ANANDAPURA | ಬೈಕ್ ಅಡ್ಡಗಟ್ಟಿ ಮಹಿಳೆ ಮೇಲೆ ಕೊಲೆ ಯತ್ನ: ಇಬ್ಬರು ಆರೋಪಿಗಳ ಬಂಧನ
ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಸಕಲ್ ಬೈಲ್ ಸಮೀಪ ಬೈಕ್ನಲ್ಲಿ ತೆರಳುತ್ತಿದ್ದ ದಂಪತಿಯನ್ನು ತಡೆದು, ಬೈಕ್ನ ಹಿಂಬದಿ ಕುಳಿತಿದ್ದ ಮಹಿಳೆಯನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪಿಎಸೈ ಪ್ರವೀಣ್ ಎಸ್ ಪಿ ನೇತ್ರತ್ವದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ದಿನಾಂಕ 05-01-2026 ರಂದು ಸಂಜೆ ಸುಮಾರು 7.00 ಗಂಟೆಗೆ ನಡೆದಿದ್ದು, ದೂರುದಾರರು ಶೃತಿ ಎಂಬುವವರನ್ನು ಮಸಕಲ್ ಬೈಲ್ ಬಸ್ ನಿಲ್ದಾಣದಿಂದ ಬೈಕ್ನಲ್ಲಿ ಕೂರಿಸಿಕೊಂಡು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಅನಾಮಧೇಯ ವ್ಯಕ್ತಿಯೊಬ್ಬ ಬೈಕ್ಗೆ ಅಡ್ಡವಾಗಿ ನಿಲ್ಲಿಸಿ ದಾಳಿ ನಡೆಸಿದ್ದಾನೆ.
ಆರೋಪಿಗಳು ಮೊದಲು ದೂರುದಾರರ ಮುಖಕ್ಕೆ ಖಾರದ ಪುಡಿ ಎರಚಿ, ತಕ್ಷಣವೇ ಸ್ಟೀಲ್ ರಾಡ್ನಿಂದ ಶೃತಿ ಅವರ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾನೆ.
ಈ ಸಂಬಂಧ ಕೊಲೆ ಯತ್ನ ಆರೋಪ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 309 ಅಡಿಯಲ್ಲಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ್ ಶೆಟ್ಟಿ ಅವರ ನೇತೃತ್ವದಲ್ಲಿ ಕೈಗೊಂಡು, ಶಿವಮೊಗ್ಗ ಸಿಡಿಆರ್ ವಿಭಾಗದ ಪಿಎಸ್ಐ ಪ್ರವೀಣ್ ಎಸ್.ಪಿ ಅವರೊಂದಿಗೆ ಇಂದ್ರೇಶ, ಎಎಸ್ಐ ಗುರು, ಹೆಚ್ಸಿ ಸಿದ್ದರೂಡ, ಪ್ರಶಾಂತ್, ಪರಶುರಾಮ್, ತಾಹಿರ್ ಹಾಗೂ ಪಿಸಿಗಳಾದ ಉಮೇಶ್ ಲಮಾಣಿ ಮತ್ತು ಹರ್ಷ ಅವರನ್ನು ಒಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ತನಿಖೆಯ ಫಲವಾಗಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.



