Two youths were killed on the spot after a head-on collision between a car and a canter near Ulluru village on Mundigematte Road close to Sagara in Shivamogga district.
ಸಾಗರದ ಉಳ್ಳೂರು ಸಮೀಪ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲಿಯೇ ಸಾವು
ಸಾಗರದ ಸಮೀಪ ಉಳ್ಳೂರು ಗ್ರಾಮದ ಮುಂಡಿಗೆಮಟ್ಟೆ ರಸ್ತೆ ತಿರುವಿನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಹಾಗೂ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಆನಂದಪುರದಿಂದ ಸಾಗರದತ್ತ ಸಾಗುತ್ತಿದ್ದ ಕಾರು ಹಾಗೂ ಎದುರು ದಿಕ್ಕಿನಿಂದ ಆನಂದಪುರದ ಕಡೆಗೆ ತೆರಳುತ್ತಿದ್ದ ಕ್ಯಾಂಟರ್ ನಡುವೆ ರಾತ್ರಿ ಸುಮಾರು 10.30ರ ವೇಳೆಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ಭೀಕರತೆಗೆ ಕಾರು ಸಂಪೂರ್ಣವಾಗಿ ಪುಡಿಪುಡಿಯಾಗಿ ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಸೊರಬ ತಾಲ್ಲೂಕಿನ ಮಳಲಗದ್ದೆ ಗ್ರಾಮದ ನಿವಾಸಿ ಪವಿತ್ರ (25) ತಂದೆ ಚನ್ನಬಸವಪ್ಪ ಹಾಗೂ ಸಾಗರ ತಾಲ್ಲೂಕಿನ ತಡಗಳಲಿ ಗ್ರಾಮದ ನಿವಾಸಿ ವೀರೇಶ್ (25) ತಂದೆ ಸತೀಶ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರು ಇಬ್ಬರೂ ಆಪ್ತ ಸ್ನೇಹಿತರಾಗಿದ್ದು, ಭಾನುವಾರ ಸಂಜೆ ಆನಂದಪುರದಲ್ಲಿ ನಡೆದ ಸ್ನೇಹಿತರೊಬ್ಬರ ಸಮಾರಂಭದಲ್ಲಿ ಭಾಗವಹಿಸಿ, ನಂತರ ಕಾರಿನಲ್ಲಿ ಸಾಗರಕ್ಕೆ ಮರಳುವ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಅಪಘಾತಕ್ಕೆ ಕ್ಯಾಂಟರ್ ಚಾಲಕನ ಅಜಾಗರೂಕ ಚಾಲನೆಯೇ ಕಾರಣವಾಗಿರಬಹುದು ಎಂಬ ಪ್ರಾಥಮಿಕ ಅಂದಾಜು ವ್ಯಕ್ತವಾಗಿದೆ. ಘಟನೆ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
