು, ನಕಲಿ ಹಾಗೂ ಬಾಡಿಗೆ ಖಾತೆಗಳನ್ನು ಸೃಷ್ಟಿಸುವವರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಪತ್ತೆಯಾದರೆ ಅವರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಪ್ರಣವ್ ಮೊಹಂತಿ ಎಚ್ಚರಿಸಿದ್ದಾರೆ.

2021ರಿಂದ ನಡೆದ ತನಿಖೆಯಲ್ಲಿ ಸುಮಾರು 48,000ಕ್ಕೂ ಹೆಚ್ಚು ಬಾಡಿಗೆ ಬ್ಯಾಂಕ್ ಖಾತೆಗಳು ಅಕ್ರಮ ಚಟುವಟಿಕೆಗೆ ಬಳಸಿರುವುದು ಪತ್ತೆಯಾಗಿದೆ. ಈ ಖಾತೆಗಳ ಮೂಲಕ ಅಂದಾಜು ₹100 ಕೋಟಿ ರೂ.ಗೂ ಅಧಿಕ ಹಣಕಾಸು ವಹಿವಾಟು ನಡೆದಿರುವ ಶಂಕೆ ವ್ಯಕ್ತವಾಗಿದೆ. ಒಂದು ಖಾತೆ ಒದಗಿಸಿದಕ್ಕೆ ₹10,000 ರಿಂದ ₹20,000 ವರೆಗೆ ಹಣ ಪಡೆಯಲಾಗುತ್ತಿದ್ದು, ಪ್ರತಿ ₹1 ಲಕ್ಷ ವರ್ಗಾವಣೆಗೆ ₹3,000 ರಿಂದ ₹5,000 ವರೆಗೆ ಕಮಿಷನ್ ಸಿಗುತ್ತಿತ್ತು. ಕೆಲವರು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ವ್ಯವಸ್ಥಿತ ದಂಧೆ ನಡೆಸುತ್ತಿರುವುದು ತನಿಖೆಯಿಂದ ಬಹಿರಂಗವಾಗಿದೆ.

About The Author

Exit mobile version