23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವರದಕ್ಷಿಣೆ ಪ್ರಕರಣದ ಆರೋಪಿ ಬಂಧನ
ಹೊಸನಗರ : ವರದಕ್ಷಿಣೆ ಕಾಯ್ದೆ ಪ್ರಕರಣದಲ್ಲಿ ಕಳೆದ 23 ವರ್ಷಗಳಿಂದ ನ್ಯಾಯಾಲಯದ ಮೊರೆ ಹೋಗದೆ ತಲೆಮರೆಸಿಕೊಂಡಿದ್ದ ಹೊಸನಗರ ಮೂಲದ ಆರೋಪಿ ಕೊನೆಗೂ ಕಾನೂನು ಬಲೆಗೆ ಸಿಕ್ಕಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪಿಗೆ ನಿವಾಸಿ ನಾಸೀರ ಖಾನ್ (52) ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿತನ ವಿರುದ್ಧ 2002ರಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದಡಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣ ದಾಖಲಾದ ನಂತರ ನ್ಯಾಯಾಲಯಕ್ಕೆ ಹಾಜರಾಗದೆ, ಕಳೆದ ಎರಡು ದಶಕಗಳಿಂದ ಪರಾರಿಯಾಗಿದ್ದಾನೆ.
ಆರೋಪಿಯ ಪತ್ತೆಗೆ ವಿಶೇಷ ತಂತ್ರ ರೂಪಿಸಿದ ಗಂಗೊಳ್ಳಿ ಠಾಣಾ ಸಿಬ್ಬಂದಿ ಕೃಷ್ಣ, ಪ್ರಸನ್ನ, ಸಂದೀಪ್ ಕುರಾಣಿ ಹಾಗೂ ಮಹಾಲಿಂಗರಾಯ ಇತ್ತೀಚೆಗೆ ಸಾಗರ ತಾಲೂಕಿನ ಆನಂದಪುರದಲ್ಲಿ ಗುಪ್ತ ಕಾರ್ಯಾಚರಣೆ ನಡೆಸಿ ಅವನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ನಂತರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿ ನಾಸೀರ ಖಾನ್ ಕಳೆದ ಹಲವು ವರ್ಷಗಳಿಂದ ವಿವಿಧ ಕಡೆ ಓಡಾಡುತ್ತಾ ಪತ್ತೆಗೆ ಸಿಕ್ಕದೆ ತಪ್ಪಿಸಿಕೊಂಡಿದ್ದ. ಅಂತಿಮವಾಗಿ ಪೊಲೀಸರು ನಿಖರ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದು, 23 ವರ್ಷಗಳ ನಂತರ ಕಾನೂನಿನ ಬಲೆಗೆ ಬಿದ್ದಿದ್ದಾನೆ.