ವಾಟ್ಸಾಪ್ ಗೆ ಬಂದ ಮೆಸೇಜ್ ನಂಬಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ
ಶಿವಮೊಗ್ಗ : ಜು. 9: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂಬ ವಾಟ್ಸಾಪ್ ಗೆ ಬಂದ ವಂಚಕರ ಸಂದೇಶ ನಂಬಿದ ವ್ಯಕ್ತಿಯೋರ್ವರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಬಿ ಬಿ ರಸ್ತೆಯ ನಿವಾಸಿ, 30 ವರ್ಷ ವಯೋಮಾನದ ವ್ಯಕ್ತಿಯೇ ವಂಚನೆಗೊಳಗಾದವರೆಂದು ಗುರುತಿಸಲಾಗಿದೆ. ಒಟ್ಟಾರೆ 34,16,000 ರೂ.ಗಳನ್ನು ಸೈಬರ್ ವಂಚಕರು ವಂಚಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭಾಂಶ ಬರುತ್ತದೆ ಎಂಬ ಸಂದೇಶ ಪಿರ್ಯಾದುದಾರರ ಮೊಬೈಲ್ ಫೋನ್ ವಾಟ್ಸಾಪ್ ಗೆ ಬಂದಿತ್ತು.
ಇದನ್ನು ನಂಬಿದ ಪಿರ್ಯಾದುದಾರರು ವಿವಿಧ ಹಂತಗಳಲ್ಲಿ ವಂಚಕರ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ಮೂಲಕ ಹಣ ಸಂದಾಯ ಮಾಡಿದ್ದಾರೆ. ನಂತರ ಹೂಡಿಕೆ ಮಾಡಿದ ಹಣವು ನೀಡದೆ, ಲಾಭಾಂಶವೂ ಕೊಡದೆ ವಂಚಿಸಲಾಗಿದೆ ಎಂದು ಪಿರ್ಯಾದುದಾರರು ಸಿಇಎನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.