Categories: Blog

ರಿಪ್ಪನ್‌ಪೇಟೆ ಹೆಸರಿನ ಮೂಲ – ಲಾರ್ಡ್ ರಿಪ್ಪನ್ ಅವರ ಒಳ್ಳೆತನದ ಸ್ಮರಣೆ

ರಿಪ್ಪನ್‌ಪೇಟೆ ಹೆಸರಿನ ಮೂಲ – ಲಾರ್ಡ್ ರಿಪ್ಪನ್ ಅವರ ಒಳ್ಳೆತನದ ಸ್ಮರಣೆ

ಬದಲಾಯಿಸಬೇಕಾಗಿರುವುದು ಊರಿನ ಹೆಸರನ್ನಲ್ಲ .. ಈ ಊರಿನ ವ್ಯವಸ್ಥೆಯನ್ನು..!!!

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಣ್ಯಸೌಂದರ್ಯದಿಂದ ಕಂಗೊಳಿಸುವ ಪಟ್ಟಣಗಳಲ್ಲಿ ಒಂದಾದ ರಿಪ್ಪನ್‌ಪೇಟೆ, ಇತಿಹಾಸ ಮತ್ತು ಸಂಸ್ಕೃತಿಯ ಅದ್ಭುತ ಮಿಶ್ರಣವಾಗಿದೆ. ಈ ಊರಿನ ಹೆಸರಿನ ಹಿಂದಿರುವ ಕಥೆ ಅತ್ಯಂತ ಆಸಕ್ತಿದಾಯಕ. ಜನಪ್ರಚಲಿತವಾದ ನಂಬಿಕೆಯ ಪ್ರಕಾರ, ಈ ಸ್ಥಳಕ್ಕೆ “ರಿಪ್ಪನ್‌ಪೇಟೆ” ಎಂಬ ಹೆಸರು ಬ್ರಿಟಿಷ್ ಕಾಲದ ಲಾರ್ಡ್ ರಿಪ್ಪನ್ ( ಜಾರ್ಜ್ ಫ್ರೆಡೆರಿಕ್ ರಾಬಿನ್ಸನ್ ) ಅವರ ಒಳ್ಳೆಯತನಕ್ಕೆ ಗೌರವಾರ್ಥವಾಗಿ ಬಂದಿತು.

ಲಾರ್ಡ್ ರಿಪ್ಪನ್ (Lord Ripon) ಬ್ರಿಟಿಷರ ಭಾರತದ ವೈಸರಾಯಿಯಾಗಿ 1880 ರಿಂದ 1884ರವರೆಗೆ ಸೇವೆ ಸಲ್ಲಿಸಿದರು. ಆಡಳಿತದಲ್ಲಿ ನ್ಯಾಯ, ಮಾನವೀಯತೆ ಮತ್ತು ಭಾರತೀಯರ ಹಕ್ಕುಗಳಿಗೆ ಒತ್ತು ನೀಡಿದ ಅತ್ಯಂತ ಪ್ರಗತಿಪರ ಬ್ರಿಟಿಷ್ ಅಧಿಕಾರಿಯಾಗಿದ್ದರು. ಅವರ ಕಾಲದಲ್ಲಿ ಭಾರತದಲ್ಲಿ ಹಲವು ಪ್ರಮುಖ ಸಾಮಾಜಿಕ ಹಾಗೂ ಆಡಳಿತಾತ್ಮಕ ಸುಧಾರಣೆಗಳು ಜಾರಿಗೆ ಬಂದವು. ಅವುಗಳಲ್ಲಿ ಪ್ರಮುಖವಾದುದು ಸ್ಥಳೀಯ ಸ್ವಾಯತ್ತ ಆಡಳಿತ (Local Self-Government) ವ್ಯವಸ್ಥೆಯನ್ನು ಪ್ರಾರಂಭಿಸಿದುದು. ಇದರ ಮೂಲಕ ಗ್ರಾಮ, ಪಟ್ಟಣ ಮತ್ತು ನಗರ ಮಟ್ಟದಲ್ಲಿ ಭಾರತೀಯರಿಗೆ ಆಡಳಿತದಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಈ ನೀತಿಯನ್ನು ಇಂದಿಗೂ ಪ್ರಜಾಪ್ರಭುತ್ವದ ನೆಲೆಯಲ್ಲಿ ಪ್ರಮುಖ ಹೆಜ್ಜೆಯೆಂದು ಪರಿಗಣಿಸಲಾಗುತ್ತದೆ.

ಅದೇ ರೀತಿ, ಲಾರ್ಡ್ ರಿಪ್ಪನ್ ಅವರು ಭಾರತೀಯರ ಶಿಕ್ಷಣ, ಪತ್ರಿಕಾ ಸ್ವಾತಂತ್ರ್ಯ ಹಾಗೂ ನ್ಯಾಯಾಂಗ ವ್ಯವಸ್ಥೆಯ ಸಮಾನತೆಯ ಕಡೆಗೂ ಗಮನ ಹರಿಸಿದ್ದರು. “ಇಲ್ಬರ್ಟ್ ಬಿಲ್” (Ilbert Bill) ಎನ್ನುವ ಪ್ರಸ್ತಾವನೆಯ ಮೂಲಕ ಭಾರತೀಯ ನ್ಯಾಯಾಧೀಶರಿಗೆ ಬ್ರಿಟಿಷ್ ಪ್ರಜೆಗಳ ಮೇಲೂ ನ್ಯಾಯ ನಿರ್ವಹಣೆಯ ಅಧಿಕಾರ ನೀಡುವ ಪ್ರಯತ್ನ ಮಾಡಿದ್ದರು. ಈ ಬಿಲ್ ಬ್ರಿಟಿಷರ ಕೋಪಕ್ಕೆ ಕಾರಣವಾದರೂ, ರಿಪ್ಪನ್ ಅವರ ನ್ಯಾಯಪರ ನಿಲುವು ಭಾರತೀಯರಲ್ಲಿ ಅಪಾರ ಗೌರವವನ್ನು ಗಳಿಸಿತು. ಅದೇ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಅವರ ಸ್ಮರಣಾರ್ಥವಾಗಿ ಊರುಗಳ ಅಥವಾ ಬೀದಿಗಳ ಹೆಸರನ್ನು ಇಡಲಾಯಿತು.

ರಿಪ್ಪನ್‌ಪೇಟೆ ಕೂಡ ಅದರಲ್ಲಿ ಒಂದೆಂದು ಹೇಳಲಾಗುತ್ತದೆ. ಆಗ ಈ ಪ್ರದೇಶವು ವ್ಯಾಪಾರ ಮತ್ತು ಸಂಚಾರದ ಪ್ರಮುಖ ತಾಣವಾಗಿದ್ದು, ಬ್ರಿಟಿಷ್ ಅಧಿಕಾರಿಗಳು ಆಗಾಗ್ಗೆ ಈ ಮಾರ್ಗದ ಮೂಲಕ ಸಂಚರಿಸುತ್ತಿದ್ದರು. ಲಾರ್ಡ್ ರಿಪ್ಪನ್ ಅವರ ಆಡಳಿತದ ನಿಷ್ಪಕ್ಷಪಾತ ಧೋರಣೆ ಹಾಗೂ ಭಾರತೀಯರ ಪರವಾದ ಹಾದಿಯನ್ನು ಗಮನಿಸಿದ ಸ್ಥಳೀಯ ಜನತೆ, ಅವರ ಗೌರವಕ್ಕಾಗಿ ಈ ಸ್ಥಳಕ್ಕೆ “ರಿಪ್ಪನ್‌ಪೇಟೆ” ಎಂದು ಹೆಸರು ಇಟ್ಟರು ಎಂಬ ನಂಬಿಕೆ ಇದೆ. “ಪೇಟೆ” ಎಂದರೆ ವ್ಯಾಪಾರ ಕೇಂದ್ರ ಅಥವಾ ಮಾರುಕಟ್ಟೆ ಪ್ರದೇಶ; ಅಂದರೆ “ರಿಪ್ಪನ್‌ಪೇಟೆ” ಎಂದರೆ “ರಿಪ್ಪನ್‌ನ ಮಾರುಕಟ್ಟೆ” ಅಥವಾ “ರಿಪ್ಪನ್‌ನ ಪಟ್ಟಣ” ಎಂಬ ಅರ್ಥ.

ಇತಿಹಾಸದ ದೃಷ್ಟಿಯಿಂದ ಲಾರ್ಡ್ ರಿಪ್ಪನ್ ಅವರ ಕಾಲ ಭಾರತದಲ್ಲಿ ಹೊಸ ಯುಗದ ಪ್ರಾರಂಭವಾಗಿತ್ತು. ಅವರ ಮಾನವೀಯ ನೀತಿಗಳು ನಂತರದ ಭಾರತೀಯ ನಾಯಕರಿಗೂ ಪ್ರೇರಣೆಯಾಗಿದವು. ಹೀಗಾಗಿ, ರಿಪ್ಪನ್‌ಪೇಟೆ ಎಂಬ ಹೆಸರು ಕೇವಲ ಒಂದು ಊರಿನ ಗುರುತು ಮಾತ್ರವಲ್ಲ, ಅದು ನ್ಯಾಯ, ಸೌಹಾರ್ದತೆ ಮತ್ತು ಜನಪರ ಆಡಳಿತದ ಪ್ರತೀಕವಾಗಿದೆ. ಇಂದಿಗೂ ಈ ಊರಿನ ಜನರು “ನಮ್ಮ ಊರಿಗೆ ಬ್ರಿಟಿಷರ ಒಳ್ಳೆಯ ವೈಸರಾಯಿಯ ಹೆಸರಿದೆ” ಎಂಬ ಹೆಮ್ಮೆ ಹೊಂದಿದ್ದಾರೆ.

ಸಮಾಜದ ಬದಲಾವಣೆ ಮತ್ತು ಕಾಲದ ಚಲನವಲನದ ನಡುವೆಯೂ, ರಿಪ್ಪನ್‌ಪೇಟೆ ಹೆಸರಿನಲ್ಲಿ ಅಡಗಿರುವ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ. ಅದು ಲಾರ್ಡ್ ರಿಪ್ಪನ್ ಅವರ ಒಳ್ಳೆಯತನದ ಸ್ಮಾರಕವಷ್ಟೇ ಅಲ್ಲ, ಮಾನವೀಯ ಮೌಲ್ಯಗಳು ಕಾಲಾಂತರಕ್ಕೂ ಜೀವಂತವಾಗಿರಬಹುದೆಂಬ ನಿದರ್ಶನವಾಗಿದೆ.

ಆದರೆ ಕೆಲವರ ಪ್ರಕಾರ ರಿಪ್ಪನ್ ಪೇಟೆ ಅನ್ನುವುದು ದಾಸ್ಯದ ಹೆಸರು ಬ್ರಿಟಿಷ್ ರು ಇಟ್ಟಂತಹ ಹೆಸರು ಇತಿಹಾಸವನ್ನು ತಿಳಿಯದೇ ಯಾರೋ ಹೇಳಿದ್ದರು ಅಂತ ಹೆಸರು ಬದಲಾಯಿಸಬೇಕು ಅಂತ ಹೊರಟಿದ್ದಾರೆ ಆದರೆ ಇದರಿಂದ ಆಗುವ ತೊಂದರೆ?

ಹೆಸರೇ ಇಲ್ಲದ ಒಂದ ಕಾಲ್ಪನಿಕ ಊರಿನ ವೃತ್ತಕ್ಕೆ ಊರಿನ ಪ್ರಮುಖರು ರಿಪ್ಪನ್ ಪೇಟೆ ಎಂದು ನಾಮಕರಣ ಮಾಡುತ್ತಾರೆ ಅಂದರೆ ಅದು ಸಾಮಾನ್ಯ ವಿಷಯವೇ ನೀವೇ ಹೇಳಿ ನೋಡಿ ..!ಬ್ರಿಟಿಷ್ ದಾಸ್ಯದ ಸಂಕೋಲೆಯಿಂದ ಪ್ರತಿಷತ ತೊಂಭತ್ತೆಂಟು ಭಾಗ ನಾವು ಮಾನಸೀಕವಾಗಿ ಜರ್ಝರಿತರಾಗಿದ್ದೇವೆ ಆದರೆ ಕೇವಲ ಎರಡು ಪ್ರತಿಶತ ಖುಷಿ ಕೂಡಾ ಪಟ್ಟಿದ್ದೇವೆ ಆ ಎರಡು ಪ್ರತಿಶತದಲ್ಲಿ ‘ಲಾರ್ಡ್ ರಿಪ್ಪನ್’ ಕೂಡಾ ಒಬ್ಬರು ಏನೇ ಹೇಳಿ ನನ್ನ ಇತಿಹಾಸದ ಮಾಹಿತಿ ಪ್ರಕಾರ 1880-84 ರ ಅಲ್ಪ ಅವದಿಯಲ್ಲಿ ಜನಾನುರಾಗಿ ಆಗಿದ್ದ ಲಾರ್ಡ್ ರಿಪ್ಪನ್ ರನ್ನು ಬ್ರಿಟಿಷ್ ಸರ್ಕಾರ ವಾಪಾಸ್ ಕರೆಸಿಕೊಳ್ಳುತ್ತದೆ.

ರಿಪ್ಪನ್ ಭಾರತೀಯರ ಪರವಾದ ಕೆಲವೇ ಬ್ರಿಟಿಷ್ ವೈಸ್ ರಾಯ್ ಗಳಲ್ಲಿ ಒಬ್ಬ. ಭಾರತೀಯ ನ್ಯಾಯಾಧೀಶರು ಯುರೋಪಿಯನ್ನರನ್ನು ವಿಚಾರಣೆ ಮಾಡುವ ilbert bill, ಬಂಗಾಳದ ರೈತರ ಹಿತ ಕಾಯಲು Bengal tenency act,ಹಿಂದಿನ ವೈಸ್ರಾಯ್ ಲಿಟ್ಟನ್ ಭಾರತೀಯ ಪತ್ರಿಕೆಗಳ ದಮನಕ್ಕೆ ಜಾರಿಗೆ ತಂದಿದ್ದ vernacular press act ಹಿಂದೆ ಪಡೆದದ್ದು…ಹೀಗೆ ಹಲವಾರು…ಬ್ರಿಟೀಷ್ ಅಂದಾಕ್ಷಣ ಎಲ್ಲರೂ ಕೆಟ್ಟವರಾಗಿರಲಿಲ್ಲ….

ದಯಮಾಡಿ ಆಲೋಚಿಸಿ ನಂತರ ಮುಂದುವರೆಯುವುದು ಉತ್ತಮ , ಹೆಸರು ಬದಲಾವಣೆಗಿಂತ ರಿಪ್ಪನ್ ಪೇಟೆಯ ಮೂಲ ಸೌಲಭ್ಯ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವುದು ಒಳ್ಳೆಯದು..

ಬದಲಾಯಿಸಬೇಕಾಗಿರುವುದು ಹೆಸರನ್ನಲ್ಲ.. ಈ ಊರಿನ ವ್ಯವಸ್ಥೆಯನ್ನು , ಬನ್ನಿ ಹಲವಾರು ವರ್ಷಗಳ ಬೇಡಿಕೆಯಾದ ಸುಸಜ್ಜಿತ ಬಸ್ ನಿಲ್ದಾಣ , ಸಮುದಾಯ ಆಸ್ಪತ್ರೆಗೆ ಹೋರಾಡೋಣ , ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೇರಿಸಲು ಹೋರಾಡೋಣ, ಪಶು ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ ಆ ಬಗ್ಗೆ ಹೋರಾಡೋಣ , ಜಿಲ್ಲೆಯ ಅತಿದೊಡ್ಡ ಕ್ರೀಡಾಂಗಣ ಚಿನ್ನೆಗೌಡ ಕ್ರೀಡಾಂಗಣ ಅದರ ಅಭಿವೃದ್ದಿಗೆ ಹೋರಾಡೋಣ , ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಬಗ್ಗೆ , ಹೀಗೆ ಹಲವಾರು ಸಮಸ್ಯೆಗಳಿವೆ ಈ ಬಗ್ಗೆ ಹೋರಾಡೋಣ….!

ಕೊನೆಯಲ್ಲಿ ನಮ್ಮ ಜೀವನದಲ್ಲಿ ನಮ್ಮದೇ ಅನ್ನುವ ಹೃದಯದಲ್ಲಿ ಶಾಶ್ವತವಾದ ಸ್ಥಾನ ಪಡೆದ “ರಿಪ್ಪನ್ ಪೇಟೆ” ಹೆಸರನ್ನು ಬದಲಾಯಿಸುವ ವಿಚಾರದಲ್ಲಿ ದಯಮಾಡಿ ಯಾರು ಕನಸಿನಲ್ಲಿ ಕೂಡಾ ಯೋಚಿಸಬೇಡಿ….!!

  • ರಫ಼ಿ ರಿಪ್ಪನ್‌ಪೇಟೆ

ಲಾರ್ಡ್ ರಿಪ್ಪನ್ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ ಓದಿ

https://rafiripponpet.blogspot.com/2025/10/lord-rippon.html

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ

ಸಾಗರದ ಇಂದಿರಗಾಂಧಿ ಕಾಲೇಜಿನ ಸೀಮಾ ಕೌಸರ್ ಗೆ ಪಿಎಚ್.ಡಿ ಪದವಿ Seema Kausar, Head and Associate Professor of…

13 hours ago

ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ

ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪಿಯು ಕಾಲೇಜು ಪ್ರಾಂಶುಪಾಲರ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಪ್ರಕರಣ Shivamogga police have registered…

13 hours ago

ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್‌ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ

ಕಾರ್ಮಿಕರ ಕಾರ್ಡ್ ಹೆಸರಿನಲ್ಲಿ ವಂಚನೆ ಆರೋಪ: ರಿಪ್ಪನ್‌ಪೇಟೆಯಲ್ಲಿ ಕಾರ್ಮಿಕರ ಆಕ್ರೋಶ Workers in Ripponpete allege money was collected…

13 hours ago

ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ –  ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್ ಕತ್ತರಿಸಬೇಕೋ?

ಹುಂಚದ ಶವಾಗಾರಕ್ಕೆ 6 ವರ್ಷವಾದರೂ ಉದ್ಘಾಟನೆ ಭಾಗ್ಯ ಇಲ್ಲ –  ಮುಹೂರ್ತ ಸಿಕ್ಕಿಲ್ಲವೋ, ಅಥವಾ ಸತ್ತವರೇ ಎದ್ದು ಬಂದು ರಿಬ್ಬನ್…

16 hours ago

ಈದ್ ಮಿಲಾದ್ ಹಬ್ಬ ಶಾಂತಿಯುತ ಆಚರಣೆಗೆ ಪೊಲೀಸ್ ಸೂಚನೆ: ಸೌಹಾರ್ದತೆ ಕಾಪಾಡಲು ಪಿಎಸ್‌ಐ ರಾಜುರೆಡ್ಡಿ ಕರೆ

ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪಿಎಸ್‌ಐ ರಾಜುರೆಡ್ಡಿ ಕರೆ Ripponpete PSI Rajureddy appeals for peaceful and…

19 hours ago

13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ

13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೈಕ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ Bhadravati New Town Police have arrested a…

20 hours ago